ಸಾವಿನಲ್ಲೂ ಮಾನವೀಯತೆ ಮೆರೆದ ಕೆಎಸ್ಆರ್ಟಿಸಿ ಚಾಲಕ: ಹೃದಯಾಘಾತವಾದರೂ ಬಸ್ ನಿಲ್ಲಿಸಿ ಪ್ರಯಾಣಿಕರ ರಕ್ಷಣೆ!
ಹೃದಯಾಘಾತವಾಗಿ ಪ್ರಾಣ ವೇದನೆ ಅನುಭವಿಸುತ್ತಿರುವಾಗಲೂ ತಾನು ಚಲಾಯಿಸುತ್ತಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರ ಜೀವದ ಬಗ್ಗೆ ಮಿಡಿದ ಕೆಎಸ್ಆರ್ಟಿಸಿ ರಾಜಹಂಸ ಬಸ್ ಚಾಲಕ ರಾಜೀವ್ ಬಿರಾದಾರ್ (50) ಬಸ್ಸನ್ನು ನಿಲ್ಲಿಸಿ ಜೀವ ಬಿಟ್ಟಿದ್ದಾರೆ. ಹೆದ್ದಾರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಚಾಲಕ ಉಸಿರುಚೆಲ್ಲಿರುವುದಕ್ಕೆ ಪ್ರಯಾಣಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಗೆ ಕಂಬನಿಯ ಕೃತಜ್ಞತೆ ಅರ್ಪಿಸಿದ್ದಾರೆ.
ನೆಲಮಂಗಲ, ಸೆಪ್ಟೆಂಬರ್ 16: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ಚಾಲಕರೊಬ್ಬರು ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ್ದಾರೆ. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ. ಉತ್ತರ ಕರ್ನಾಟಕ ಮೂಲದ ರಾಜೀವ್ ಬಿರಾದಾರ್ (50) ಬೆಂಗಳೂರಿಂದ ಹರಿಹರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ರಾಜಹಂಸ ಬಸ್ ಚಲಾಯಿಸುತ್ತಿದ್ದರು. ನೆಲಮಂಗಲದ ಜಾಸ್ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಸಮಯಪ್ರಜ್ಞೆ ಮೆರೆದ ಅವರು ತಕ್ಷಣವೇ ಬಸ್ಸನ್ನು ಹೆದ್ದಾರಿಯಲ್ಲಿ ಒಂದು ಬದಿಯಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಸಂಭಾವ್ಯ ಅಪಘಾತ ತಪ್ಪಿದ್ದು, ಪ್ರಯಾಣಿಕರು ಬಚಾವಾಗಿದ್ದಾರೆ. ಕೂಡಲೇ ಆ್ಯಂಬುಲೆನ್ಸ್ಗೆ ಕರೆ ಮಾಡಲಾಯಿತಾದರೂ, ಅದು ಸ್ಥಳಕ್ಕೆ ಬರುವ ವೇಳೆಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ರಾಜೀವ್ ಬಿರಾದಾರ್ ಅಸುನೀಗಿದರು. ಪ್ರಾಣ ಹೋಗುವ ನೋವಿನಲ್ಲೂ ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕನಿಗೆ ಜನ ಕಂಬನಿ ಮಿಡಿದಿದ್ದಾರೆ.

