ಡಿಕೆಶಿ ಬಳಿ ದೆಹಲಿಗೆ ಬನ್ನಿ ಎಂದಿದ್ದರೂ ರಾಹುಲ್ ಗಾಂಧಿ ಸಿಗೋದು ಅನುಮಾನ: ಕಾಂಗ್ರೆಸ್ನಲ್ಲಿ ಸದ್ಯಕ್ಕಿಲ್ಲ ಕ್ರಾಂತಿ!
ರಾಹುಲ್ ಗಾಂಧಿ ‘ಕಮ್ ಟು ದೆಹಲಿ’ ಎಂದರೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಭೇಟಿ ಕಷ್ಟಕರವಾಗಿದೆ. ಮುಖ್ಯಮಂತ್ರಿಗಳು ವಿಶೇಷ ಅಧಿವೇಶನ ಕರೆದಿರುವುದು ಅವರ ದೆಹಲಿ ಭೇಟಿಗೆ ಅಡ್ಡಿಯಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದು, ಸಮಸ್ಯೆ ಪರಿಹಾರ ಅನಿಶ್ಚಿತವಾಗಿದೆ.
ಬೆಂಗಳೂರು, ಜನವರಿ 15: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದೆಹಲಿ ಭೇಟಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ವಿಷಯದಲ್ಲಿ ಅನಿಶ್ಚಿತತೆ ಮುಂದುವರಿದಿದೆ. ರಾಹುಲ್ ಗಾಂಧಿ ಅವರು ‘ಕಮ್ ಟು ದೆಹಲಿ’ ಎಂದು ಡಿಕೆ ಶಿವಕುಮಾರ್ ಜತೆ ಹೇಳಿದ್ದರೂ, ಅವರ ಭೇಟಿ ಸವಾಲಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರು ಜರ್ಮನ್ ಚಾನ್ಸಲರ್ ಭೇಟಿ ತಪ್ಪಿಸಿಕೊಂಡಾದರೂ ಮೈಸೂರಿಗೆ ತೆರಳಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದರು. ಮತ್ತೊಂದೆಡೆ, ವಿಶೇಷ ಅಧಿವೇಶನವನ್ನು ಕರೆಯಲಾಗಿದ್ದು, ಆ ಸಮಯದಲ್ಲಿ ದೆಹಲಿ ಭೇಟಿ ಸಾಧ್ಯವಾಗದು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುವ ನಿರೀಕ್ಷೆಯಿದೆ, ಆದರೆ ರಾಹುಲ್ ಗಾಂಧಿಯವರು ವಿದೇಶ ಪ್ರವಾಸಕ್ಕೆ ತೆರಳುವ ಸಾಧ್ಯತೆಗಳ ಬಗ್ಗೆಯೂ ವರದಿಯಾಗಿದೆ. ಹೈಕಮಾಂಡ್ನಿಂದ ಯಾವುದೇ ಸ್ಪಷ್ಟ ನಿರ್ಧಾರವಿಲ್ಲದೆ, ನಾಯಕತ್ವ ಬದಲಾವಣೆ ವಿಚಾರದಲ್ಲಿ ಗೊಂದಲಗಳು ಮುಂದುವರಿದಿವೆ.
