ಕಬಿನಿ ಜಲಾಶಯಕ್ಕೆ ರೈತರ ಮುತ್ತಿಗೆ: ತಮಿಳುನಾಡಿಗೆ ನೀರು ಹರಿಸುವುದಕ್ಕೆ ತೀವ್ರ ಆಕ್ರೋಶ!
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ. ಕಬಿನಿ ಡ್ಯಾಂ ನೀರಿನ ಮಟ್ಟ 72 ಅಡಿಗೆ ಕುಸಿದಿದ್ದರೂ ಪ್ರತಿನಿತ್ಯ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಲು ಆಗ್ರಹಿಸಿದ್ದಾರೆ.
ಮೈಸೂರು, ಸೆಪ್ಟೆಂಬರ್ 01: ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಸಂಪೂರ್ಣ ಭರ್ತಿಯಾಗಿದ್ದ ಡ್ಯಾಂನಿಂದ ಪ್ರತಿನಿತ್ಯ 8,000 ಕ್ಯೂಸೆಕ್ ನೀಡಿದ್ದರಿಂದ ನೀರಿನ ಮಟ್ಟ 84 ಅಡಿಯಿಂದ 72 ಅಡಿಗೆ ಕುಸಿದಿದೆ. ಒಳಹರಿವು ಕೇವಲ 4,500 ಕ್ಯೂಸೆಕ್ಸ್ಗೆ ತಗ್ಗಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ಧರಣಿನಿರತರು ಆಕ್ರೋಶ ಹೊರಹಾಕಿದ್ದಾರೆ. ಜಲಾಶಯದ ಮುಂಭಾಗ ಧರಣಿ ಕುಳಿತ ರೈತರು, ತಹಶೀಲ್ದಾರ್ ಶ್ರೀನಿವಾಸ್ ಹಾಗೂ ಎಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯ ಸರ್ಕಾರ ತಮಿಳುನಾಡಿಗೆ ಮಣಿಯುವುದನ್ನು ನಿಲ್ಲಿಸಿ ತಕ್ಷಣವೇ ನೀರು ಹರಿಸುವುದನ್ನು ತಡೆಯಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

