ತುಂಗಭದ್ರಾ ಜಲಾಶಯದ ಹಿನ್ನೀರ ಬಳಿ ಮಕ್ಕಳ ಜೊತೆ ಪೋಷಕರ ಮಕ್ಕಳಾಟ, ಅಪಾಯದ ಅರಿವಿದ್ದರೂ ಹುಚ್ಚಾಟ

ಅರುಣ್​ ಕುಮಾರ್​ ಬೆಳ್ಳಿ

Updated on: Jul 07, 2025 | 10:33 AM

ಜಲಾಶಯದಲ್ಲಿ ನೀರಿನ ರಭಸವನ್ನು ವಿಡಿಯೋದಲ್ಲಿ ನೋಡಿ ಗೊತ್ತು ಮಾಡಿಕೊಳ್ಳಬಹುದು. ದೂರದಿಂದ ನೋಡಿದರೆ ಈ ದೃಶ್ಯ ನಿಜಕ್ಕೂ ರುದ್ರರಮಣೀಯ. ಇಲ್ಲಿರೋದು ಚಿಕ್ಕಪುಟ್ಟ ಮಕ್ಕಳು. ಅವರಿಗೆ ನೀರಿನ ಅಪಾಯಗಳ ಬಗ್ಗೆ ಗೊತ್ತಿರಲಾರದು. ಸುಮಾರು ಎರಡು ವರ್ಷದ ಒಂದು ಹೆಣ್ಣುಪಾಪುವನ್ನು ನೋಡಿ, ಅದು ನೀರಿಗೆ ಹತ್ತಿರ ನಿಂತು ಕುಣಿಯುತ್ತಿದೆ. ಅಪಾಯ ಮುನ್ಸೂಚನೆ ನೀಡದೆ ಬರುತ್ತದೆ ಅಂತ ಪೋಷಕರಿಗೆ ಗೊತ್ತಿಲ್ಲದಿರೋದು ದುರ್ದೈವದ ಸಂಗತಿ.

ಕೊಪ್ಪಳ, ಜುಲೈ 7: ನಮ್ಮ ಜನಕ್ಕೆ ಬುದ್ಧಿ ಹೇಳೋದು ಕೋಣದ ಮುಂದೆ ಕಿನ್ನರಿ ಬಾರಿಸಿದಂಗೆ ಮಾರಾಯ್ರೇ, ಇದು ಮೂರ್ಖತನ ಮತ್ತು ಬೇಜವಾಬ್ದಾರಿಯ ಪರಮಾವಧಿಯಲ್ಲದೆ ಮತ್ತೇನು? ಜಿಲ್ಲೆಯ ಮುನಿರಾಬಾದ್​ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರಲ್ಲಿ ಕಂಡುಬಂದ ದೃಶ್ಯವಿದು. ಜಲಾಶಯ (reservoir) ತುಂಬಿದೆ, ಮತ್ತು ಅದರ ಕ್ರಸ್ಟ್​ಗೇಟ್ ಗಳ ಸಾಮರ್ಥ್ಯದ ಬಗ್ಗೆ ಅನೇಕ ಪ್ರಶ್ನೆ ಎದ್ದಿರುವ ಕಾರಣ ನೀರನ್ನು ಹರಿಬಿಡಲಾಗುತ್ತಿದೆ. ಇಲ್ಲಿಗೆ ಮಕ್ಕಳನ್ನು ಕರೆತಂದಿರುವ ಪೋಷಕರು ಅವರನ್ನು ನೀರಿನಲ್ಲಿ ಇಳಿಸಿ ಇಲ್ಲವೇ ನೀರಿನ ಬಳಿ ಕರೆದೊಯ್ದು ಫೋಟೋ ತೆಗೆಯುವ ಹುಚ್ಚಾಟ ಮಾಡುತ್ತಿದ್ದಾರೆ. ಸುತ್ತಮುತ್ತ ಪೊಲೀಸರಾಗಲೀ ಟಿಬಿ ಡ್ಯಾಂ ಅಧಿಕಾರಿಗಳಾಗಲೀ ಇಲ್ಲದಿರುವುದು ಮತ್ತೂ ಆತಂಕ ಮೂಡಿಸುವ ಸಂಗತಿ.

ಇದನ್ನೂ ಓದಿ:  ತುಂಗಭದ್ರಾ ಜಲಾಶಯದಲ್ಲಿ ಹರಿದು ಬರುತ್ತಿದೆ ದಿನಕ್ಕೊಂದು ಟಿಎಂಸಿ ನೀರು, ರೈತರಲ್ಲಿ ಸಂತಸ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.