ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು; ಆಮೇಲೇನಾಯ್ತು?
ಮನೆಯಲ್ಲಿ ಒಂಟಿಯಾಗಿದ್ದಾಗ ಮೂರನೇ ಮಹಡಿಯ ಕಿಟಕಿಯಿಂದ ನೇತಾಡುತ್ತಿದ್ದ ಮಗುವನ್ನು ರಕ್ಷಿಸಿದ ಪುಣೆ ಅಗ್ನಿಶಾಮಕ ದಳದ ಸಿಬ್ಬಂದಿ ಯೋಗೇಶ್ ಅರ್ಜುನ್ ಚವಾಣ್ ಅವರ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ, ನೆರೆಮನೆಯ ಉಮೇಶ್ ಸುತಾರ್ ಅವರು ಆ ಮಗುವನ್ನು ಕಂಡು ಕಿರುಚಿದಾಗ ಅದೇ ಕಟ್ಟಡದಲ್ಲಿ ವಾಸವಾಗಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಅರ್ಜುನ್ ಬೀಗ ಹಾಕಿದ ಮೂರನೇ ಮಹಡಿಯ ಫ್ಲಾಟ್ನ ಕಿಟಕಿಯಲ್ಲಿ ಅನಿಶ್ಚಿತವಾಗಿ ಸಿಲುಕಿಕೊಂಡಿದ್ದ ಮಗುವನ್ನು ಕಾಪಾಡಿದ್ದಾರೆ.
ಪುಣೆ, ಜುಲೈ 8: ಮಹಾರಾಷ್ಟ್ರದ ಪುಣೆಯಲ್ಲಿ ಇಂದು ಮುಂಜಾನೆ ನಾಟಕೀಯ ಘಟನೆಯೊಂದು ನಡೆದಿದೆ. ಅಪ್ಪ-ಅಮ್ಮ ತಮ್ಮ 4 ವರ್ಷದ ಮಗಳನ್ನು ಮನೆಯಲ್ಲಿ ಬಿಟ್ಟು ಹೊರಗೆ ಹೋಗಿದ್ದರು. ಈ ವೇಳೆ ಆ ಬಾಲಕಿ ತಮ್ಮ ರೂಮಿನ ಕಿಟಕಿಯ ಸರಳಿನೊಳಗೆ ನುಸುಳಿ ಹೊರಗೆ ಬಂದಿದ್ದಾಳೆ. 3ನೇ ಮಹಡಿಯ ಕಿಟಕಿಯಿಂದ ಮಗು ನೇತಾಡುತ್ತಿರುವುದನ್ನು ಕಂಡ ಪಕ್ಕದ ಮನೆಯವರು ಜೋರಾಗಿ ಕೂಗಿದ್ದಾರೆ. ಅದೇ ಕಟ್ಟಡದಲ್ಲಿ ವಾಸವಾಗಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಇದೀಗ ರಜೆಯಲ್ಲಿದ್ದರೂ ತಕ್ಷಣ ಓಡಿಹೋಗಿ ಆ ಬಾಲಕಿಯ ಜೀವ ಉಳಿಸಿದ್ದಾರೆ.
ಮನೆಗೆ ಬೀಗ ಹಾಕಿದ್ದರಿಂದ ಒಳಗೆ ಹೋಗಿ ಆ ಮಗುವನ್ನು ಕಾಪಾಡಲು ಸಾಧ್ಯವಿರಲಿಲ್ಲ. 3ನೇ ಮಹಡಿಯಾದ್ದರಿಂದ ಆ ಮಗು ಕೆಳಗೆ ಬಿದ್ದು ಸಾಯುವ ಅಪಾಯವೂ ಇತ್ತು. ಅದೇವೇಳೆ ಹೊರಗೆ ಹೋಗಿದ್ದ ಆ ಮಗುವಿನ ತಾಯಿ ಬಂದಿದ್ದರಿಂದ ಮನೆಯೊಳಗೆ ಹೋದ ಅರ್ಜುನ್ ಆ ಮಗುವನ್ನು ಸುರಕ್ಷಿತವಾಗಿ ಒಳಗೆ ಎಳೆದುಕೊಂಡು ಕಾಪಾಡಿದ್ದಾರೆ. ಅವರ ಸಮಯಪ್ರಜ್ಞೆಯಿಂದ ಮಗು ಬದುಕುಳಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ