ಹಿಂದಿ ಬದಲು ಇಂಗ್ಲಿಷ್ ಭಾಷಣ; ಭಯೋತ್ಪಾದನೆ ವಿರುದ್ಧ ಜಗತ್ತಿಗೆ ಸಂದೇಶ ರವಾನಿಸಿದ ಪ್ರಧಾನಿ ಮೋದಿ
ತಮ್ಮ ಭಾಷಣಗಳಲ್ಲಿ ಹಿಂದಿ ಮತ್ತು ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಸಾಮಾನ್ಯವಾಗಿ ಬಳಸುವ ಪ್ರಧಾನಿ ನರೇಂದ್ರ ಮೋದಿ, ಪಹಲ್ಗಾಮ್ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ ಎಂದು ಬಿಹಾರದಲ್ಲಿ ನಡೆದ ರ್ಯಾಲಿಯಲ್ಲಿ ಇಂಗ್ಲಿಷ್ನಲ್ಲಿ ಮಾತನಾಡಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಹೋರಾಡುವ ಭಾರತದ ಸಂಕಲ್ಪದ ಬಗ್ಗೆ ಜಗತ್ತು ತಿಳಿಯಬೇಕೆಂದು ಅವರು ಇಂಗ್ಲಿಷ್ ಬಳಸಿದ್ದಾರೆ.
ನವದೆಹಲಿ, ಏಪ್ರಿಲ್ 24: ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಾಮಾನ್ಯವಾಗಿ ಹಿಂದಿಯಲ್ಲೇ ಭಾಷಣ ಮಾಡೋದು. ಕೆಲವು ರಾಜ್ಯಗಳಿಗೆ ಹೋದಾಗ ಅಲ್ಲಿಯ ಪ್ರಾದೇಶಿಕ ಭಾಷೆಯ ಒಂದೆರಡು ಸಾಲುಗಳನ್ನು ಹೇಳೋ ಮೂಲಕ ಭಾಷಣವನ್ನು ಆರಂಭಿಸುತ್ತಿದ್ದರು ಎಂಬುದನ್ನು ಬಿಟ್ಟರೆ ಅವರು ವಿದೇಶಕ್ಕೆ ಹೋದಾಗಲೂ ಹಿಂದಿಯಲ್ಲೇ ಭಾಷಣ ಮಾಡುವವರು. ಆದರೆ, ಭಯೋತ್ಪಾದಕತೆಯ ವಿರುದ್ಧ ಭಾರತದ ನಿಲುವೇನು ಎಂಬುದನ್ನು ಜಗತ್ತಿನ ಎಲ್ಲ ದೇಶಗಳಿಗೆ ಸ್ಪಷ್ಟವಾಗಿ ತಿಳಿಸುವ ಉದ್ದೇಶದಿಂದ ಬಿಹಾರದ ಕಾರ್ಯಕ್ರಮದಲ್ಲಿ ಇಂದು ಮೋದಿ ಮಾಡಿದ ಭಾಷಣದ ಅಂತ್ಯದಲ್ಲಿ ಹಿಂದಿಯ ಬದಲು ಇಂಗ್ಲಿಷ್ನಲ್ಲಿ ಮಾತನಾಡಿದ್ದಾರೆ.
ಅಂತರರಾಷ್ಟ್ರೀಯ ವೇದಿಕೆಗಳಲ್ಲಿಯೂ ಹಿಂದಿಯನ್ನು ಬಳಸುವ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆಯ ವಿರುದ್ಧದ ತಮ್ಮ ಬಲವಾದ ಸಂದೇಶದ ಒಂದು ಪದವನ್ನು ಕೂಡ ಜಗತ್ತು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಇಂದು ಹಿಂದಿಯ ಬದಲು ಇಂಗ್ಲಿಷ್ ಬಳಸಿ ಮಾತನಾಡಿದ್ದಾರೆ. ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ ಮತ್ತು ಶಿಕ್ಷಿಸುತ್ತದೆ. ಉಗ್ರರನ್ನು ಹುಡುಕಿ ಹುಡುಕಿ ಹಿಡಿಯುತ್ತೇವೆ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ