ಸಿದ್ದರಾಮಯ್ಯ ಇಲಿಗಳನ್ನು ಹೊಡೆದರೆ ಡಿಕೆಶಿ ಹುಲಿಗಳನ್ನೇ ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ: ಅಶೋಕ್ ಹೀಗಂದಿದ್ಯಾಕೆ ನೋಡಿ!

Updated on: Apr 18, 2026 | 12:37 PM

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿ ಹೊರಹಾಕಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ಸಿದ್ದರಾಮಯ್ಯ ಸಣ್ಣ ಇಲಿಗಳನ್ನು ಗುರಿಯಾಗಿಸಿಕೊಂಡರೆ, ಡಿಸಿಎಂ ಡಿಕೆಶಿ ದೊಡ್ಡ ಹುಲಿಗಳನ್ನು ಗುರಿಯಾಗಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ. ಇದರ ಜೊತೆಗೆ, ವಿದ್ಯುತ್ ದರ ಏರಿಕೆ ಕುರಿತು ಆಡಳಿತದ ಕುತಂತ್ರದ ಬಗ್ಗೆಯೂ ಧ್ವನಿ ಎತ್ತಿದ್ದಾರೆ.

ಬೆಂಗಳೂರು, ಏಪ್ರಿಲ್ 18: ಸಿಎಂ ಸಿದ್ದರಾಮಯ್ಯ ರಾಜ್ಯದ ಪಾಲಿಗೆ ಕುತಂತ್ರಿಯಾಗಿದ್ದು, ಸದ್ದಿಲ್ಲದೆ ವಿದ್ಯುತ್ ದರ ಏರಿಕೆ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಬಿಎ ಚುನಾವಣೆ ಬರುವುದರೊಳಗೆ ಇನ್ನಷ್ಟು ತೆರಿಗೆ ಏರಿಕೆಗೆ ಸಿದ್ಧತೆ ನಡೆದಿದೆ, ಮಾರಿಹಬ್ಬ ಕಾದಿದೆ ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷ ಒಳಜಗಳದಿಂದ ಬಡವಾಗಿದೆ. ನಾಯಕತ್ವವೇ ಇಲ್ಲದೆ ಸೊರಗಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಆಂತರಿಕ ಸಂಘರ್ಷ ತೀವ್ರಗೊಂಡಿದೆ. ಸಿದ್ದರಾಮಯ್ಯ ಸಣ್ಣ ಸಣ್ಣ ಇಲಿಗಳನ್ನು ಹೊಡೆಯುತ್ತಿದ್ದರೆ, ಡಿಕೆ ಶಿವಕುಮಾರ್ ದೊಡ್ಡ ದೊಡ್ಡ ಹುಲಿಗಳನ್ನು ಹೊಡೆಯುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಕ್ಯಾಬಿನೆಟ್‌ನಿಂದ ತೆಗೆದುಹಾಕಲ್ಪಟ್ಟ ರಾಜಣ್ಣ, ನಾಗೇಂದ್ರ, ಮತ್ತು ಜಮೀರ್‌ರಂತಹ ಸಿದ್ದರಾಮಯ್ಯ ಬೆಂಬಲಿಗರನ್ನು ವ್ಯವಸ್ಥಿತವಾಗಿ ಪಕ್ಷದಿಂದ ದೂರ ಮಾಡಲಾಗುತ್ತಿದೆ. ದಾವಣಗೆರೆಯ ಜಬ್ಬಾರ್ ಮತ್ತು ಸಿಎಂ ಕಾರ್ಯದರ್ಶಿಯಾಗಿದ್ದ ನಜೀರ್‌ರನ್ನು ಸಹ ಗೇಟ್ ಪಾಸ್ ನೀಡಿ ಹೊರಹಾಕಲಾಗಿದೆ. ಸಿದ್ದರಾಮಯ್ಯ ಬೆಂಬಲಿಗರಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲವಿಲ್ಲ. ಒಟ್ಟಾರೆ ಕಾಂಗ್ರೆಸ್ ಪಕ್ಷವು ನಾಯಕತ್ವವಿಲ್ಲದೆ ಬೀದಿ ಭಿಕಾರಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us