ಕೊಡಗಿನಲ್ಲಿ ಉತ್ತಮ ಮಳೆ: ಮತ್ತೆ ಜೀವ ಪಡೆದುಕೊಂಡ ಕಾವೇರಿ ನದಿ, ನೀರಿನ ಬವಣೆ ದೂರ
ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆ ಹಿನ್ನೆಲೆ ಕಾವೇರಿ ನದಿ ಮತ್ತೆ ಜೀವ ಪಡೆದುಕೊಂಡಿದೆ. ಕಳೆದ ತಿಂಗಳು ಹರಿಯುವಿಕೆ ನಿಲ್ಲಿಸಿದ್ದ ಕಾವೇರಿ ಸುಮಾರು 50ಕ್ಕೂ ಹೆಚ್ಚು ದಿನಗಳ ಕಾಲ ಸಂಪೂರ್ಣ ಬತ್ತಿ ಹೋಗಿತ್ತು. ಆದರೆ ಇದೀಗ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ಹರಿಯುತ್ತಿದ್ದಾಳೆ. ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಮುಕ್ತಿ ಆಗಿದೆ.
ಕೊಡಗು, ಮೇ 19: ಸುಮಾರು 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಭತ್ತಿ ಹೋಗಿದ್ದ ಕಾವೇರಿ (Kaveri River) ಇದೀಗ ಮತ್ತೆ ತನ್ನ ಗತವೈಭವಕ್ಕೆ ಮರಳುತ್ತಿದೆ. ತೀವ್ರ ಬರದಿಂದಾಗಿ ಹರಿಯುವಿಕೆಯನ್ನೇ ನಿಲ್ಲಿಸಿದ್ದ ಜೀವನದಿ ಕಾವೇರಿ ಮತ್ತೆ ಮೈದುಂಬಿಕೊಳ್ಳುತ್ತಿದೆ. ಇದು ಕಾವೇರಿ ಕೊಳ್ಳದ ಜನ ವರ್ಗದಲ್ಲಿ ಸಂತಸ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ (Kodagu) ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ಮಾತ್ರವಲ್ಲ ಕೊಡಗಿನ ಎಲ್ಲಾ ನದಿ ತೊರೆಗಳು ಜೀವ ಪಡೆದುಕೊಂಡಿವೆ. ಎಲ್ಲೆಡೆ ಮತ್ತೆ ಹಸಿರು ನಳನಳಿಸುತ್ತಿದೆ. ವಿಶೇಷವಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳು ಕುಡಿಯುವ ನೀರಿಗಾಗಿ ಇನ್ನಿಲ್ಲದ ಬವಣೆ ಪಡುವಂತಾಗಿತ್ತು. ಆದರೆ ಇದೀಗ ಕಾವೇರಿಯಲ್ಲಿ ನೀರು ಹರಿಯುತ್ತಿರುವುದು ಸದ್ಯ ನೀರಿನ ಬವಣೆ ದೂರವಾಗುವಂತೆ ಮಾಡಿದೆ. ಇದು ಸ್ಥಳೀಯ ಜನರಲ್ಲಿ ಹರ್ಷ ಸಂತಸ ತಂದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.