ಮಡಿಕೇರಿ: ಮುಂಡ್ರೋಡು ಮೀಸಲು ಅರಣ್ಯದಲ್ಲಿ ಸಾವಿರಾರು ಮರ ಕಡಿದ ಆರೋಪ, ತನಿಖೆಗೆ ಆದೇಶಿಸಿದ ಸಚಿವ ಖಂಡ್ರೆ

ಕೊಡಗು ಜಿಲ್ಲೆಯ ಮುಂಡ್ರೋಡು ಮೀಸಲು ಅರಣ್ಯದಲ್ಲಿ ಸಾವಿರಾರು ಮರಗಳನ್ನು ಕಡಿದ ವಿಚಾರವಾಗಿ ಇದೀಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶಿಸಿದ್ದಾರೆ. ಈ ವಿಚಾರವಾಗಿ ಇಲಾಖೆಯ ಗಮನಕ್ಕೆ ತಾರದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಿರುವ ಅವರು, ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ಮಡಿಕೇರಿ: ಮುಂಡ್ರೋಡು ಮೀಸಲು ಅರಣ್ಯದಲ್ಲಿ ಸಾವಿರಾರು ಮರ ಕಡಿದ ಆರೋಪ, ತನಿಖೆಗೆ ಆದೇಶಿಸಿದ ಸಚಿವ ಖಂಡ್ರೆ
ಮುಂಡ್ರೋಡು ಮೀಸಲು ಅರಣ್ಯದಲ್ಲಿ ಸಾವಿರಾರು ಮರ ಕಡಿದ ಆರೋಪ, ತನಿಖೆಗೆ ಆದೇಶಿಸಿದ ಸಚಿವ ಖಂಡ್ರೆ
Follow us
| Updated By: ಗಣಪತಿ ಶರ್ಮ

Updated on: May 16, 2024 | 9:12 AM

ಮಡಿಕೇರಿ, ಮೇ 16: ತಲಕಾವೇರಿ ಅಭಯಾರಣ್ಯದ (Talacauvery sanctuary) ವಿರಾಜಪೇಟೆ (Virajpet) ವಲಯದ ಮುಂಡ್ರೋಡು ಮೀಸಲು ಅರಣ್ಯದಲ್ಲಿ (Forest) ಅಕ್ರಮವಾಗಿ ಸಾವಿರಾರು ಮರಗಳನ್ನು ಕಡಿಯಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ (Eshwar B Khandre) ತನಿಖೆಗೆ ಆದೇಶಿಸಿದ್ದಾರೆ. ಕೊಡಗು ಜಿಲ್ಲೆಯ ಅರಣ್ಯ ಅಧಿಕಾರಿಗಳು ಮರ ಕಡಿದ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದರು. ಈ ವಿಚಾರವಾಗಿ ‘ಟಿವಿ9’ ವಿಸ್ತೃತ ವರದಿ ಮಾಡಿತ್ತು.

ಮರಹನನ ಕುರಿತು ಸಚಿವರ ಕಾರ್ಯಾಲಯಕ್ಕೆ ಮಾಹಿತಿ ನೀಡದೆ‌ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚನೆ ನೀಡಿದ ಅವರು, ಎಪಿಸಿಸಿಎಫ್ ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಜತೆಗೆ, ಮರ ಕಡಿದ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆದೇಶ ನೀಡಿದ್ದಾರೆ.

239 ಮರಗಳನ್ನು ಕಡಿದ ವಿಚಾರವಾಗಿ ಏಪ್ರಿಲ್ 30 ರಂದು ಮೂವರ ವಿರುದ್ಧ ಮುಂಡ್ರೋಟು ರೇಂಜ್ ಫಾರೆಸ್ಟ್ ಆಫೀಸರ್ ಪ್ರಕರಣ ದಾಖಲಿಸಿದ್ದರು. ಆದರೆ, ಕೊಡಗು ಏಕೀಕರಣ ರಂಗದ ಕಾರ್ಯಕರ್ತರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಈ ಪ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದೆ ಎಂದು ಆರೋಪಿಸಿದ್ದರು.

ಅಧಿಕಾರಿಗಳಿಗೆ ಖಂಡ್ರೆ ಸೂಚನೆ ಏನೇನು?

ಮರ ಕಡಿದ ವಿಚಾರವಾಗಿ ಸಮಗ್ರ ಪರಿಶೀಲನೆಗಾಗಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ತಕ್ಷಣವೇ ನಿಯೋಜಿಸಬೇಕು ಮತ್ತು ಮೂರು ದಿನಗಳಲ್ಲಿ ಜಿಪಿಎಸ್ ಟ್ಯಾಗ್ ಮಾಡಿದ ವೀಡಿಯೊಗಳನ್ನು ಒಳಗೊಂಡಂತೆ ವಾಸ್ತವ ವರದಿಯನ್ನು ಸಲ್ಲಿಸಬೇಕು. ನಿರ್ಲಕ್ಷ್ಯ ತೋರಿದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

ಮುಂಡ್ರೋಟು, ಮಾಕುಟ್ಟ ಮತ್ತು ಪೊನ್ನಂಪೇಟೆ ಅರಣ್ಯ ಪ್ರದೇಶಗಳು ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಅರಣ್ಯದ ಕೆಲವು ಪ್ರದೇಶಗಳಿಗೆ ಪ್ರವೇಶವೂ ದುರ್ಗಮವಾಗಿದೆ. ರಸ್ತೆ ಬಿಟ್ಟು ಕಾಲುದಾರಿಯಲ್ಲಿ ಕಿಲೋಮೀಟರ್​​​ಗಟ್ಟಲೆ ನಡೆಯಬೇಕಾದ ಪ್ರದೇಶಗಳಿವೆ. ಇದು ಅಕ್ರಮವಾಗಿ ಮರಗಳನ್ನು ಕಡಿಯುವುದು ಮತ್ತು ಸಾಗಾಟ ಮಾಡುವವರಿಗೆ ವರದಾನವಾಗಿದೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಸಚಿವರ ಆದೇಶದಲ್ಲೇನಿದೆ?

ಕೊಡಗು ಜಿಲ್ಲೆ ಮಡಿಕೇರಿ ಬಳಿ ಕೊಡಗು- ಕೇರಳ ಗಡಿ ಭಾಗದ ತಲಕಾವೇರಿ ಅಭಯಾರಣ್ಯದ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಮರಗಳ ಅಕ್ರಮ ಕಡಿತ ಆಗಿರುವ ಕುರಿತಂತೆ ನಾಡಿನ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಸಚಿತ್ರ ವರದಿ ಪ್ರಕಟವಾಗಿರುತ್ತದೆ. ಸಾವಿರಾರು ಮರಗಳ ಅಕ್ರಮ ಹನನ ಆಗಿದ್ದರೂ ಸಚಿವರ ಕಾರ್ಯಾಲಯಕ್ಕೆ ಕೂಡಲೇ ಮಾಹಿತಿ ನೀಡದೇ ಇರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕೊಡಗು: ಪಶ್ಚಿಮ ಘಟ್ಟಕ್ಕೆ ಕೊಡಲಿ, ಸಾವಿರಕ್ಕೂ ಅಧಿಕ ಮರಗಳನ್ನ ಕಡಿದು ನಾಶ

ಮುಂದುವರಿದು, ವೃಕ್ತ ಸಂಪತ್ತು ಮತ್ತು ವನ್ಯ ಸಂಪತ್ತನ್ನು ರಕ್ಷಿಸಬೇಕಾದ್ದು ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವಲಯ ಅರಣ್ಯಾಧಿಕಾರಿ ಹಾಗೂ ಅಧೀನ ಸಿಬ್ಬಂದಿಯ ಆದ್ಯ ಕರ್ತವ್ಯ ಆಗಿರುತ್ತದೆ. ಮಾಧ್ಯಮಗಳಲ್ಲಿ ಮರಗಳ ಅಕ್ರಮ ಹನನ ಕುರಿತ ಪ್ರಕಟವಾದ ವರದಿಯನ್ನು ಮೇ 10ರಂದು ಸಿಸಿಎಫ್ ಗಳು ಸದಸ್ಯರಾಗಿರುವ ವಾಟ್ಸ್ ಅಪ್ ಗ್ರೂಪ್ ನಲ್ಲಿ ಸಚಿವರ ಕಚೇರಿ ಆಪ್ತ ಸಿಬ್ಬಂದಿ ಪೋಸ್ಟ್ ಮಾಡಿ ಗಮನ ಸೆಳೆದ್ದರೂ, ಯಾವುದೇ ಮಾಹಿತಿ ನೀಡಲಾಗಿರುವುದಿಲ್ಲ, ಇದು ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪವಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೂಡಲೇ ಎ.ಪಿ.ಸಿ.ಸಿ.ಎಫ್. ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ, ಎಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ವಾಸ್ತವ ವರದಿಯನ್ನು ಜಿಪಿಎಸ್ ಸಹಿತ ವಿಡಿಯೋ ಸಹಿತ, 3 ದಿನಗಳ ಒಳಗಾಗಿ ಈ ಕಚೇರಿಗೆ ಸಲ್ಲಿಸಲು ಮತ್ತು ನಿರ್ಲಕ್ಷ್ಯ ವಹಿಸಿರುವ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ರೀತ್ಯ ಶಿಸ್ತು ಕ್ರಮ ಜರುಗಿಸಲು ಹಾಗೂ ಅನುಮತಿ ಇಲ್ಲದೆ ಮರ ಕಡಿದ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸೂಚಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ