ಹಬ್ಬದ ಸೀಸನ್ನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ದೊಡ್ಡ ಆಘಾತ
Sugar and Jaggery Prices Hike in Karnataka: ಹಬ್ಬದ ಸೀಸನ್ ಹತ್ತಿರವಾಗುತ್ತಿದ್ದಂತೆಯೇ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೇರಿದ್ದು, ಗ್ರಾಹಕರಿಗೆ ದೊಡ್ಡ ಆಘಾತ ನೀಡಿದೆ. ಸಕ್ಕರೆ ಬೆಲೆ ಶೇ 40ರಷ್ಟು ಹೆಚ್ಚಿದ್ದು, ಬೆಲ್ಲದ ದರವೂ ದಾಖಲೆ ಮಟ್ಟಕ್ಕೆ ತಲುಪಿದೆ. ಎಥೆನಾಲ್ ಉತ್ಪಾದನೆ, ಕಬ್ಬಿನ ಕೊರತೆ ಹಾಗೂ ಮಳೆ ಅಭಾವದಿಂದಾಗಿ ಇಳುವರಿ ಕುಸಿದಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಬೆಂಗಳೂರು, ಆಗಸ್ಟ್ 22: ಹಬ್ಬಗಳ ಸೀಸನ್ ಆರಂಭವಾಗುತ್ತಿರುವ ಸಂದರ್ಭದಲ್ಲಿಯೇ ಸಕ್ಕರೆ ಮತ್ತು ಬೆಲ್ಲದ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಗ್ರಾಹಕರಿಗೆ ಆರ್ಥಿಕ ಹೊರೆಯಾಗಿದೆ. ಸಕ್ಕರೆ ದರ ಕೆಜಿಗೆ 50-55 ರೂ.ನಿಂದ 70-75 ರೂ.ಗೆ ಏರಿದ್ದು, ದೇಶೀಯ ಉತ್ಪಾದಿತ ಸಕ್ಕರೆ ಬೆಲೆ ಸುಮಾರು ಶೇ 40ರಷ್ಟು ಏರಿಕೆಯಾಗಿದೆ. ಇದೇ ರೀತಿ ಬೆಲ್ಲದ ದರವೂ ಗಗನಕ್ಕೇರಿದ್ದು, ಕ್ವಿಂಟಾಲ್ಗೆ 4,500 ರೂ. ಇದ್ದ ಬೆಲೆ ಈಗ 6,500-7,000 ರೂ.ಗೆ ತಲುಪಿದೆ. ಕೆಲವೇ ದಿನಗಳಲ್ಲಿ ಬೆಲ್ಲದ ಬೆಲೆಯಲ್ಲಿ 2,000 ರೂ. ಏರಿಕೆಯಾಗಿರುವುದು ವ್ಯಾಪಾರಸ್ಥರಲ್ಲೂ ಆತಂಕ ಮೂಡಿಸಿದೆ.
ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಕೊರತೆ ಉಂಟಾಗುತ್ತಿದೆಯೇ ಎಂಬ ಚರ್ಚೆಗಳು ಒಂದೆಡೆ ನಡೆಯುತ್ತಿವೆ. ಆದರೆ, ಬೆಲೆ ಏರಿಕೆಗೆ ಕಬ್ಬಿನ ಪೂರೈಕೆಯ ಕೊರತೆ, ಮಳೆಯ ಅಭಾವದಿಂದ ಇಳುವರಿ ಕುಸಿತ ಮತ್ತು ಗಾಣಗಳಲ್ಲಿ ಬೆಲ್ಲದ ಉತ್ಪಾದನೆ ಇಳಿಮುಖವಾಗಿರುವುದು ಪ್ರಮುಖ ಕಾರಣಗಳಾಗಿವೆ ಎನ್ನಲಾಗುತ್ತಿದೆ.
ಕಳೆದ ಆರು ತಿಂಗಳಿಂದ ಮಳೆ ಇಲ್ಲದೆ ಕಬ್ಬಿಗೆ ನೀರಿನ ಪೂರೈಕೆಯಾಗಿಲ್ಲ. ಇದರಿಂದಾಗಿ ಕಬ್ಬಿನ ಗದ್ದೆಗಳು ಒಣಗಿ ನಿಂತಿವೆ. ಕಬ್ಬಿನ ಇಳುವರಿ ಅರ್ಧದಷ್ಟು ಕಡಿಮೆಯಾಗಿದೆ. ಪ್ರತಿದಿನ 10 ರಿಂದ 12 ಲಾರಿಯಷ್ಟು ಬೆಲ್ಲ ಮಾರುಕಟ್ಟೆಗೆ ಹೋಗುತಿತ್ತು. ಇದೀಗ ಅರ್ಧದಷ್ಟು ಕಡಿಮೆಯಾಗಿದೆ. ಬೆಲ್ಲದ ಮಾರುಕಟ್ಟೆ ಪ್ರಾರಂಭವಾದ ದಿನದಿಂದಲೂ ಇಷ್ಟೊಂದು ಪ್ರಮಾಣದ ದರ ಏರಿಕೆಯಾಗಿರಿಲ್ಲ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
