ಟಿಎಂಸಿ ಗೂಂಡಾಗಳಿಗೇ ಹೆದರಿಲ್ಲ, ನಮ್ಮ ಏರಿಯಾದಲ್ಲೇ ಹೆದರಿಸ್ತೀರಾ? ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರಾಮಮೂರ್ತಿ ಅವರು ಬೆಂಗಳೂರು ಮೆಟ್ರೋ ದರ ಏರಿಕೆ ವಿರುದ್ಧ ಖಾಲಿ ಟ್ರಂಕ್ ಪ್ರದರ್ಶಿಸಿ ಪ್ರತಿಭಟಿಸಿದರು. ಪೊಲೀಸರ ನೋಟಿಸ್ಗೆ ಹೆದರುವುದಿಲ್ಲ ಎಂದು ಸೂರ್ಯ ಸ್ಪಷ್ಟಪಡಿಸಿದರು. ಮೆಟ್ರೋ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಸೇವೆ ನೀಡಲು ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆಗೆ ಬೆಂಬಲ ನೀಡಬೇಕೆಂದು, ಬಿಎಂಆರ್ಸಿಎಲ್ಗೆ ಮನವಿ ಮಾಡಿದರು.
ಬೆಂಗಳೂರು, ಫೆಬ್ರವರಿ 9: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಗೂಂಡಾಗಳಿಗೇ ಹೆದರದೆ ಹೋರಾಟ ಮಾಡಿ ಬಂದಿದ್ದೇನೆ. ನಮ್ಮದೇ ಏರಿಯಾದಲ್ಲಿ ನೋಟಿಸ್ ಕೊಟ್ಟು ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಭಟನೆ ನಡೆಸದಂತೆ ಪೊಲೀಸರು ನೀಡಿರುವ ನೋಟಿಸ್ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಸೂರ್ಯ, ನಮ್ಮದೇ ಪ್ರದೇಶದಲ್ಲಿ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದರು. ಬೆಂಗಳೂರು ಮೆಟ್ರೋ ದರ ಏರಿಕೆ ಖಂಡಿಸಿ ಅವರು ಜಯನಗರ ಶಾಸಕ ರಾಮಮೂರ್ತಿ ಜತೆಗೂಡಿ ಆರ್ವಿ ರೋಡ್ ಮೆಟ್ರೋ ನಿಲ್ದಾಣದಲ್ಲಿ ಖಾಲಿ ಟ್ರಂಕ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ‘ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ’ ಎಂದು ಬರೆದಿರುವ ಟ್ರಂಕ್ನಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಭಾವಚಿತ್ರಗಳಿದ್ದವು.
ನಾವು ಮೆರವಣಿಗೆ, ಧರಣಿ ಅಥವಾ ಮುಷ್ಕರ ನಡೆಸುತ್ತಿಲ್ಲ, ಬದಲಾಗಿ ಸಾಮಾನ್ಯ ನಾಗರಿಕನಾಗಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ಅವರು ತಿಳಿಸಿದರು. ಈ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ ಸೂರ್ಯ, ಬೆಂಗಳೂರು ಮೆಟ್ರೋಗೆ ಸರ್ಕಾರ ಬಜೆಟ್ ಬೆಂಬಲ ನೀಡಬೇಕು ಮತ್ತು ಹೊಸ ದರ ನಿಗದಿ ಸಮಿತಿ ರಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು. ಬಿಎಂಆರ್ಸಿಎಲ್ ಭಾರತದ ಅತಿ ದುಬಾರಿ ಮೆಟ್ರೋ ಆಗಬಾರದು. ಬದಲಿಗೆ ಶುದ್ಧ, ಸುರಕ್ಷಿತ ಮತ್ತು ದಕ್ಷ ಮೆಟ್ರೋ ಆಗಬೇಕು ಎಂದು ಅವರು ಒತ್ತಾಯಿಸಿದರು.

