ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
IPL 2025 RCB: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಆಡಿರುವ 13 ಪಂದ್ಯಗಳಲ್ಲಿ 8 ಜಯಗಳಿಸಿರುವ ಆರ್ಸಿಬಿ ಪಡೆ ಒಟ್ಟು 17 ಅಂಕಗಳನ್ನು ಕಲೆಹಾಕಿದೆ. ಇನ್ನು ಆರ್ಸಿಬಿ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಒಂದು ಪಂದ್ಯವಾಡಬೇಕಿದ್ದು, ಇದಾದ ಬಳಿಕ ಪ್ಲೇಆಫ್ ಮ್ಯಾಚ್ಗಳು ಶುರುವಾಗಲಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕುಟುಂಬ ಸಮೇತ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಜೊತೆ ಭಾನುವಾರ ಅಯೋಧ್ಯಾ ಧಾಮ್ಗೆ ಆಗಮಿಸಿದ ಕೊಹ್ಲಿ ರಾಮ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಆ ಬಳಿಕ ಅಯೋಧ್ಯೆಯಲ್ಲಿರುವ ಹನುಮಾನಗಡಿಗೂ ಭೇಟಿ ನೀಡಿ ಪ್ರಾರ್ಥಿಸಿದರು.
ವಿರಾಟ್ ಕೊಹ್ಲಿ ಸದ್ಯ ಲಕ್ನೋದಲ್ಲಿದ್ದು, ಹೀಗಾಗಿ ಬಿಡುವಿನ ವೇಳೆ ದೇವರ ದರ್ಶನಕ್ಕೆ ತೆರಳಿದ್ದಾರೆ. ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಕೊನೆಯ ಲೀಗ್ ಮ್ಯಾಚ್ನಲ್ಲಿ ಆರ್ಸಿಬಿ ತಂಡವು ಭರ್ಜರಿ ಜಯ ಸಾಧಿಸಿದರೆ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಥವಾ ದ್ವಿತೀಯ ಸ್ಥಾನಕ್ಕೇರುವ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಬಹುದು. ಹೀಗಾಗಿ ಆರ್ಸಿಬಿ ಪಾಲಿಗೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವು ತುಂಬಾ ಮಹತ್ವದ್ದಾಗಿ ಮಾರ್ಪಟ್ಟಿದೆ.

