ಅಮೆರಿಕದಲ್ಲಿ ಓಣಂ ಸಂಭ್ರಮದ ಬೆನ್ನಲ್ಲೇ ಭೀಕರ ದುರಂತ, ಶಿಕ್ಷಕಿಯರಾದ ಅಂಜನಾ, ಆನ್ ಮ್ಯಾಥ್ಯೂ ನಿಗೂಢ ಹತ್ಯೆ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಓಣಂ ಸಂಭ್ರಮದ ಬೆನ್ನಲ್ಲೇ ಭೀಕರ ದುರಂತ ಸಂಭವಿಸಿದೆ. ಕೇರಳ ಮೂಲದ ಶಿಕ್ಷಕಿಯರಾದ ಅಂಜನಾ ಹರಿ ಮತ್ತು ಆನ್ ಮ್ಯಾಥ್ಯೂ ಅವರನ್ನು ಅವರ ಆತ್ಮೀಯ ಸ್ನೇಹಿತೆ ಅನಿಲಾ ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಈ ದಾರುಣ ಕೃತ್ಯಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅನಿಲಾಳನ್ನು ಮಿಲ್ಪಿಟಾಸ್ ಪೊಲೀಸರು ಬಂಧಿಸಿದ್ದಾರೆ. ಮೃತದೇಹಗಳನ್ನು ಭಾರತಕ್ಕೆ ರವಾನಿಸಲು ಭಾರತೀಯ ದೂತಾವಾಸ ನೆರವಾಗುತ್ತಿದೆ.

ಅಮೆರಿಕದಲ್ಲಿ ಓಣಂ ಸಂಭ್ರಮದ ಬೆನ್ನಲ್ಲೇ ಭೀಕರ ದುರಂತ, ಶಿಕ್ಷಕಿಯರಾದ ಅಂಜನಾ, ಆನ್ ಮ್ಯಾಥ್ಯೂ ನಿಗೂಢ ಹತ್ಯೆ
ಮಹಿಳೆಯರು

Updated on: Sep 01, 2026 | 8:24 AM

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 1: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ಕೇರಳ ಮೂಲದ ಮೂವರು ಆತ್ಮೀಯ ಸ್ನೇಹಿತೆಯರು ಒಟ್ಟಾಗಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಕೇವಲ ಎರಡೇ ದಿನಗಳಲ್ಲಿ ಇಬ್ಬರು ಮಹಿಳೆಯರು ಕೊಲೆಯಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್‌ನಲ್ಲಿರುವ ‘ಮಿಲ್ ಕ್ರೀಕ್’ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಆಗಸ್ಟ್ 28 ರಂದು ಈ ಕೃತ್ಯ ನಡೆದಿದೆ. ಕೊಲೆಯಾದವರನ್ನು ತ್ರಿಶೂರ್‌ನ ಅಂಜನಾ ಹರಿ (35) ಮತ್ತು ತಿರುವನಂತಪುರದ ಆನ್ ಮ್ಯಾಥ್ಯೂ (40) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಹತ್ಯೆಗಳ ಆರೋಪದ ಮೇಲೆ ಅವರ ಸ್ನೇಹಿತೆ, ಕೊಟ್ಟಾಯಂ ಮೂಲದ ಅನಿಲಾ (32) ಎಂಬಾಕೆಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಅನಿಲಾ ಮೊದಲು ಅಪಾರ್ಟ್‌ಮೆಂಟ್‌ನ ಒಳಗೆ ಆನ್ ಮ್ಯಾಥ್ಯೂ ಅವರಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಬಳಿಕ ಪಾರ್ಕಿಂಗ್ ಪ್ರದೇಶದಲ್ಲಿದ್ದ ಅಂಜನಾ ಹರಿ ಅವರ ಮೇಲೆ ನೀಲಿ ಬಣ್ಣದ ಎಸ್‌ಯುವಿ (SUV) ಕಾರನ್ನು ವೇಗವಾಗಿ ಚಲಾಯಿಸಿ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾಳೆ.

ಮತ್ತಷ್ಟು ಓದಿ: ಪತ್ನಿಯ ಕೊಂದು ಹೃದಯಾಘಾತದ ಕಥೆ ಕಟ್ಟಿದ ಪತಿ! ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಾಕ್ಷಸೀ ಕೃತ್ಯ

ಆರೋಪಿಯ ಬಂಧನ: ಅಪಾರ್ಟ್‌ಮೆಂಟ್ ಬಳಿಯ ಡಿಕ್ಸನ್ ಲ್ಯಾಂಡಿಂಗ್ ರಸ್ತೆಯಲ್ಲಿ ಹಿಟ್ ಅಂಡ್ ರನ್ ನಡೆದ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಮಿಲ್ಪಿಟಾಸ್ ಪೊಲೀಸರು, ಹತ್ತಿರದ ಪ್ರದೇಶದಲ್ಲಿ ಪತ್ತೆಯಾದ ನೀಲಿ ಎಸ್‌ಯುವಿ ಕಾರು ಹಾಗೂ ಚಾಲಕಿ ಅನಿಲಾಳನ್ನು ವಶಕ್ಕೆ ಪಡೆದಿದ್ದಾರೆ.

ಮೃತರ ಹಿನ್ನೆಲೆ ಮತ್ತು ಕುಟುಂಬಸ್ಥರ ಆಕ್ರಂದನ
ಅಂಜನಾ ಹರಿ : 2021ರಲ್ಲಿ ಅಮೆರಿಕಕ್ಕೆ ತೆರಳಿದ್ದ ಅಂಜನಾ ಸ್ಥಳೀಯ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಅವರಿಗೆ ಸಾಫ್ಟ್‌ವೇರ್ ಎಂಜಿನಿಯರ್ ಪತಿ ವಿಜೀಶ್ ಹಾಗೂ 6 ವರ್ಷದ ಪುತ್ರಿ ಇದ್ದಾರೆ.

ಆನ್ ಮ್ಯಾಥ್ಯೂ (40): ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆನ್‌ಗೆ ಪತಿ ಜಾಕೋಬ್ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಹತ್ಯೆಗೆ ನಿಖರ ಕಾರಣ ಅಸ್ಪಷ್ಟ: ಅತ್ಯಂತ ಆತ್ಮೀಯರಾಗಿದ್ದ ಸ್ನೇಹಿತೆಯರ ನಡುವೆ ಇದ್ದಕ್ಕಿದ್ದಂತೆ ಇಂತಹ ಭೀಕರ ಕೃತ್ಯ ನಡೆಯಲು ಕಾರಣವೇನು ಎಂಬುದು ತನಿಖೆಯ ಹಂತದಲ್ಲಿದ್ದು, ಪೊಲೀಸರು ಉದ್ದೇಶವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಮೃತದೇಹಗಳ ತವರಿಗೆ ರವಾನೆ: ಕೇಂದ್ರ ಸಚಿವ ಸುರೇಶ್ ಗೋಪಿ ಈ ದುರಂತವನ್ನು ಖಚಿತಪಡಿಸಿದ್ದು, ಮೃತದೇಹಗಳನ್ನು ಭಾರತಕ್ಕೆ ತರಲು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಕಾನ್ಸುಲ್ ಜನರಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ದೂತಾವಾಸದ ಸಮನ್ವಯ: ಮಿಲ್ಪಿಟಾಸ್ ಪೊಲೀಸ್ ಇಲಾಖೆ ನಡೆಸುತ್ತಿರುವ ತನಿಖೆಯನ್ನು ಭಾರತೀಯ ರಾಯಭಾರ ಕಚೇರಿ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಸಂತ್ರಸ್ತ ಕುಟುಂಬಗಳಿಗೆ ಕಾನೂನು ಮತ್ತು ಮಾನವೀಯ ನೆರವು ನೀಡಲಾಗುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us