
ಬೀಜಿಂಗ್, ಜುಲೈ 10: ನೈಸರ್ಗಿಕ ವಿಕೋಪಗಳು ಜನರ ಬದುಕನ್ನು ಹೇಗೆಲ್ಲಾ ಕಸಿದುಕೊಳ್ಳಬಹುದು ಎಂಬುದಕ್ಕೆ ಪ್ರವಾಹ ಪೀಡಿತ ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದಲ್ಲಿ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿ. ಇಲ್ಲಿನ ಜನರು ಕೇವಲ ಪ್ರವಾಹದ ನೀರಿನೊಂದಿಗೆ ಹೋರಾಡುತ್ತಿಲ್ಲ, ಬದಲಿಗೆ ನೀರಿನಲ್ಲಿ ಈಜಿ ಬರುತ್ತಿರುವ ವಿಷಕಾರಿ ಹಾವು(Snake)ಗಳೊಂದಿಗೂ ಹೋರಾಡುತ್ತಿದ್ದಾರೆ.
ಅಲ್ಲಿನ ಹಾವು ಸಾಕಣೆ ಕೇಂದ್ರಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಬರೋಬ್ಬರಿ 900ಕ್ಕೂ ಹೆಚ್ಚು ವಿಷಕಾರಿ ಹಾವುಗಳು ಪಂಜರದಿಂದ ಮುಕ್ತವಾಗಿ ಇಡೀ ವಸತಿ ಪ್ರದೇಶಗಳನ್ನು ಆಕ್ರಮಿಸಿಕೊಂಡಿವೆ.
ಪ್ರವಾಹನದ ಭೀಕರತೆಯ ನಡುವೆ ಅತ್ಯಂತ ದುರಂತದ ಸಂಗತಿಯೊಂದು ಹೆಂಗ್ಝೌ ನಗರದಲ್ಲಿ ಸಂಭವಿಸಿದೆ. ನೀರಿನಿಂದ ತಪ್ಪಿಸಿಕೊಳ್ಳುವ ಅವಸರದಲ್ಲಿದ್ದ ಮಹಿಳೆಯೊಬ್ಬರಿಗೆ ವಿಷಕಾರಿ ಹಾವೊಂದು ಕಚ್ಚಿದೆ. ಆದರೆ, ನಗರದಾದ್ಯಂತ ರಸ್ತೆಗಳು ಕಡಿತಗೊಂಡಿತ್ತು ಜತೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಆಕೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿಸಲು ಸಅಧ್ಯವಾಗಿಲ್ಲ. ಸೂಕ್ತ ಚಿಕಿತ್ಸೆ ಸಿಗದೆ ಆಕೆ ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಜನರು ಹೆಗಲ ಮೇಲೆ ಮೂಟೆಗಳನ್ನು ಹೊತ್ತು ನೀರಿನಲ್ಲಿ ನಡೆದು ಹೋಗುತ್ತಿದ್ದರೆ, ಅವರ ಪಕ್ಕದಲ್ಲೇ ಹಾವುಗಳು ಅತ್ಯಂತ ವೇಗವಾಗಿ ಈಜುತ್ತಾ ಸಾಗುತ್ತಿವೆ.
ವಿಡಿಯೋ
📌 Hengzhou, #China 🇨🇳 July 6 /2026
After days of heavy rain 🌧️ and flooding across China, around 900 snakes 🐍 escaped from a breeding farm in Hengzhou. Reports say the reptiles included venomous cobras, with villagers attempting to catch them in the floodwaters. pic.twitter.com/cTcgAZ4nZd— CAUGHTIN4KHQ (@CaughtIn4KHQ) July 9, 2026
ಕೋಳಿ ಅಥವಾ ಹಸುಗಳನ್ನು ಸಾಕುವಂತೆ, ಚೀನಾದ ಗುವಾಂಗ್ಕ್ಸಿ ಪ್ರಾಂತ್ಯವು ವಿಶ್ವದ ಅತ್ಯಂತ ದೊಡ್ಡ ವಾಣಿಜ್ಯ ಹಾವು ಸಾಕಾಣಿಕೆಯ ಕೇಂದ್ರವಾಗಿದೆ. ಇಲ್ಲಿ ಸಾಂಪ್ರದಾಯಿಕ ಚೀನೀ ಔಷಧಗಳು, ಚರ್ಮದ ಉತ್ಪನ್ನಗಳು (ಬ್ಯಾಗ್, ಬೆಲ್ಟ್) ಮತ್ತು ಮಾಂಸದ ಆಹಾರಕ್ಕಾಗಿ ಬರೋಬ್ಬರಿ 30 ಮಿಲಿಯನ್ (3 ಕೋಟಿ) ಸರೀಸೃಪಗಳನ್ನು ಕೃತಕವಾಗಿ ಸಾಕಲಾಗುತ್ತದೆ. ಪ್ರವಾಹದ ನೀರು ಈ ಫಾರ್ಮ್ಗಳ ಗೋಡೆಗಳನ್ನು ಧ್ವಂಸಗೊಳಿಸಿದ್ದರಿಂದ ಇಷ್ಟೊಂದು ದೊಡ್ಡ ಪ್ರಮಾಣದ ಹಾವುಗಳು ಹೊರಬರಲು ಕಾರಣವಾಯಿತು.
ಕೇವಲ ಹಾವುಗಳು ಮಾತ್ರವಲ್ಲ, ಹಠಾತ್ ಅಪ್ಪಳಿಸಿದ ಚಂಡಮಾರುತಕ್ಕೆ ಜಲಾಶಯಗಳು ಒಡೆದು ಇಡೀ ನಗರವೇ ಜಲಾವೃತಗೊಂಡಿದೆ. ಗುವಾಂಗ್ಕ್ಸಿಯ ಪ್ರಾದೇಶಿಕ ಮೃಗಾಲಯದ (Zoo) ಆವರಣ ಗೋಡೆ ಕುಸಿದ ಪರಿಣಾಮ ಜೀಬ್ರಾಗಳು ಮತ್ತು ಹಂದಿಗಳು ಸೇರಿದಂತೆ 100 ಕ್ಕೂ ಹೆಚ್ಚು ಕಾಡುಪ್ರಾಣಿಗಳು ಪ್ರವಾಹದ ನೀರಿನಲ್ಲಿ ತೇಲಿಹೋಗಿವೆ.
ಮತ್ತಷ್ಟು ಓದಿ: ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಸದ್ಯ ಚೀನಾ ಸರ್ಕಾರವು ಹಾವುಗಳನ್ನು ಹಿಡಿಯಲು ತಜ್ಞರ ವಿಶೇಷ ಕಮಾಂಡೋ ತಂಡಗಳನ್ನು ಹಾಗೂ ಜನರನ್ನು ರಕ್ಷಿಸಲು 5,700 ಕ್ಕೂ ಹೆಚ್ಚು ಬೋಟ್ಗಳನ್ನು ನಿಯೋಜಿಸಿದೆ. ಹಾವಿನ ಕಡಿತಕ್ಕೊಳಗಾದ ನೆರೆ ಸಂತ್ರಸ್ತರಿಗೆ ತಕ್ಷಣ ಆಂಟಿ-ವೆನಮ್ ಚಿಕಿತ್ಸೆ ನೀಡಲು ಪ್ರವಾಹ ಪೀಡಿತ ಪ್ರದೇಶಗಳಲ್ಲೇ ತಾತ್ಕಾಲಿಕ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ.
ಈ ಭೀಕರ ಪ್ರವಾಹ ಮತ್ತು ಬಿರುಗಾಳಿಗೆ ಈಗಾಗಲೇ 6 ಜನರು ಸಾವನ್ನಪ್ಪಿದ್ದು, 1.3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜನರ ಮನೆಗಳು ಮಾತ್ರವಲ್ಲದೆ, ಇಡೀ ಪ್ರಾಂತ್ಯದ ಆರ್ಥಿಕತೆಯಾಗಿದ್ದ ಹಂದಿ ಸಾಕಣೆ ಕೇಂದ್ರಗಳು ಹಾಗೂ ಮಲ್ಲಿಗೆ ತೋಟಗಳು ಸಂಪೂರ್ಣ ನಾಶವಾಗಿವೆ.
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದ ನೀರಿನಲ್ಲಿ 3000 ಸಾವಿರ ಸಿಲಿಂಡರ್ಗಳು ಕೂಡ ಕೊಚ್ಚಿ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ