ದುಬೈ ರಸ್ತೆ ಅಪಘಾತ ಸಂತ್ರಸ್ತರಿಗೆ ನೆರವಾದ ಅನಿವಾಸಿ ಭಾರತೀಯ ಉದ್ಯಮಿ: 2.6 ಕೋಟಿ ರೂ. ನೆರವು ಘೋಷಿಸಿದ ಡಾ. ಶಂಶೀರ್ ವಯಾಲಿಲ್

ದುಬೈ ಎಮಿರೇಟ್ಸ್ ರಸ್ತೆ ಅಪಘಾತದ ಸಂತ್ರಸ್ತರ ಕುಟುಂಬಗಳಿಗೆ ಬುರ್ಜೀಲ್ ಹೋಲ್ಡಿಂಗ್ಸ್ ಚೇರ್ಮನ್, ಸಿಇಒ ಡಾ. ಶಂಶೀರ್ ವಯಾಲಿಲ್ 2.6 ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ. ಈ ಧನಸಹಾಯವು ಮೃತರ ಕುಟುಂಬಗಳಿಗೆ ತಲಾ 26 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸೆ ಮತ್ತು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಲಿದೆ.

ದುಬೈ ರಸ್ತೆ ಅಪಘಾತ ಸಂತ್ರಸ್ತರಿಗೆ ನೆರವಾದ ಅನಿವಾಸಿ ಭಾರತೀಯ ಉದ್ಯಮಿ: 2.6 ಕೋಟಿ ರೂ. ನೆರವು ಘೋಷಿಸಿದ ಡಾ. ಶಂಶೀರ್ ವಯಾಲಿಲ್
ದುಬೈನ ಎಮಿರೇಟ್ಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಚಿತ್ರ
Image Credit source: tv9

Updated on: Jun 13, 2026 | 10:17 AM

ದುಬೈ, ಜೂನ್ 13: ದುಬೈನ ಎಮಿರೇಟ್ಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ಕಾರ್ಮಿಕರ ಕುಟುಂಬಗಳಿಗೆ ನೆರವಾಗಲು ಪ್ರಮುಖ ಅನಿವಾಸಿ ಭಾರತೀಯ ಉದ್ಯಮಿ, ಬುರ್ಜೀಲ್ ಹೋಲ್ಡಿಂಗ್ಸ್ ಸಂಸ್ಥೆಯ ಚೇರ್ಮನ್ ಹಾಗೂ ಸಿಇಒ ಡಾ. ಶಂಶೀರ್ ವಯಾಲಿಲ್ 2.6 ಕೋಟಿ ರೂ. ಮೊತ್ತದ ಬೃಹತ್ ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ. ಈ ಅಪಘಾತದಲ್ಲಿ ಮೃತಪಟ್ಟ ಏಳು ಕಾರ್ಮಿಕರ ಕುಟುಂಬಗಳು ಹಾಗೂ ಗಾಯಗೊಂಡ ಒಂಬತ್ತು ಮಂದಿಗೆ ಆರ್ಥಿಕ ಚೇತರಿಕೆ, ತುರ್ತು ಪ್ರಯಾಣ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಈ ನೆರವು ಒದಗಿಸಲಾಗುತ್ತಿದೆ.

ಮುಖ್ಯಾಂಶಗಳು

  • ಸಂತ್ರಸ್ತರ ಕುಟುಂಬಗಳಿಗೆ ಭಾರಿ ಆರ್ಥಿಕ ನೆರವು.
  • ಮೃತರ ಕುಟುಂಬಕ್ಕೆ ತಲಾ 26 ಲಕ್ಷ ರೂ.
  • ಗಾಯಾಳುಗಳ ವೈದ್ಯಕೀಯ ಚಿಕಿತ್ಸೆಗೆ ವಿಶೇಷ ಧನಸಹಾಯ.

ಯಾರಿಗೆ ಎಷ್ಟೆಷ್ಟು ಆರ್ಥಿಕ ಸಹಾಯ?

ಡಾ. ಶಂಶೀರ್ ವಯಾಲಿಲ್ ಅವರ ಈ ಮಾನವೀಯ ಕಾರ್ಯಕ್ರಮದ ಅಡಿಯಲ್ಲಿ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಏಳು ಸಂತ್ರಸ್ತರ ಕುಟುಂಬಗಳಿಗೆ ತಲಾ 26 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ಇನ್ನು ತೀವ್ರವಾಗಿ ಗಾಯಗೊಂಡಿರುವ ಒಂಬತ್ತು ಮಂದಿ ಬದುಕುಳಿದವರ ವೈದ್ಯಕೀಯ ಮತ್ತು ಚಿಕಿತ್ಸೆ ಅಗತ್ಯತೆಗಳ ಆಧಾರದ ಮೇಲೆ ಒಟ್ಟು 47 ಲಕ್ಷ ರೂ. ಹಣವನ್ನು ಹಂಚಿಕೆ ಮಾಡಲಾಗಿದೆ. ಇದರೊಂದಿಗೆ, ಸಂತ್ರಸ್ತರ ಕುಟುಂಬಸ್ಥರ ತುರ್ತು ದುಬೈ ಪ್ರಯಾಣ ಮತ್ತು ವಸತಿ ಸೌಕರ್ಯಕ್ಕಾಗಿ 18 ಲಕ್ಷ ರೂ. ಹಾಗೂ ಅಪಘಾತದಿಂದ ಆಧಾರ ಕಳೆದುಕೊಂಡ ಕುಟುಂಬಗಳ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ 13 ಲಕ್ಷ ರೂ. ನೆರವನ್ನು ಮೀಸಲಿಡಲಾಗಿದೆ.

ಅಪಘಾತದ ಹಿನ್ನೆಲೆ ಮತ್ತು ಸಂತ್ರಸ್ತರ ವಿವರ

ದುಬೈ ಮೂಲದ ಕಂಪನಿಯೊಂದರ ಉದ್ಯೋಗಿಗಳನ್ನು ಹೊತ್ತೊಯ್ಯುತ್ತಿದ್ದ ಮಿನಿಬಸ್, ತಾಂತ್ರಿಕ ದೋಷದಿಂದ ರಸ್ತೆಯಲ್ಲಿ ನಿಂತಿದ್ದ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಾಗ ಈ ದುರಂತ ಸಂಭವಿಸಿತ್ತು. ಅಪಘಾತಕ್ಕೊಳಗಾದವರಲ್ಲಿ ಭಾರತ, ಶ್ರೀಲಂಕಾ ಮತ್ತು ನೇಪಾಳದ ಕಾರ್ಮಿಕರಿದ್ದಾರೆ. ಮೃತಪಟ್ಟ ಏಳು ಜನರಲ್ಲಿ ಆರು ಮಂದಿ ಭಾರತೀಯರು (ಮೂವರು ಉತ್ತರ ಪ್ರದೇಶ ಹಾಗೂ ಮೂವರು ತೆಲಂಗಾಣದವರು) ಮತ್ತು ಒಬ್ಬರು ಶ್ರೀಲಂಕಾದ ಪ್ರಜೆಯಾಗಿದ್ದಾರೆ. ಗಾಯಗೊಂಡ ಒಂಬತ್ತು ಜನರಲ್ಲಿ ಎಂಟು ಮಂದಿ ಭಾರತೀಯರಾಗಿದ್ದು (ಇಬ್ಬರು ಕೇರಳದವರು), ಒಬ್ಬರು ನೇಪಾಳದವರಾಗಿದ್ದಾರೆ. ಗಾಯಾಳುಗಳ ಪೈಕಿ ಐವರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೂವರು ಭಾರತೀಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತೀಯ ರಾಯಭಾರ ಕಚೇರಿ ಜೊತೆ ಸಮನ್ವಯ

ಈ ಆರ್ಥಿಕ ಸಹಾಯವನ್ನು ಅರ್ಹ ಕುಟುಂಬಗಳಿಗೆ ಸಮರ್ಪಕವಾಗಿ ತಲುಪಿಸಲು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ (Indian Consulate) ಸಮನ್ವಯ ಸಾಧಿಸಲಾಗುತ್ತಿದೆ. ‘ನಾವು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಮಾನವೀಯತೆಯ ದೃಷ್ಟಿಯಿಂದ ಈ ಅಪಘಾತದಿಂದ ತೊಂದರೆಗೊಳಗಾದ ಎಲ್ಲಾ ದೇಶಗಳ ಸಂತ್ರಸ್ತರಿಗೂ ನೆರವು ವಿಸ್ತರಿಸಲಾಗುವುದು’ ಎಂದು ಡಾ. ಶಂಶೀರ್ ತಿಳಿಸಿದ್ದಾರೆ.

ಬುರ್ಜೀಲ್ ಹೋಲ್ಡಿಂಗ್ಸ್ ಸಂಸ್ಥೆಯ ಚೇರ್ಮನ್ ಹಾಗೂ ಸಿಇಒ ಡಾ. ಶಂಶೀರ್ ವಯಾಲಿಲ್

ಈ ಹಿಂದೆಯೂ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಗಳಿಗೆ ಡಾ. ಶಂಶೀರ್ 6 ಕೋಟಿ ರೂ. ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us