ಸಿಕ್ಕ 78 ಕೋಟಿ ರೂ. ಲಾಟರಿ ಹಣವನ್ನು ಸ್ನೇಹಿತರ ಜತೆ ಹಂಚಿಕೊಂಡ ಸೆಕ್ಯೂರಿಟಿ ಗಾರ್ಡ್​

ದುಬೈನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ತಯಾಬ್ ಖಾನ್, 78 ಕೋಟಿ ರೂ. ಲಾಟರಿ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ. ಈ ಹಣವನ್ನು ತಮ್ಮ ಐವರು ಸ್ನೇಹಿತರೊಂದಿಗೆ ಹಂಚಿಕೊಂಡ ಅವರು, ಈಗ ತಮ್ಮದೇ ಆದ ವ್ಯವಹಾರ ಆರಂಭಿಸುವ ಕನಸು ಕಂಡಿದ್ದಾರೆ. ಕುಟುಂಬಕ್ಕೆ ನೆರವು ಮತ್ತು ಉದ್ಯಮಿಯಾಗುವ ಇವರ ನಿರ್ಧಾರ ಹಲವರಿಗೆ ಸ್ಫೂರ್ತಿದಾಯಕ.

ಸಿಕ್ಕ 78 ಕೋಟಿ ರೂ. ಲಾಟರಿ ಹಣವನ್ನು ಸ್ನೇಹಿತರ ಜತೆ ಹಂಚಿಕೊಂಡ ಸೆಕ್ಯೂರಿಟಿ ಗಾರ್ಡ್​
ತಯಾಬ್
Image Credit source: X/@NoNext_Question

Updated on: Jun 10, 2026 | 3:00 PM

ದುಬೈ, ಜೂನ್ 10: ದುಬೈನ ಅಬುಧಾಬಿಯ ಯಾವುದೋ ಒಂದು ಅಪಾರ್ಟ್‌ಮೆಂಟ್‌ನ ಗೇಟಿನ ಬಳಿ ನಿಂತು ಬರುವ-ಹೋಗುವ ದಾರಿಹೋಕರನ್ನು ನಗುಮೊಗದಿಂದ ಸ್ವಾಗತಿಸುತ್ತಿದ್ದ 26 ವರ್ಷದ ನೇಪಾಳಿ ಯುವಕ   ತಯಾಬ್ ಖಾನ್‌ನ ಬದುಕು ಇಂದು ಜಗತ್ತೇ ತಿರುಗಿ ನೋಡುವಂತೆ ಬದಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೇವಲ ಭದ್ರತಾ ಸಿಬ್ಬಂದಿಯಾಗಿ (ಸೆಕ್ಯೂರಿಟಿ ಗಾರ್ಡ್) ದುಡಿಯುತ್ತಿದ್ದ ತಯಾಬ್,  ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಕೋಟಿ ಕೋಟಿ ಲಾಟರಿ(Lottery) ಹಣ ಕೈಗೆ ಬಂದಾಗ ಆ ಯುವಕ ಮೊದಲು ಮಾಡಿದ್ದೇನು ಗೊತ್ತಾ? ಇಲ್ಲಿದೆ ಮಾಹಿತಿ.

ಆ ಒಂದು ಇ-ಮೇಲ್ ತಂದ ನಡುಕ
ಈದ್ ಅಲ್-ಅಧಾ ಹಬ್ಬದ ರಜಾದಿನಗಳ ಆ ರಾತ್ರಿ, ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರೆ ತಯಾಬ್ ಮಾತ್ರ ಎಂದಿನಂತೆ ತನ್ನ ನೈಟ್ ಡ್ಯೂಟಿಯಲ್ಲಿದ್ದ. ಟಿವಿಯಲ್ಲಿ ಲಾಟರಿ ಡ್ರಾ ನೇರಪ್ರಸಾರವಾಗುತ್ತಿದ್ದರೂ, ತನಗೇನು ಸಿಗುತ್ತದೆ ಎಂಬ ಉದಾಸೀನತೆಯಿಂದ ಆತ ಕೆಲಸದಲ್ಲೇ ಮಗ್ನನಾಗಿದ್ದ. ಅಷ್ಟರಲ್ಲಿ ಮೊಬೈಲ್‌ಗೆ ಒಂದು ಇ-ಮೇಲ್ ಬಂತು.

ಸಾಮಾನ್ಯವಾಗಿ ಸಣ್ಣಪುಟ್ಟ ಬಹುಮಾನ ಬಂದಾಗ ಬರುವ ಇ-ಮೇಲ್ ಇರಬಹುದು ಎಂದುಕೊಂಡು ತಯಾಬ್ ಅದನ್ನು ತೆರೆದಾಗ ಅವರ ಕಣ್ಣುಗಳೇ ಮಂಜಾದವು. ಅಲ್ಲಿ ಬರೆದಿದ್ದ ಮೊತ್ತ ಬರೋಬ್ಬರಿ 30 ಮಿಲಿಯನ್ ದಿರ್ಹಮ್ಸ್ (ಸುಮಾರು 78 ಕೋಟಿಗೂ ಅಧಿಕ ರೂಪಾಯಿಗಳು!) ಆ ಮೊತ್ತವನ್ನು ನೋಡಿದಾಗ ನನ್ನ ಕೈಕಾಲುಗಳು ನಡುಗಲು ಆರಂಭಿಸಿದವು. ತಾನು ಎಚ್ಚರವಿದ್ದೇನೆಯೇ ಅಥವಾ ಕನಸು ಕಾಣುತ್ತಿದ್ದೇನೋ ನನಗೇ ಅರ್ಥವಾಗಲಿಲ್ಲ ಎಂದು ಆ ಕ್ಷಣದ ರೋಮಾಂಚನವನ್ನು ತಯಾಬ್ ನೆನಪಿಸಿಕೊಳ್ಳುತ್ತಾರೆ.

ಮತ್ತಷ್ಟು ಓದಿ: ಒಂದು ಕೋಟಿ ಲಾಟರಿ ಗೆದ್ದವನನ್ನ ಡೋಲು ಬಾರಿಸಿ ಹುಡುಕುತ್ತಿದ್ದಾರೆ ಇಲ್ಲಿ

ಐದು ಜನ ಸ್ನೇಹಿತರು, 50 ದಿರ್ಹಮ್
ಈ ಪವಾಡದ ಹಿಂದೆ ಕೇವಲ ಅದೃಷ್ಟವಿರಲಿಲ್ಲ, ಐದು ಜನ ಜೀವದ ಗೆಳೆಯರ ಒಗ್ಗಟ್ಟಿನ ಶಕ್ತಿಯಿತ್ತು. 2024ರ ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಲಾಟರಿ ಬಗ್ಗೆ ತಿಳಿದುಕೊಂಡ ತಯ್ಯಾಬ್ ಮತ್ತು ಆತನ ನಾಲ್ವರು ಸ್ನೇಹಿತರು ಸೇರಿ ಒಂದು ನಿರ್ಧಾರ ಮಾಡಿದರು. ಪ್ರತಿಯೊಬ್ಬರೂ ತಲಾ 50 ದಿರ್ಹಮ್‌ಗಳನ್ನು (ಒಟ್ಟು 250 ದಿರ್ಹಮ್) ಒಟ್ಟುಗೂಡಿಸಿ ಪ್ರತಿ ವಾರ ಲಾಟರಿ ಟಿಕೆಟ್ ಖರೀದಿಸಲು ಆರಂಭಿಸಿದರು.

ವಾರ ವಾರವೂ ನಿರಾಸೆಯಾಗುತ್ತಿದ್ದರೂ, ಅವರು ಭರವಸೆ ಕಳೆದುಕೊಳ್ಳಲಿಲ್ಲ. ಪ್ರತಿ ವಾರ ಒಬ್ಬೊಬ್ಬ ಸ್ನೇಹಿತ ಒಂದೊಂದು ಅದೃಷ್ಟದ ಸಂಖ್ಯೆಯನ್ನು ಆರಿಸುತ್ತಿದ್ದ. ಅಂತಿಮವಾಗಿ ತಿಂಗಳುಗಳ ಅವರ ತಾಳ್ಮೆಗೆ, ಕಠಿಣ ಪರಿಶ್ರಮಕ್ಕೆ ವಿಧಿಯೇ ತಲೆಬಾಗಿತು. ಐದೂ ಜನ ಸ್ನೇಹಿತರು ಇಂದು ಒಟ್ಟಿಗೆ ಮಿಲಿಯನೇರ್‌ಗಳಾಗಿದ್ದಾರೆ.

ಇನ್ನು ಗುಲಾಮಗಿರಿ ಸಾಕು, ನಾನೀಗ ಉದ್ಯಮಿ
ನಾಲ್ಕು ವರ್ಷಗಳ ಕಾಲ ಬೇರೆಯವರ ಕೈಕೆಳಗೆ, ಕಟ್ಟುನಿಟ್ಟಿನ ನಿಯಮಗಳ ನಡುವೆ ಸೆಕ್ಯೂರಿಟಿ ಗಾರ್ಡ್ ಆಗಿ ದುಡಿದ ತಯಾಬ್, ಇನ್ನು ಮುಂದೆ ತಾನು ಆ ಕೆಲಸಕ್ಕೆ ಮರಳುವುದಿಲ್ಲ ಎಂದು ಹೆಮ್ಮೆಯಿಂದ ಘೋಷಿಸಿದ್ದಾರೆ.

ಇಷ್ಟು ದಿನ ಇತರರಿಗಾಗಿ ದುಡಿದಿದ್ದು ಸಾಕು, ಆ ಗುಲಾಮಗಿರಿಯ ಬದುಕಿನಿಂದ ನನಗೆ ಮುಕ್ತಿ ಸಿಕ್ಕಿದೆ. ಈಗ ನನ್ನದೇ ಆದ ಹೊಸ ವ್ಯವಹಾರವನ್ನು (Business) ಆರಂಭಿಸುತ್ತೇನೆ ಎನ್ನುವ ತಯಾಬ್, ತನ್ನ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿ ಒಬ್ಬ ಯಶಸ್ವಿ ಉದ್ಯಮಿಯಾಗುವ ಹಂಬಲ ಹೊಂದಿದ್ದಾರೆ.

ಹಣ ಬಂದ ತಕ್ಷಣ ತಯಾಬ್ಗೆ ನೆನಪಾಗಿದ್ದು ತನ್ನ ಹೆತ್ತವರು ಮತ್ತು ತನಗೆ ಬದುಕು ಕಟ್ಟಿಕೊಟ್ಟ ಚಿಕ್ಕಪ್ಪ. ವರ್ಷಗಳ ಹಿಂದೆ ತನಗೆ ಯುಎಇಗೆ ಬರಲು ಆರ್ಥಿಕವಾಗಿ ಸಹಾಯ ಮಾಡಿದ್ದ ಚಿಕ್ಕಪ್ಪನಿಗೆ ತಯಾಬ್ ಮೊದಲು ಫೋನ್ ಮಾಡಿ ವಿಷಯ ತಿಳಿಸಿದ. ಮೊತ್ತವನ್ನು ಕೇಳಿದ ತಕ್ಷಣ ಆತನ ಚಿಕ್ಕಪ್ಪನಿಗೆ ಮಾತು ಹೊರಡಲಿಲ್ಲ, ಫೋನಿನ ಆ ಕಡೆಯಿಂದ ಕೇವಲ ಆನಂದಬಾಷ್ಪದ ಸದ್ದಷ್ಟೇ ಕೇಳಿಸುತ್ತಿತ್ತು. ತಯಾಬ್ನ ಮೊದಲ ಆದ್ಯತೆ ನೇಪಾಳದಲ್ಲಿ ತನ್ನ ಕುಟುಂಬಕ್ಕಾಗಿ ಒಂದು ಸುಂದರವಾದ, ಐಷಾರಾಮಿ ಮನೆಯನ್ನು ನಿರ್ಮಿಸುವುದು. ಕಷ್ಟದಲ್ಲೇ ಕಾಲ ಕಳೆದ ಹೆತ್ತವರಿಗೆ ಜಗತ್ತಿನ ಎಲ್ಲಾ ಸುಖವನ್ನು ನೀಡಬೇಕೆಂಬುದು ಅವರ ಆಸೆ.

ಥಾರ್ ಜೀಪ್, ರೋಲೆಕ್ಸ್ ವಾಚ್ ಮತ್ತು ದುಬೈ ಪ್ರಾಪರ್ಟಿ
ಭವಿಷ್ಯದ ದೊಡ್ಡ ಬಿಸಿನೆಸ್ ಯೋಜನೆಗಳ ಜೊತೆಗೆ ತಯಾಬ್ ತನ್ನ ಮನಸ್ಸಿನ ಮೂಲೆಯಲ್ಲಿದ್ದ ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ, ತುಂಬಾ ದಿನಗಳಿಂದ ಆತ ಆಸೆಪಟ್ಟಿದ್ದ ಎರಡು ವಸ್ತುಗಳನ್ನು ಖರೀದಿಸಲು ಮುಂದಾಗಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us