Video: ಯುದ್ಧ ವಲಯ ಸುಮಿಯಿಂದ ಬಸ್​ ವ್ಯವಸ್ಥೆ ಮಾಡಿದ ಉಕ್ರೇನ್ ಸರ್ಕಾರ; 694 ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯ ಪ್ರಾರಂಭ

ಸುಮಿ ಪ್ರದೇಶ ಇರುವುದು ರಷ್ಯಾದ ಗಡಿಯಲ್ಲಿ. ಉಕ್ರೇನ್​ ರಾಜಧಾನಿ ಕೀವ್​ನಿಂದ ಸುಮಾರು 350 ಕಿಮೀ ದೂರದಲ್ಲಿದೆ. ಅಲ್ಲಿ ರಷ್ಯಾದ ದಾಳಿಯ ತೀವ್ರತೆ ಹೆಚ್ಚಾಗಿದೆ. ಆ ನಗರ ಹಿಮಾವೃತ ಪ್ರದೇಶವಾಗಿದ್ದು, ನಾಗರಿಕರು ತುಂಬ ಸಂಕಷ್ಟಕ್ಕೀಡಾಗಿದ್ದರು.

Video: ಯುದ್ಧ ವಲಯ ಸುಮಿಯಿಂದ ಬಸ್​ ವ್ಯವಸ್ಥೆ ಮಾಡಿದ ಉಕ್ರೇನ್ ಸರ್ಕಾರ; 694 ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯ ಪ್ರಾರಂಭ
ಸುಮಿಯಿಂದ ಬಸ್​ ವ್ಯವಸ್ಥೆ
Edited By:

Updated on: Mar 08, 2022 | 6:03 PM

ದೆಹಲಿ: ಉಕ್ರೇನ್​ನ ಸುಮಿ (Sumy) ಯುದ್ಧವಲಯದಲ್ಲಿ ಸಿಲುಕಿದ್ದ ಸುಮಾರು 694 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುವ ಕಾರ್ಯ ಶುರುವಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿ ತಿಳಿಸಿದ್ದಾರೆ. ಇವರೆಲ್ಲರೂ ಬಸ್​​ಗಳಲ್ಲಿ ಸುಮಿಯಿಂದ ಉಕ್ರೇನ್​​ನ ಕೇಂದ್ರದಲ್ಲಿರುವ ಪೋಲ್ಟಾವಾ ನಗರಕ್ಕೆ ಇಂದು ಹೊರಟಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ನಾವಿದ್ದ ಸ್ಥಳದಲ್ಲಿ ಬಸ್​ ವ್ಯವಸ್ಥೆ ಮಾಡಲಾಗಿದೆ. ಈ ಬಸ್​ ಮೂಲಕ ನಾವೆಲ್ಲರೂ ಪೋಲ್ಟಾವಾಕ್ಕೆ ಹೊರಟಿದ್ದೇವೆ. ಆದಷ್ಟು ಬೇಗ ಎಲ್ಲರೂ ಸುರಕ್ಷಿತವಾಗಿ ಅಲ್ಲಿ ತಲುಪಿದರೆ ಸಾಕು ಎಂದು ಪ್ರಾರ್ಥಿಸುತ್ತಿದ್ದೇನೆ. ಈ ಎಲ್ಲ ಕಷ್ಟಗಳೂ ಮುಗಿದರೆ ಸಾಕಾಗಿದೆ ಎಂದು ಸುಮಿಯಲ್ಲಿರುವ ವಿದ್ಯಾರ್ಥಿಯೊಬ್ಬ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.  ಅಂದಹಾಗೇ ಇಲ್ಲಿ ವಿದೇಶಿ ವಿದ್ಯಾರ್ಥಿಗಳು, ನಾಗರಿಕರಿಗೆ ಬಸ್​ ವ್ಯವಸ್ಥೆ ಮಾಡಿದ್ದು ಉಕ್ರೇನ್​ ಸರ್ಕಾರ. ಕೀವ್​​ನ ಸಮೀಪದಲ್ಲಿರುವ ಇರ್ಪಿನ್​ ಮತ್ತು ಸುಮಿಯಲ್ಲಿರುವ ಉಕ್ರೇನ್​ ನಾಗರಿಕರು ಮತ್ತು ಇತರ ದೇಶಗಳ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯ ಪ್ರಾರಂಭವಾಗಿದೆ. ಇವರನ್ನೆಲ್ಲ ಉಕ್ರೇನ್​ ಮಧ್ಯಭಾಗದಲ್ಲಿರುವ ಪೋಲ್ಟಾವಾಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಉಕ್ರೇನ್​ ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.  ಸ್ಥಳಾಂತರ ವಿಡಿಯೋವನ್ನೂ ಶೇರ್​ ಮಾಡಿಕೊಂಡಿದೆ.

ಸುಮಿ ಪ್ರದೇಶ ಇರುವುದು ರಷ್ಯಾದ ಗಡಿಯಲ್ಲಿ. ಉಕ್ರೇನ್​ ರಾಜಧಾನಿ ಕೀವ್​ನಿಂದ ಸುಮಾರು 350 ಕಿಮೀ ದೂರದಲ್ಲಿದೆ. ಅಲ್ಲಿ ರಷ್ಯಾದ ದಾಳಿಯ ತೀವ್ರತೆ ಹೆಚ್ಚಾಗಿದೆ. ಆ ನಗರ ಹಿಮಾವೃತ ಪ್ರದೇಶವಾಗಿದ್ದು, ನಾಗರಿಕರು ತುಂಬ ಸಂಕಷ್ಟಕ್ಕೀಡಾಗಿದ್ದರು. ಸುಮಿಯಲ್ಲಿ ಇಂದು ರಷ್ಯಾ ನಡೆಸಿದ ಏರ್​ಸ್ಟ್ರೈಕ್​​ಗೆ ಇಬ್ಬರು ಮಕ್ಕಳು ಸೇರಿ ಒಟ್ಟು 9 ಜನರು ಮೃತಪಟ್ಟಿದ್ದಾರೆ. ಇನ್ನು ಭಾರತ ಸೇರಿ ವಿವಿಧ ದೇಶಗಳ ವಿದ್ಯಾರ್ಥಿಗಳಂತೂ ಅಲ್ಲಿಂದ ಪಾರಾಗಲು ಕಾಯುತ್ತಲೇ ಇದ್ದರು. ಸುಮಿಯಲ್ಲಿರುವ ಭಾರತೀಯರು ನೀರಿಲ್ಲದೆ, ಹಿಮವನ್ನೇ ಕರಗಿಸಿ ನೀರು ಮಾಡಿಕೊಳ್ಳುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಇನ್ನು ಯಾವ ಕಾರಣಕ್ಕೂ ಸುಮಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಅವರಷ್ಟಕ್ಕೇ ಹೊರಬಿದ್ದು ಹೋಗಿ ಅಪಾಯ ತಂದುಕೊಳ್ಳಬಾರದು. ನಾವು ಎಲ್ಲರನ್ನೂ ಕಾಪಾಡುತ್ತೇವೆ ಎಂದು ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿತ್ತು. ಅದರಂತೆ ಈಗ ಸುಮಿಯಿಂದ ವಿದ್ಯಾರ್ಥಿಗಳನ್ನು ಸಾಗಿಸಲಾಗುತ್ತಿದೆ.

ಇದನ್ನೂ ಓದಿ: 24 ಗಂಟೆಗಳಲ್ಲಿ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ ನೀಡಬೇಕು: ಪಾಕ್ ಪ್ರತಿಪಕ್ಷಗಳ ಒತ್ತಾಯ

Published On - 6:01 pm, Tue, 8 March 22

Loading...
Unable to load recommendations.
Follow Us