
ಢಾಕಾ, ಡಿಸೆಂಬರ್ 25: ಹದಿನೇಳು ವರ್ಷದ ಹಿಂದೆ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡು ಬಾಂಗ್ಲಾದೇಶ ಬಿಟ್ಟು ಹೊರದೇಶಕ್ಕೆ ಹೋಗಿದ್ದ ತಾರಿಖ್ ರಹಮಾನ್ ಇದೀಗ ತವರಿಗೆ ವಾಪಸ್ ಬಂದಿದ್ದು, ಚುನಾವಣೆಗೆ ರಹಕಹಳೆಗಳನ್ನು ಮೊಳಗಿಸುತ್ತಿದ್ದಾರೆ. 2024ರಲ್ಲಿ ಶೇಖ್ ಹಸೀನಾ (Sheikh Hasina) ಸರ್ಕಾರ ಪತನಗೊಳ್ಳಲು ಕಾರಣವಾದ ವಿದ್ಯಾರ್ಥಿ ನೇತೃತ್ವದ ಹೋರಾಟ ಹಾಗೂ ದಂಗೆಗಳನ್ನು ತಾರಿಖ್ ರಹಮಾನ್ (Tarique Rahman) ಹೊಗಳಿದ್ಧಾರೆ. ಮಾಜಿ ಬಾಂಗ್ಲಾ ಪ್ರಧಾನಿ ಖಾಲಿದಾ ಜಿಯಾ (Khaleda Zia) ಅವರ ಮಗನಾದ 60 ವರ್ಷದ ತಾರಿಖ್ ರಹಮಾನ್, ಬಾಂಗ್ಲಾಗೆ ಎರಡನೇ ಬಾರಿ ವಿಮೋಚನೆ ಆಗಿದೆ ಎಂದಿದ್ದಾರೆ.
1971ರಲ್ಲಿ ಮೊದಲ ವಿಮೋಚನೆ ಆಯಿತು. ಈಗ 2024ರಲ್ಲಿ ಎರಡನೇ ಬಾರಿ ವಿಮೋಚನೆ ಆಗಿದೆ. 2024ರಲ್ಲಿ ಆಗಿದ್ದು ಜನರ ಹೋರಾಟ. ಇದು ದೇಶದ ಪ್ರಜಾತಾಂತ್ರಿಕ ಆಶಯಗಳನ್ನು ಮರಳಿ ಸ್ಥಾಪಿಸುವ ಪ್ರಯತ್ನವಾಗಿದೆ ಎಂದು ತಾರೀಕ್ ರಹಮಾನ್ ಹೇಳಿದ್ದಾರೆ.
ಇದನ್ನೂ ಓದಿ: ಫಾಕ್ಸ್ಕಾನ್ ಘಟಕ; ಕರ್ನಾಟಕ ಮಾದರಿ ಎಂದ ರಾಹುಲ್ ಗಾಂಧಿ; ಇದು ಮೇಕ್ ಇನ್ ಇಂಡಿಯಾ ಎಫೆಕ್ಟ್ ಎಂದ ಕೇಂದ್ರ ಸಚಿವ
ಕಳೆದ ವರ್ಷ ಆರಂಭವಾದ ದಂಗೆಗಳ ಬಳಿಕ ಈಗ ಬಾಂಗ್ಲಾದೇಶದಲ್ಲಿ ಬಿಎನ್ಪಿ ಪಕ್ಷದ ಪರ ಅಲೆಯೇ ಎದ್ದಿದೆ ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷದ ಅಧ್ಯಕ್ಷೆ ಖಾಲಿದಾ ಜಿಯಾಗೆ 80 ವರ್ಷ ವಯಸ್ಸಾಗಿದೆ. ತಮ್ಮ ಮಗ ತಾರಿಖ್ ರಹಮಾನ್ಗೆ ಪಕ್ಷದ ಚುಕ್ಕಾಣಿ ಬಿಟ್ಟುಕೊಡುವ ನಿರೀಕ್ಷೆ ಇದೆ. ಮುಂದಿನ ವರ್ಷ ನಡೆಯಲಿರುವ ಬಾಂಗ್ಲಾ ಚುನಾವಣೆಯಲ್ಲಿ ಬಿಎನ್ಪಿ ಗೆಲುವು ಸಾಧಿಸಿದರೆ ತಾರಿಖ್ ರಹಮಾನ್ ಅವರ ನೇತೃತ್ವದಲ್ಲೇ ಸರ್ಕಾರ ರಚನೆಯಾಗಬಹುದು ಎಂದು ಅಲ್ಲಿಯ ರಾಜಕೀಯ ಪಂಡಿತರು ನಂಬಿದ್ದಾರೆ.
ಎಲ್ಲರನ್ನೂ ಒಳಗೊಳ್ಳುವ ಬಾಂಗ್ಲಾದೇಶದ ನಿರ್ಮಾಣ ಆಗಬೇಕು. ಅದರಲ್ಲಿ ಎಲ್ಲಾ ಸಮುದಾಯಗಳು ಹಾಗೂ ಜನಾಂಗಗಳು ಭಾಗಿಯಾಗಬೇಕು. ಏಕತೆ ಮತ್ತು ಸಮಾನತೆಯು ತಮ್ಮ ಪಕ್ಷದ ನೀತಿಯಲ್ಲಿ ಪ್ರಮುಖವಾಗಿರುತ್ತದೆ. ತಮ್ಮ ಪಕ್ಷವ ದೇಶದಲ್ಲಿ ಶಾಂತಿ, ಶಿಸ್ತು ಮತ್ತು ರಾಜಕೀಯ ಸ್ಥಿರತೆ ತರಲು ಅವಿರತವಾಗಿ ಶ್ರಮಿಸುತ್ತದೆ ಎಂದು ತಾರೀಖ್ ರಹಮಾನ್ ವಾಗ್ದಾನ ನೀಡಿದ್ದಾರೆ.
ಡಿಸೆಂಬರ್ 12ರಂದು ಹತರಾದ ಬಿಎನ್ಪಿ ನಾಯಕ ಉಸ್ಮಾನ್ ಹದಿ ಅವರನ್ನು ಇದೇ ವೇಳೆ ತಾರೀಖ್ ಸ್ಮರಿಸಿದ್ದಾರೆ. ಉಸ್ಮಾನ್ ಹದಿ ಅವರು ಪ್ರಜಾತಂತ್ರ ದೇಶದ ಕನಸು ಕಂಡಿದ್ದರು. ಅವರ ಕನಸು ನನಸು ಮಾಡಲು ಬಿಎನ್ಪಿ ಪಕ್ಷ ಕೆಲಸ ಮಾಡುತ್ತದೆ ಎಂದು ತಾರೀಖ್ ಪ್ರಮಾಣ ಮಾಡಿದ್ದಾರೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Thu, 25 December 25