ಸಿರಿಯಾದ ಮಾಜಿ ಅಧ್ಯಕ್ಷ, ಪದಚ್ಯುತ ಸರ್ವಾಧಿಕಾರಿ ಬಷಾರ್ ಅಸಾದ್ಗೆ ಮರಣದಂಡನೆ ಶಿಕ್ಷೆ
ಸಿರಿಯಾದ ಉಚ್ಚಾಟಿತ ಮಾಜಿ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಬಷಾರ್ ಅಲ್-ಅಸಾದ್ಗೆ ಸಿರಿಯಾದ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಸಿರಿಯಾ ದೇಶದಲ್ಲಿ ದಶಕಗಳ ಕಾಲ ನಡೆಸಿದ ಭಯಾನಕ ಆಡಳಿತ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ನಾಗರಿಕರ ಮೇಲಿನ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಈ ಐತಿಹಾಸಿಕ ತೀರ್ಪು ಹೊರಬಿದ್ದಿದೆ. ಇದೇ ಪ್ರಕರಣದಲ್ಲಿ ಅಸಾದ್ ಅವರ ಕಿರಿಯ ಸಹೋದರ ಮಹೇರ್ ಅಸಾದ್ಗೂ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಡಮಾಸ್ಕಸ್, ಆಗಸ್ಟ್ 11: ಸಿರಿಯಾದಲ್ಲಿ ಸುಮಾರು ಅರ್ಧ ಮಿಲಿಯನ್ (5 ಲಕ್ಷ) ಜನರ ಪ್ರಾಣ ಬಲಿ ಪಡೆದ 14 ವರ್ಷಗಳ ಸುದೀರ್ಘ ಸಂಘರ್ಷದ ಅವಧಿಯಲ್ಲಿ ಎಸಗಲಾದ ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಯುದ್ಧ ಅಪರಾಧಗಳಿಗಾಗಿ ಪದಚ್ಯುತ ಅಧ್ಯಕ್ಷ ಬಷಾರ್ ಅಸಾದ್ಗೆ (Bashar al-Assad) ಸಿರಿಯಾದ ನ್ಯಾಯಾಲಯವೊಂದು ಇಂದು ಅವರ ಅನುಪಸ್ಥಿತಿಯಲ್ಲೇ ಮರಣದಂಡನೆ ಶಿಕ್ಷೆ ವಿಧಿಸಿದೆ. ಕಟ್ಟುನಿಟ್ಟಿನ ಭದ್ರತೆಯ ನಡುವೆ ಈ ತೀರ್ಪನ್ನು ನೀಡಲಾಯಿತು.
ಇದೇ ಪ್ರಕರಣದಲ್ಲಿ ಅಸಾದ್ ಅವರ ಕಿರಿಯ ಸಹೋದರ ಮಹೇರ್ ಅಸಾದ್ಗೂ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. 2011ರ ದಂಗೆಗೆ ಕಾರಣವಾದ ಹಾಗೂ ಸಿರಿಯಾದ ಅಂತರ್ಯುದ್ಧಕ್ಕೆ ಹಾದಿಮಾಡಿಕೊಟ್ಟ ದಕ್ಷಿಣದ ಪ್ರಾಂತ್ಯ ‘ದಾರಾ’ದಲ್ಲಿ ನಡೆಸಲಾದ ಹಿಂಸಾತ್ಮಕ ದಮನಕಾರಿ ಕೃತ್ಯದ ನೇತೃತ್ವ ವಹಿಸಿದ್ದ ಆರೋಪಕ್ಕಾಗಿ ಅಸಾದ್ ಅವರ ತಾಯಿಯ ಕಡೆಯ ಸಂಬಂಧಿ ಆತಿಫ್ ನಜೀಬ್ಗೂ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಇಸ್ರೇಲ್ ಕೈಲಾಗದಿದ್ದರೆ ಸಿರಿಯಾ ನಿಭಾಯಿಸಲಿ; ಹೆಜ್ಬುಲ್ಲಾ ನಿಗ್ರಹಕ್ಕೆ ಟ್ರಂಪ್ ಐಡಿಯಾ
ಸರ್ವಾಧಿಕಾರಿ ಮಾಡಿದ್ದೇನು?:
ಸಿರಿಯಾ ಜನತೆಯ ಮೇಲೆ ದಮನಕಾರಿ ನೀತಿ ಅನುಸರಿಸಿದ್ದು, ಸ್ವಂತ ದೇಶದ ನಾಗರಿಕರ ವಿರುದ್ಧವೇ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ, ಸಾಮೂಹಿಕ ಹತ್ಯೆ ಹಾಗೂ ಯುದ್ಧ ಅಪರಾಧಗಳನ್ನು ಎಸಗಿದ ಆರೋಪಗಳು ಅಸಾದ್ ಅವರ ಮೇಲಿದ್ದವು. ಪ್ರಜಾಸತ್ತಾತ್ಮಕ ಹೋರಾಟ ಮತ್ತು ದಂಗೆಯ ಪರಿಣಾಮವಾಗಿ ಅಧಿಕಾರದಿಂದ ಪದಚ್ಯುತಗೊಂಡ ಅಸಾದ್ಗೆ ನೂತನ ನ್ಯಾಯಾಂಗ ವ್ಯವಸ್ಥೆಯು ಮರಣದಂಡನೆ ವಿಧಿಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿರ್ಧಾರ ತಳೆದಿದೆ. ಸಿರಿಯಾದ ಪಾಲಿಗೆ ಈ ತೀರ್ಪು ಬಹಳ ಮಹತ್ವದ್ದಾಗಿದೆ.
ಸಿರಿಯಾದಲ್ಲಿ ಸಂಭ್ರಮ:
ಅಸಾದ್ ಆಡಳಿತದ ಭೀಕರತೆಗೆ ಬಲಿಯಾದ ಲಕ್ಷಾಂತರ ಕುಟುಂಬಗಳು ಮತ್ತು ಸಿರಿಯಾದ ಸಾರ್ವಜನಿಕರು ಈ ತೀರ್ಪನ್ನು ಸ್ವಾಗತಿಸಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ವಿವಿಧ ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಗಳು ಸಿರಿಯಾದಲ್ಲಿ ನಡೆದ ಅನ್ಯಾಯಕ್ಕೆ ಈ ತೀರ್ಪು ಶಾಸನಬದ್ಧ ಮುಕ್ತಾಯ ನೀಡಲಿದೆ ಎಂದು ಅಭಿಪ್ರಾಯಪಟ್ಟಿವೆ. ದಶಕಗಳ ಕಾಲ ಸಿರಿಯಾವನ್ನು ಭೀತಿಯ ನೆರಳಿನಲ್ಲಿಟ್ಟಿದ್ದ ಸರ್ವಾಧಿಕಾರಿಗೆ ಇದೀಗ ಮರಣದಂಡನೆ ಶಿಕ್ಷೆಯಾಗಿದೆ.
ಇದನ್ನೂ ಓದಿ: ಸಿರಿಯಾದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ತಂಗಿದ್ದ ಹೋಟೆಲ್ ಬಳಿ ಬಾಂಬ್ ಸ್ಫೋಟ
ಡಿಸೆಂಬರ್ 2024ರಲ್ಲಿ ದಂಗೆಕೋರ ಪಡೆಗಳು ಡಮಾಸ್ಕಸ್ ಪ್ರವೇಶಿಸಿ, ಅಸಾದ್ ಅವರ ಸುದೀರ್ಘ ಆಡಳಿತವನ್ನು ಅಂತ್ಯಗೊಳಿಸಿದ ನಂತರ ಬಷಾರ್ ಅಸಾದ್ ಮತ್ತು ಅವರ ಸಹೋದರ ಮಹೇರ್ ಸಿರಿಯಾದಿಂದ ಓಡಿಹೋಗಿ ರಷ್ಯಾದಲ್ಲಿ ಆಶ್ರಯ ಪಡೆದಿದ್ದರು. ಹೀಗಾಗಿ ಇಬ್ಬರ ಮೇಲೂ ಅವರ ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿ ತೀರ್ಪು ನೀಡಲಾಗಿದೆ.
ಮಾರ್ಚ್ 2011ರಲ್ಲಿ ಪ್ರತಿಭಟನೆಗಳು ಭುಗಿಲೆದ್ದ ದಾರಾದಲ್ಲಿ ನಡೆದ ಘಟನೆಗಳು, ಸಿರಿಯಾದ ಆಧುನಿಕ ಇತಿಹಾಸದಲ್ಲಿ ಪ್ರಮುಖ ತಿರುವನ್ನು ನೀಡಿದವು. ಪ್ರತಿಭಟನೆಗಳ ವಿರುದ್ಧ ಸರ್ಕಾರ ಕೈಗೊಂಡ ಹಿಂಸಾತ್ಮಕ ಕ್ರಮವು ದೇಶಾದ್ಯಂತ ಅಶಾಂತಿಯನ್ನು ಹೆಚ್ಚಿಸಿತು. ಇದು ಸುದೀರ್ಘ ಅಂತರ್ಯುದ್ಧವಾಗಿ ರೂಪಾಂತರಗೊಂಡಿತು. ಈ ಸಂಘರ್ಷದಲ್ಲಿ ಲಕ್ಷಾಂತರ ಜನರನ್ನು ಹತ್ಯೆ ಮಾಡಲಾಯಿತು. ಲಕ್ಷಾಂತರ ಜನರು ದೇಶದ ಒಳಗೆ ಮತ್ತು ಹೊರಗೆ ನಿರಾಶ್ರಿತರಾದರು. ಈ ಹಿನ್ನೆಲೆಯಲ್ಲಿ ಸಿರಿಯಾದಲ್ಲಿ ನಡೆದ ನರಮೇಧಕ್ಕೆ ಈ ಗಲ್ಲು ಶಿಕ್ಷೆಯ ತೀರ್ಪು ನ್ಯಾಯ ದೊರಕಿಸಿಕೊಟ್ಟಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




