ಸಚಿವ ಜೈಶಂಕರ್ ಮಾತಿನ ವಿಡಿಯೊ ಪ್ಲೇ ಮಾಡಿ ಭಾರತದ ವಿದೇಶಾಂಗ ನೀತಿಗಳನ್ನು ಹೊಗಳಿದ ಇಮ್ರಾನ್ ಖಾನ್

| Updated By: ರಶ್ಮಿ ಕಲ್ಲಕಟ್ಟ

Updated on: Aug 14, 2022 | 5:49 PM

ನಾವು ಅಗ್ಗದ ತೈಲ ಖರೀದಿದಾಗಿ ರಷ್ಯಾ ಜತೆ ಮಾತನಾಡಿದ್ದೆವು. ಆದರೆ ಈ ಸರ್ಕಾರಕ್ಕೆ ಅಮೆರಿಕದ ಒತ್ತಡಕ್ಕೆ ನೋ ಎಂದು ಹೇಳಲು ಧೈರ್ಯವಿಲ್ಲ. ಇಂಧನ ಬೆಲೆ ಗಗನಕ್ಕೇರಿದೆ. ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ನಾನು ಗುಲಾಮಗಿರಿ ವಿರುದ್ಧವಿದ್ದೇನೆ ಎಂದಿದ್ದಾರೆ ಇಮ್ರಾನ್ ಖಾನ್.

ಸಚಿವ ಜೈಶಂಕರ್ ಮಾತಿನ ವಿಡಿಯೊ ಪ್ಲೇ ಮಾಡಿ ಭಾರತದ ವಿದೇಶಾಂಗ ನೀತಿಗಳನ್ನು ಹೊಗಳಿದ ಇಮ್ರಾನ್ ಖಾನ್
ಇಮ್ರಾನ್ ಖಾನ್
Follow us on

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತೊಮ್ಮೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಗಳಿದ್ದು ರಷ್ಯಾದ ತೈಲವನ್ನು ಖರೀದಿಸಲು ಭಾರತವನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ದೇಶಗಳನ್ನು ಕಟುವಾಗಿ ಟೀಕಿಸಿದ್ದಾರೆ. ಲಾಹೋರ್‌ನಲ್ಲಿ ನಡೆದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಸ್ಲೋವಾಕಿಯಾದಲ್ಲಿ ನಡೆದ ಬ್ರಾಟಿಸ್ಲಾವಾ ಫೋರಂನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಮಾತನಾಡಿರುವ ವಿಡಿಯೊ ತುಣುಕನ್ನು ಪ್ಲೇ ಮಾಡಿದ್ದಾರೆ. ಅದೇ ವೇಳೆ ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸುವುದರ ವಿರುದ್ಧ ಅಮೆರಿಕದ ಒತ್ತಡ ಲೆಕ್ಕಿಸದೆ ದೃಢವಾಗಿ ನಿಂತಿದ್ದಕ್ಕಾಗಿ ಜೈಶಂಕರ್ ಅವರನ್ನು ಶ್ಲಾಘಿಸಿದ್ದಾರೆ. ಪಾಕಿಸ್ತಾನದಂತೆಯೇ ಅದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದ ಭಾರತಕ್ಕೆ ದೃಢವಾದ ನಿಲುವನ್ನು ತೆಗೆದುಕೊಂಡು ತನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ತಮ್ಮ ವಿದೇಶಾಂಗ ನೀತಿಯನ್ನು ಮಾಡಲು ಸಾಧ್ಯವಾದರೆ, ರೇಖೆಯನ್ನು ಎಳೆಯಲು ಅವರು (ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ) ಯಾರು? ಎಂದು ಸಭೆಯಲ್ಲಿ ಖಾನ್ ಕೇಳಿದ್ದಾರೆ. ಅವರು (ಯುಎಸ್) ರಷ್ಯಾದಿಂದ ತೈಲವನ್ನು ಖರೀದಿಸದಂತೆ ಭಾರತಕ್ಕೆ ಆದೇಶಿಸಿದರು. ಭಾರತವು ಅಮೆರಿಕದ ಆಯಕಟ್ಟಿನ ಮಿತ್ರರಾಷ್ಟ್ರ, ಪಾಕಿಸ್ತಾನ ಅಲ್ಲ. ರಷ್ಯಾದ ತೈಲವನ್ನು ಖರೀದಿಸಬೇಡಿ ಎಂದು ಅಮೆರಿಕ ಕೇಳಿದಾಗ ಭಾರತದ ವಿದೇಶಾಂಗ ಸಚಿವರು ಏನು ಹೇಳಿದರು ಎಂಬುದನ್ನು ನೋಡೋಣ ಎಂದು ಜೈಶಂಕರ್ ಮಾತಿನ ವಿಡಿಯೊವನ್ನು ಖಾನ್ ಪ್ಲೇ ಮಾಡಿದ್ದಾರೆ.

ತೈಲ ಖರೀದಿಸಬೇಡಿ ಎನ್ನುವುದಕ್ಕೆ ನೀವು  ಯಾರು ಎಂದು ಜೈಶಂಕರ್ ಕೇಳಿದ್ದಾರೆ. ಯುರೋಪ್ ರಷ್ಯಾದಿಂದ ಅನಿಲ ಖರೀದಿ ಮಾಡುತ್ತಿದೆ. ಜನರಿಗೆ ಅಗತ್ಯವಿದೆ ಹಾಗಾಗಿ ನಾವು ಖರೀದಿ ಮಾಡುತ್ತಿದ್ದೇವೆ.ಇ ದು ಸ್ವತಂತ್ರ ದೇಶದ ನಿಲುವು ಎಂದು ಹೇಳುವ ಮೂಲಕ ಖಾನ್ ಭಾರತವನ್ನು ಶ್ಲಾಘಿಸಿದ್ದಾರೆ. ಅದೇ ವೇಳೆ ರಷ್ಯಾದಿಂದ ಅನಿಲ ಖರೀದಿಸಬೇಡಿ ಎಂಬ ಅಮೆರಿಕದ ಒತ್ತಾಯಕ್ಕೆ ತಲೆ ಬಾಗಿದ ಶೆಹಬಾಜ್ ಶರೀಫ್ ಸರ್ಕಾರವನ್ನು ಖಾನ್ ತರಾಟೆಗೆ ತೆಗೆದುಕೊಂಡಿದ್ದಾರೆ.

ನಾವು ಅಗ್ಗದ ತೈಲ ಖರೀದಿದಾಗಿ ರಷ್ಯಾ ಜತೆ ಮಾತನಾಡಿದ್ದೆವು. ಆದರೆ ಈ ಸರ್ಕಾರಕ್ಕೆ ಅಮೆರಿಕದ ಒತ್ತಡಕ್ಕೆ ನೋ ಎಂದು ಹೇಳಲು ಧೈರ್ಯವಿಲ್ಲ. ಇಂಧನ ಬೆಲೆ ಗಗನಕ್ಕೇರಿದೆ. ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ನಾನು ಗುಲಾಮಗಿರಿ ವಿರುದ್ಧವಿದ್ದೇನೆ ಎಂದಿದ್ದಾರೆ ಇಮ್ರಾನ್ ಖಾನ್.

ಜೂನ್ 3ರಂದು ಲಾಹೋರ್ ಜಲ್ಸಾದಲ್ಲಿ ಜೈಶಂಕರ್ ಅವರ ವಿಡಿಯೊ ಪ್ಲೇ ಮಾಡಲಾಗಿತ್ತು. ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದರ ಬಗ್ಗೆ ಪ್ರಶ್ನೆ ಕೇಳಿದಾಗ, ರಷ್ಯಾದಿಂದ ಅನಿಲ ಖರೀದಿಸುತ್ತಿರುವುದು ಯುದ್ಧಕ್ಕೆ ಮಾಡುವ ಧನ ಸಹಾಯ ಅಲ್ಲವೇ ಎಂದು ಉತ್ತರಿಸಿದ್ದರು. GLOBSEC 2022 ಸ್ಲೋವಾಕಿಯಾದ ಬ್ರಾಟಿಸ್ಲಾವಾ ಫೋರಂನಲ್ಲಿ ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮಿತ್ರರಾಷ್ಟ್ರಗಳು ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ ಜೈಶಂಕರ್ ಈ ಮಾತನ್ನು ಹೇಳಿದ್ದಾರೆ.

ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮವನ್ನು ಸೃಷ್ಟಿಸಿರುವ ಉಕ್ರೇನ್ ಯುದ್ಧದ ಮಧ್ಯೆ ರಷ್ಯಾದಿಂದ ಭಾರತೀಯ ತೈಲ ಖರೀದಿ ಮಾಡುತ್ತಿರುವ ಟೀಕೆಗೆ ಜೈಶಂಕರ್ ಈ ರೀತಿ ತಿರುಗೇಟು ನೀಡಿದ್ದರು. ರಷ್ಯಾದಿಂದ ಭಾರತದ ತೈಲ ಆಮದುಗಳನ್ನು ಸಮರ್ಥಿಸುವಾಗ, ಉಕ್ರೇನ್ ಸಂಘರ್ಷವು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಜೈಶಂಕರ್ ಒತ್ತಿ ಹೇಳಿದರು. ಉಕ್ರೇನ್ ಯುದ್ಧದ ನಡುವೆ ಯುರೋಪ್ ರಷ್ಯಾದಿಂದ ಅನಿಲ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸುತ್ತಿರುವಾಗ ಭಾರತವನ್ನು ಮಾತ್ರ ಏಕೆ ಪ್ರಶ್ನಿಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ರಷ್ಯಾದಿಂದ ಭಾರತದ ತೈಲ ಆಮದುಗಳು ನಡೆಯುತ್ತಿರುವ ಉಕ್ರೇನ್ ಯುದ್ಧಕ್ಕೆ ಧನಸಹಾಯ ನೀಡಿದಂತಾಗುವುದಿಲ್ಲವೇಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, “ನೋಡಿ ನಾನು ವಾದ ಮಾಡಲು ಬಯಸುವುದಿಲ್ಲ. ಭಾರತವು ರಷ್ಯಾ ತೈಲವನ್ನು ಖರೀದಿ ಮಾಡಿ ಯುದ್ಧಕ್ಕೆ ಧನಸಹಾಯ ನೀಡುವುದಾದರೆ ರಷ್ಯಾದಿಂದ ಅನಿಲ ಖರೀದಿಯೂ ಯುದ್ಧಕ್ಕೆ ಧನಸಹಾಯ ಆಗುವುದಿಲ್ಲವೇ? ಕೇವಲ ಭಾರತೀಯ ಹಣ ಮತ್ತು ಭಾರತಕ್ಕೆ ಬರುತ್ತಿರುವ ರಷ್ಯಾದ ತೈಲವು ಯುದ್ಧಕ್ಕೆ ಧನಸಹಾಯ ನೀಡುತ್ತಿದೆ ಎಂದು ಹೇಳುವಾಗ ಯುರೋಪ್‌ಗೆ ಬರುವ ರಷ್ಯಾದ ಅನಿಲವು ಯುದ್ಧಕ್ಕೆ ಧನ ಸಹಾಯ ನೀಡಿದಂತಾಗುತ್ತಿಲ್ಲವೇ ಎಂದು ಕೇಳಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Sun, 14 August 22