ಈ ನಿಮ್ಮ ನಾಟಕಗಳಿಂದ ಸತ್ಯ ಬದಲಾಗೋದಿಲ್ಲ, ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿಗೆ ಭಾರತ ಎಚ್ಚರಿಕೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ಗೆ ಭಾರತ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ವಾಯುಪಡೆಯು ಏಳು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿ ತಮ್ಮ ಬೆನ್ನು ತಾವೇ ತಟ್ಟಿಕೊಂಡರು.ಭಾರತ ಇದನ್ನು ಆಧಾರರಹಿತ ಎಂದು ತಳ್ಳಿಹಾಕಿತು. ಈ ವರ್ಷ ಭಾರತದೊಂದಿಗಿನ ಮಿಲಿಟರಿ ಸಂಘರ್ಷದಲ್ಲಿ ಯುದ್ಧ ವಿಮಾನಗಳನ್ನು ಕಸದಂತೆ ಮಾಡಿದ್ದೇವೆಂದು ಹೇಳಿಕೊಂಡರು.

ವಾಷಿಂಗ್ಟನ್, ಸೆಪ್ಟೆಂಬರ್ 27: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್(Shehbaz Sharif)ಗೆ ಭಾರತ ತಕ್ಕ ಉತ್ತರ ನೀಡಿದೆ. ಷರೀಫ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ವಾಯುಪಡೆಯು ಏಳು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿ ತಮ್ಮ ಬೆನ್ನು ತಾವೇ ತಟ್ಟಿಕೊಂಡರು. ಭಾರತ ಇದನ್ನು ಆಧಾರರಹಿತ ಎಂದು ತಳ್ಳಿಹಾಕಿತು. ಈ ವರ್ಷ ಭಾರತದೊಂದಿಗಿನ ಮಿಲಿಟರಿ ಸಂಘರ್ಷದಲ್ಲಿ ಯುದ್ಧ ವಿಮಾನಗಳನ್ನು ಕಸದಂತೆ ಮಾಡಿದ್ದೇವೆಂದು ಹೇಳಿಕೊಂಡರು.
ಶೆಹಬಾಜ್ ಷರೀಫ್ ಅವರ ಭಾಷಣವನ್ನು ಹಾಸ್ಯಾಸ್ಪದ ಗಿಮಿಕ್ ಎಂದು ಕರೆದ ಭಾರತೀಯ ರಾಜತಾಂತ್ರಿಕರಾಗಿರುವ ಪೆಟಲ್ ಗಹ್ಲೋಟ್, ಶೆಹಬಾಜ್ ಷರೀಫ್ ನಿಜವಾಗಿಯೂ ಶಾಂತಿಯನ್ನು ಬಯಸಿದರೆ, ಪಾಕಿಸ್ತಾನ ತಕ್ಷಣವೇ ಭಯೋತ್ಪಾದಕ ಶಿಬಿರಗಳನ್ನು ಮುಚ್ಚಿ ಎಲ್ಲಾ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಹೇಳಿದರು.
ಈ ನಿಮ್ಮ ನಾಟಕಗಳಿಂದ ಸತ್ಯ ಬದಲಾಗೋದಿಲ್ಲ ಎಂದರು. ಭಾರತದೊಂದಿಗಿನ ಇತ್ತೀಚಿನ ಕದನ ವಿರಾಮದ ಬಗ್ಗೆ ಪಾಕಿಸ್ತಾನದ ಪ್ರಧಾನಿ ವಿಚಿತ್ರ ಮಾಹಿತಿಯನ್ನು ನೀಡಿದ್ದಾರೆ. ಈ ವಿಷಯದ ಬಗ್ಗೆ ದಾಖಲೆಗಳು ಸ್ಪಷ್ಟವಾಗಿವೆ. ಮೇ 9 ರವರೆಗೆ, ಪಾಕಿಸ್ತಾನವು ಭಾರತದ ಮೇಲೆ ಹೆಚ್ಚಿನ ದಾಳಿಗಳ ಬೆದರಿಕೆ ಹಾಕುತ್ತಿತ್ತು.
ಆದರೆ ಮೇ 10 ರಂದು, ಪಾಕಿಸ್ತಾನ ಸೇನೆಯು ನೇರವಾಗಿ ಹೋರಾಟವನ್ನು ನಿಲ್ಲಿಸುವಂತೆ ನಮಗೆ ಮನವಿ ಮಾಡಿತು. ಏತನ್ಮಧ್ಯೆ, ಭಾರತೀಯ ಸೇನೆಯು ಹಲವಾರು ಪಾಕಿಸ್ತಾನಿ ವಾಯುನೆಲೆಗಳನ್ನು ನಾಶಪಡಿಸಿತ್ತು. ಆ ಹಾನಿಯ ಚಿತ್ರಗಳು ಸಾರ್ವಜನಿಕವಾಗಿ ಲಭ್ಯವಿದೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಪಾಕಿಸ್ತಾನದ ಪ್ರಧಾನಿಯ ಜೊತೆ ಅಮೆರಿಕ ಅಧ್ಯಕ್ಷ ಟ್ರಂಪ್ ಇಂದು ಮಾತುಕತೆ; ಭಾರತದ ಪಾಲಿಗಿದು ಏಕೆ ಮುಖ್ಯ?
ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ, ಮತ್ತು ಆಪರೇಷನ್ ಸಿಂಧೂರ್ ಸಮಯದಲ್ಲಿ ಬಹಾವಲ್ಪುರ್ ಮತ್ತು ಮುರಿಡ್ಕೆ ಭಯೋತ್ಪಾದಕ ಶಿಬಿರಗಳಲ್ಲಿ ಭಾರತೀಯ ಸೇನೆಯಿಂದ ಕೊಲ್ಲಲ್ಪಟ್ಟ ಭಯೋತ್ಪಾದಕರ ಹಲವಾರು ಛಾಯಾಚಿತ್ರಗಳನ್ನು ನಾವು ನೋಡಿದ್ದೇವೆ ಎಂದು ಹೇಳಿದರು.
ಪಾಕಿಸ್ತಾನವು ತಕ್ಷಣವೇ ಎಲ್ಲಾ ಭಯೋತ್ಪಾದಕ ಶಿಬಿರಗಳನ್ನು ಮುಚ್ಚಿ ಭಾರತದಲ್ಲಿ ಬೇಕಾಗಿರುವ ಭಯೋತ್ಪಾದಕರನ್ನು ಹಸ್ತಾಂತರಿಸಬೇಕು. ದ್ವೇಷ, ಧರ್ಮಾಂಧತೆ ಮತ್ತು ಅಸಹಿಷ್ಣುತೆಯನ್ನು ಪಾಲಿಸುವ ದೇಶವು ಈ ಸಭೆಗೆ ನಂಬಿಕೆಯ ವಿಷಯಗಳ ಬಗ್ಗೆ ಉಪದೇಶ ನೀಡುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
