ಅಮೆರಿಕದ ಸುಂಕ ಏರಿಕೆ ಬೆನ್ನಲ್ಲೇ ಭಾರತದ ಬೆಂಬಲಕ್ಕೆ ನಿಂತ ಇಸ್ರೇಲ್

ಭಾರತದ ಮೇಲಿನ ಆಮದು ವಸ್ತುಗಳ ಮೇಲಿನ ಸುಂಕವನ್ನು ಅಮೆರಿಕ ಶೇ. 50ಕ್ಕೆ ಏರಿಸಿದೆ. ಇದರ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾರತಕ್ಕೆ ಬೆಂಬಲಿಸಿದ್ದಾರೆ. ಇದೀಗ ನಡೆಯುತ್ತಿರುವ ಸುಂಕ ವಿವಾದದಲ್ಲಿ ಭಾರತಕ್ಕೆ ನೆತನ್ಯಾಹು ಬೆಂಬಲ ವ್ಯಕ್ತಪಡಿಸಿದ್ದಾರೆ. ನೆತನ್ಯಾಹು ಭಾರತವನ್ನು ಇಸ್ರೇಲ್ ಮತ್ತು ಅಮೆರಿಕ ಎರಡಕ್ಕೂ "ಘನ ಪಾಲುದಾರ". ಅಮೆರಿಕದ ನಡುವೆ ಇರುವ ಅಡೆತಡೆಯನ್ನು ಭಾರತ ನಿಭಾಯಿಸಬಹುದು. ಇದು ತಾತ್ಕಾಲಿಕ ಅಡಚಣೆಯಾಗಿದೆ ಎಂದು ಕರೆದಿದ್ದಾರೆ.

ಅಮೆರಿಕದ ಸುಂಕ ಏರಿಕೆ ಬೆನ್ನಲ್ಲೇ ಭಾರತದ ಬೆಂಬಲಕ್ಕೆ ನಿಂತ ಇಸ್ರೇಲ್
Benjamin Netanyahu

Updated on: Aug 07, 2025 | 8:23 PM

ನವದೆಹಲಿ, ಆಗಸ್ಟ್ 7: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತೀಯ ಸರಕುಗಳ ಮೇಲೆ ತೀವ್ರ ಸುಂಕಗಳನ್ನು ಘೋಷಿಸಿದ ನಂತರ ಭಾರತ ಮತ್ತು ಅಮೆರಿಕದ ನಡುವೆ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಇಂದು ಭಾರತ ಮತ್ತು ಅಮೆರಿಕ ಎರಡೂ ರಾಷ್ಟ್ರಗಳು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಅಮೆರಿಕ “ಗಮನಾರ್ಹವಾದ ಸಾಮಾನ್ಯ ನೆಲೆಯನ್ನು ಹೊಂದಿವೆ” ಎಂದು ನೆತನ್ಯಾಹು ಹೇಳಿದ್ದಾರೆ. ಹಾಗೇ, ಅದಕ್ಕೆ ಎರಡೂ ದೇಶಗಳ ನಡುವಿನ ಮಾತುಕತೆಯ ಮೂಲಕ ಪರಿಹಾರ ಕೂಡ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎನ್‌ಎನ್-ನ್ಯೂಸ್ 18 ವರದಿಯ ಪ್ರಕಾರ, ಇದೀಗ ನಡೆಯುತ್ತಿರುವ ಸುಂಕ ವಿವಾದದಲ್ಲಿ ಭಾರತದ ನಿಲುವಿಗೆ ಬೆಂಜಮಿನ್ ನೆತನ್ಯಾಹು ಬಲವಾದ ಬೆಂಬಲ ವ್ಯಕ್ತಪಡಿಸಿದ್ದು, “ವಾಷಿಂಗ್ಟನ್ ಡಿಸಿಯಲ್ಲಿ ಭಾರತವು ಘನ ಪಾಲುದಾರ ಎಂಬ ಮೂಲಭೂತ ನಂಬಿಕೆ ಇದೆ” ಎಂದು ಹೇಳಿದ್ದಾರೆ. ಭಾರತದ ಪ್ರಾದೇಶಿಕ ಮಹತ್ವವನ್ನು ಎತ್ತಿ ತೋರಿಸಿದ ನೆತನ್ಯಾಹು, ಇಸ್ರೇಲಿ ನಾಯಕ ಭಾರತವನ್ನು “ಏಷ್ಯಾದಲ್ಲಿ ಎದ್ದು ಕಾಣುವ ದೇಶ” ಎಂದು ಕರೆದಿದ್ದಾರೆ.

ಇದನ್ನೂ ಓದಿ: ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಟ್ರಂಪ್​ಗೆ ಸವಾಲೆಸೆದ ಪ್ರಧಾನಿ ಮೋದಿ

ಭಾರತೀಯ ಸರಕುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸಿದ ಕೇವಲ ಒಂದು ವಾರದ ನಂತರ, ಟ್ರಂಪ್ ನಿನ್ನೆ (ಬುಧವಾರ) ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ಘೋಷಿಸಿದ್ದರು. ಇದು ಭಾರತ ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸುತ್ತಿರುವುದಕ್ಕೆ ಅಮೆರಿಕ ವಿಧಿಸುತ್ತಿರುವ “ದಂಡ” ಎಂದು ಟ್ರಂಪ್ ಕರೆದಿದ್ದಾರೆ. ಒಟ್ಟಾರೆಯಾಗಿ ಶೇ. 50ರಷ್ಟು ಸುಂಕವು ಈಗ ಒಂದು ದೇಶದ ಮೇಲೆ ವಿಧಿಸಲಾದ ಅತ್ಯಧಿಕವಾಗಿದೆ.

ಇದನ್ನೂ ಓದಿ: ಅಮೆರಿಕದ ಸರಕುಗಳ ಮೇಲೆ ಭಾರತವೂ ಶೇ.50ರಷ್ಟು ಸುಂಕ ವಿಧಿಸಬೇಕು; ಟ್ರಂಪ್ ವಿರುದ್ಧ ಶಶಿ ತರೂರ್ ಕಿಡಿ

ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರಧಾನಿ ನರೇಂದ್ರ ಮೋದಿ ಇಂದು ಬಲವಾದ ಸಂದೇಶವನ್ನು ನೀಡಿದ್ದರು. ಭಾರತವು ತನ್ನ ರೈತರು, ಜಾನುವಾರು ಸಾಕಣೆದಾರರು ಮತ್ತು ಮೀನುಗಾರರ ಹಿತಾಸಕ್ತಿಗಳ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. “ಭಾರತ ತನ್ನ ರೈತರು, ಜಾನುವಾರು ಸಾಕಣೆದಾರರು ಮತ್ತು ಮೀನುಗಾರ ಸಹೋದರ ಸಹೋದರಿಯರ ಹಿತಾಸಕ್ತಿಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ನಾನು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ವೈಯಕ್ತಿಕವಾಗಿ ತಿಳಿದಿದೆ. ಆದರೆ ನಾನು ಅದಕ್ಕೆ ಸಿದ್ಧನಿದ್ದೇನೆ. ಭಾರತ ತನ್ನ ರೈತರೊಂದಿಗೆ ದೃಢವಾಗಿ ನಿಲ್ಲುತ್ತದೆ ಮತ್ತು ಅವರ ಕಲ್ಯಾಣಕ್ಕಾಗಿ ನಾನು ಏನು ಬೇಕಾದರೂ ಎದುರಿಸಲು ಸಿದ್ಧನಿದ್ದೇನೆ” ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ