ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸುರಕ್ಷತೆಗೆ ಮೋದಿ ಒತ್ತು, ಜಾಗತಿಕ ಶಾಂತಿ, ಇಂಧನ ಭದ್ರತೆಯ ಸಂದೇಶ ಸಾರಿದ ಮೋದಿ

ಪ್ರಧಾನಿ ಮೋದಿ ಎಸ್​ಸಿಒ ಶೃಂಗಸಭೆಯಲ್ಲಿ ಇರಾನ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಹಾರ್ಮುಜ್ ಜಲಸಂಧಿ ಮತ್ತು ಚಾಬಹಾರ್ ಬಂದರಿನಲ್ಲಿ ಭಾರತೀಯ ಹಡಗುಗಳ ಸುರಕ್ಷತೆಗೆ ಒತ್ತು ನೀಡಿದರು. ರಷ್ಯಾ ಅಧ್ಯಕ್ಷ ಪುಟಿನ್‌ಗೆ ಉಕ್ರೇನ್ ಯುದ್ಧ ನಿಲ್ಲಿಸಲು ಆಗ್ರಹಿಸಿ ಜಾಗತಿಕ ಶಾಂತಿಯ ಸಂದೇಶ ಸಾರಿದರು. ಭಾರತದ ಇಂಧನ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಮೋದಿಯವರ ಪ್ರಯತ್ನಗಳು ಈ ಸಭೆಯಲ್ಲಿ ಪ್ರಮುಖ ಪಾತ್ರ ವಹಿಸಿದವು.

ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸುರಕ್ಷತೆಗೆ ಮೋದಿ ಒತ್ತು, ಜಾಗತಿಕ ಶಾಂತಿ, ಇಂಧನ ಭದ್ರತೆಯ ಸಂದೇಶ ಸಾರಿದ ಮೋದಿ
ನರೇಂದ್ರ ಮೋದಿ

Updated on: Sep 01, 2026 | 10:49 AM

ಬಿಷ್ಕೆಕ್, ಸೆಪ್ಟೆಂಬರ್ 1: ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ಆಯೋಜಿಸಲಾದ 26ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು, ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇರಾನ್ ನಡುವೆ ಯುದ್ಧ ಭುಗಿಲೆದ್ದ ನಂತರ ಮೊದಲ ಬಾರಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಉನ್ನತ ಮಟ್ಟದ ಮಾತುಕತೆ ನಡೆಸಿದರು.

ಇದೇ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಪ್ರಮುಖ ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಿದ ಪ್ರಧಾನಿ, ಪ್ರಾದೇಶಿಕ ಭದ್ರತೆ, ಜಾಗತಿಕ ಇಂಧನ ಬಿಕ್ಕಟ್ಟು ಹಾಗೂ ಯುದ್ಧ ತಡೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಉಪಸ್ಥಿತರಿದ್ದ ಈ ಸಭೆಯಲ್ಲಿ, ಭಾರತದ ಇಂಧನ ಭದ್ರತೆಗೆ ಅತ್ಯಂತ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿ ಹಾಗೂ ಚಾಬಹಾರ್ ಬಂದರು ಮಾರ್ಗಗಳಲ್ಲಿ ಸರಕು ಹಡಗುಗಳ ಸಂಚಾರಕ್ಕೆ ಯಾವುದೇ ಧಕ್ಕೆಯಾಗದಂತೆ ರಕ್ಷಣೆ ನೀಡಲು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಮತ್ತಷ್ಟು ಓದಿ:
‘ನಾವು ಯುದ್ಧಗಳಿಂದ ಯುದ್ಧದ ಅಂತ್ಯದತ್ತ ಸಾಗಬೇಕಿದೆ’; ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ಸಂದೇಶ

ಶಾಂತಿಯ ಸಂದೇಶ: ಪ್ರಧಾನಿ ಮೋದಿಯವರ ಭೇಟಿಗೆ ಮುನ್ನ ಮಾತನಾಡಿದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್, ಇರಾನ್ ಯುದ್ಧವನ್ನು ಬಯಸುವುದಿಲ್ಲ ಎಂದು ಅಮೆರಿಕಕ್ಕೆ ಶಾಂತಿಯ ಸಂಕೇತ ರವಾನಿಸಿದರು. (ಆದರೆ ಇದೇ ವೇಳೆ ಹಾರ್ಮುಜ್ ಮೇಲೆ ಹಾರುತ್ತಿದ್ದ ಅಮೆರಿಕದ MQ-9 ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿರುವುದಾಗಿ ವರದಿಯಾಗಿದೆ).

ಯುದ್ಧದ ಅಂತ್ಯದತ್ತ ಹೆಜ್ಜೆ ಇಡಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ ಮೋದಿ, ಉಕ್ರೇನ್ ಯುದ್ಧವನ್ನು ತಕ್ಷಣ ನಿಲ್ಲಿಸಲು ಆಗ್ರಹಿಸಿದರು. ಯುದ್ಧದಲ್ಲಿ ಕಳೆದ ಪ್ರತಿಯೊಂದು ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ. ಶಾಂತಿಯತ್ತ ಇಟ್ಟ ಪ್ರತಿಯೊಂದು ಹೆಜ್ಜೆಯೂ ಭರವಸೆಯನ್ನು ತುಂಬುತ್ತದೆ. ನಾವು ಅಂತ್ಯವಿಲ್ಲದ ಯುದ್ಧದಿಂದ, ಯುದ್ಧದ ಅಂತ್ಯದ ದಿಕ್ಕಿನತ್ತ ಸಾಗಬೇಕಾಗಿದೆ ಎಂದು ಪ್ರಧಾನಿ ಖಚಿತ ಸಂದೇಶ ರವಾನಿಸಿದರು.

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಇರಾನ್ ಅಧ್ಯಕ್ಷರು ಭಾಗವಹಿಸಿದ್ದ ಈ ಸಮಾವೇಶದಲ್ಲಿ ಪ್ರಾದೇಶಿಕ ಸಂಪರ್ಕ ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಣ, ಡಿಜಿಟಲ್ ಆರ್ಥಿಕತೆ ಮತ್ತು ಪೂರೈಕೆ ಸರಪಳಿಯ ಸುಸ್ಥಿರತೆಯ ಬಗ್ಗೆ ವಿಸ್ತೃತ ಒಪ್ಪಂದಗಳಿಗೆ ಒತ್ತು ನೀಡಲಾಯಿತು.

ಉಜ್ಬೇಕಿಸ್ತಾನದ ಭೇಟಿ ಮುಗಿಸಿ ಕಿರ್ಗಿಸ್ತಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಮಧ್ಯ ಏಷ್ಯಾದ ರಾಷ್ಟ್ರಗಳ ಜೊತೆ ವ್ಯಾಪಾರ, ನಿರ್ಣಾಯಕ ಖನಿಜಗಳು ಹಾಗೂ ಸಾರಿಗೆ ಸಂಪರ್ಕ ವೃದ್ಧಿಗೆ ಹೊಸ ವೇಗ ನೀಡಿದ್ದಾರೆ.

2001ರಲ್ಲಿ ಆರಂಭವಾದ ಶಾಂಘೈ ಸಹಕಾರ ಸಂಸ್ಥೆಗೆ (SCO) 2017 ರಲ್ಲಿ ಭಾರತ ಮತ್ತು ಪಾಕಿಸ್ತಾನ ಪೂರ್ಣ ಪ್ರಮಾಣದ ಸದಸ್ಯರಾಗಿ ಸೇರ್ಪಡೆಗೊಂಡವು; ಇರಾನ್ 2023 ರಲ್ಲಿ ಹಾಗೂ ಬೆಲಾರಸ್ 2024 ರಲ್ಲಿ ಅಧಿಕೃತ ಸದಸ್ಯ ರಾಷ್ಟ್ರಗಳಾಗಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:49 am, Tue, 1 September 26

Loading...
Unable to load recommendations.
Follow Us