ಪಾಕ್-ಅಫ್ಘಾನ್ ಗಡಿಯಲ್ಲಿ ಭೀಕರ ಸೇನಾ ದಾಳಿ, ಉದ್ವಿಗ್ನತೆ: 35 ನಾಗರಿಕರ ಸಾವು

ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಪಾಕಿಸ್ತಾನದ ಭೂ ಕಾರ್ಯಾಚರಣೆಯಲ್ಲಿ 35ಕ್ಕೂ ಹೆಚ್ಚು ನಾಗರಿಕರು, ಮಕ್ಕಳು ಮತ್ತು ವೃದ್ಧರು ಸಾವನ್ನಪ್ಪಿದ್ದಾರೆ. ಕರಾಚಿ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆದಿದ್ದು, ಅಫ್ಘಾನಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಘಟನೆಯಿಂದ ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವಿನ ರಾಜತಾಂತ್ರಿಕ ಹಾಗೂ ಗಡಿ ಉದ್ವಿಗ್ನತೆ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದು, ದಕ್ಷಿಣ ಏಷ್ಯಾ ಭದ್ರತೆಗೆ ದೊಡ್ಡ ಸವಾಲಾಗಿದೆ.

ಪಾಕ್-ಅಫ್ಘಾನ್ ಗಡಿಯಲ್ಲಿ ಭೀಕರ ಸೇನಾ ದಾಳಿ, ಉದ್ವಿಗ್ನತೆ: 35 ನಾಗರಿಕರ ಸಾವು
ಸಾಂದರ್ಭಿಕ ಚಿತ್ರ

Updated on: Jun 29, 2026 | 10:26 AM

ಮುಖ್ಯಾಂಶಗಳು

  • ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್ ಗಡಿ ಪ್ರದೇಶದಲ್ಲಿ ಹಿಂಸಾಚಾರ
  • ಮಕ್ಕಳು, ವೃದ್ಧರು ಸೇರಿದಂತೆ 35 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ
  • 'ಪಾಕಿಸ್ತಾನ ರೇಂಜರ್ಸ್' ಪ್ರಾದೇಶಿಕ ಪ್ರಧಾನ ಕಚೇರಿಯ ಮೇಲೆ ಭೀಕರ ಭಯೋತ್ಪಾದಕ ದಾಳಿ

ಕಾಬೂಲ್, ಜೂ.29: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್ ಗಡಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಭದ್ರತಾ ಪಡೆಗಳು ನಡೆಸಿದ ಭೀಕರ ಭೂ ಕಾರ್ಯಾಚರಣೆಯಲ್ಲಿ ಮಕ್ಕಳು, ವೃದ್ಧರು ಸೇರಿದಂತೆ 35 ಕ್ಕೂ ಹೆಚ್ಚು ನಾಗರಿಕರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವಿನ ರಾಜತಾಂತ್ರಿಕ ಹಾಗೂ ಗಡಿ ಉದ್ವಿಗ್ನತೆ ಅತ್ಯಂತ ಗಂಭೀರ ಹಂತಕ್ಕೆ ತಲುಪಿದೆ.

ಇತ್ತೀಚೆಗಷ್ಟೇ ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯಲ್ಲಿರುವ ‘ಪಾಕಿಸ್ತಾನ ರೇಂಜರ್ಸ್’ ಪ್ರಾದೇಶಿಕ ಪ್ರಧಾನ ಕಚೇರಿಯ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯನ್ನು ಅಫ್ಘಾನಿಸ್ತಾನ ಮೂಲದ ಉಗ್ರಗಾಮಿಗಳೇ ಮಾಡಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಗಂಭೀರವಾಗಿ ಆರೋಪಿಸಿತ್ತು. ಈ ಉಗ್ರರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಭದ್ರತಾ ಪಡೆಗಳು ಅಫ್ಘಾನ್ ಗಡಿಯುದ್ದಕ್ಕೂ ಬೃಹತ್ ಮತ್ತು ಕಟ್ಟುನಿಟ್ಟಿನ ಭೂ ಕಾರ್ಯಾಚರಣೆಯನ್ನು ಕೈಗೊಂಡಿದ್ದವು.

ಈ ಕಾರ್ಯಾಚರಣೆಯ ವೇಳೆ ಗಡಿ ಭಾಗದಲ್ಲಿ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಗಳಿಗೆ ಸಿಲುಕಿ 35 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಹೆಚ್ಚಿನವರು ಯಾವುದೇ ತಪ್ಪು ಮಾಡದ ಅಮಾಯಕ ಮಕ್ಕಳು ಮತ್ತು ವೃದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ದಾಳಿಯನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನ ಸೇನೆ, ತಾನು ನಡೆಸಿದ ಕಾರ್ಯಾಚರಣೆಯಲ್ಲಿ ಗಡಿಯಾಚೆಗಿನ ಭದ್ರತೆಗೆ ಭಂಗ ತರುತ್ತಿದ್ದ 35 ಮಂದಿಯನ್ನು ಹತ್ಯೆ ಮಾಡಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.

ಇದನ್ನೂ ಓದಿ: ಪತ್ನಿ ಬಿಟ್ಟು ಹೋಗಿದ್ದಕ್ಕೆ ಇಡೀ ಪ್ರಪಂಚದ ಮೇಲೆ ಸೇಡು: ಮುಂಬೈನಲ್ಲಿ 15 ಸಾವಿರ ಜನರನ್ನು ಮುಗಿಸಲು ಇಲಿ ವಿಷದಿಂದಲೇ ಮಾತ್ರೆ ತಯಾರಿಸಿದ್ದ ಸೈಕೋ

ಈ ಇತ್ತೀಚಿನ ಬೆಳವಣಿಗೆಯು ಗಡಿಯಾಚೆಗಿನ ಹಿಂಸಾಚಾರವನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಫ್ಘಾನಿಸ್ತಾನದ ಆಡಳಿತವು ತನ್ನ ನಾಗರಿಕರ ಸಾವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗಡಿಯಲ್ಲಿ ಸೇನಾ ಪಡೆಗಳನ್ನು ಜಮಾಯಿಸುತ್ತಿದೆ. ಎರಡು ನೆರೆ ರಾಷ್ಟ್ರಗಳ ನಡುವೆ ಉಂಟಾಗಿರುವ ಈ ಉದ್ವಿಗ್ನತೆಯು ದಕ್ಷಿಣ ಏಷ್ಯಾದ ಭದ್ರತೆಗೆ ಹೊಸ ಸವಾಲನ್ನು ತಂದೊಡ್ಡಿದ್ದು, ಗಡಿಯುದ್ದಕ್ಕೂ ಹೈ ಅಲರ್ಟ್ ಘೋಷಿಸಲಾಗಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us