AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistan Crisis: ಸ್ವಯಂಕೃತ ಅಪರಾಧಗಳಿಗೆ ತತ್ತರಿಸಿದ ಪಾಕಿಸ್ತಾನ; ಆರ್ಥಿಕ ಅಧಃಪತನಕ್ಕೆ ಭಾರತ ದ್ವೇಷವೇ ಮುಖ್ಯ ಕಾರಣ

ಭಾರತದ ಮೇಲಿನ ದ್ವೇಷವನ್ನು ಸುದೀರ್ಘ ಅವಧಿಗೆ ಕಾಪಾಡಿಕೊಂಡು ಬಂದಿದ್ದಕ್ಕೆ ಮತ್ತು ಭಾರತವನ್ನು ಕಾಡಲೆಂದು ಭಯೋತ್ಪಾದಕರನ್ನು ಹುಟ್ಟುಹಾಕಿದ್ದಕ್ಕೆ ಇದೀಗ ಪಾಕಿಸ್ತಾನವು ಬೆಲೆ ತೆರುತ್ತಿದೆ.

Pakistan Crisis: ಸ್ವಯಂಕೃತ ಅಪರಾಧಗಳಿಗೆ ತತ್ತರಿಸಿದ ಪಾಕಿಸ್ತಾನ; ಆರ್ಥಿಕ ಅಧಃಪತನಕ್ಕೆ ಭಾರತ ದ್ವೇಷವೇ ಮುಖ್ಯ ಕಾರಣ
ಪಾಕಿಸ್ತಾನದಲ್ಲಿ ಗೋಧಿಹಿಟ್ಟಿಗಾಗಿ ಜನರು ಪರದಾಡುತ್ತಿದ್ದಾರೆ.Image Credit source: AP
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Feb 06, 2023 | 2:59 PM

ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು (Pakistan Economic Crisis) ಇದೀಗ ವಿಶ್ವದ ಗಮನ ಸೆಳೆದಿದೆ. ರಾಜಕೀಯ ಆರ್ಥಿಕತೆ (Political Economy) ನಿರ್ವಹಣೆಯಲ್ಲಿ ಸರ್ಕಾರಗಳು ಸತತವಾಗಿ ತಪ್ಪು ಮಾಡುತ್ತಾ ಹೋದರೆ ಎಂಥ ಅನಾಹುತ ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಪಾಕಿಸ್ತಾನವು ಜೀವಂತ ಉದಾಹರಣೆಯಾಗಿ ಜಗತ್ತಿನ ಎದುರು ಇದೆ. ತೀವ್ರವಾದಕ್ಕೆ ಇಂಬುಕೊಡುವ, ಸರ್ಕಾರವೇ ಭಯೋತ್ಪಾದನೆಯ ಪರವಾಗಿ ನಿಲ್ಲುವ ಮತ್ತು ಬೇರೊಂದು ದೇಶದ ಮೇಲಿನ ದ್ವೇಷವನ್ನು ಆಧಾರವಾಗಿ ಕಟ್ಟುವ ಆರ್ಥಿಕತೆಯು ಕಾಲಕ್ರಮೇಣ ಕುಸಿಯುತ್ತದೆ ಎನ್ನುವ ಸಾರ್ವಕಾಲಿಕ ಸತ್ಯಗಳು ಪಾಕಿಸ್ತಾನದ ರೂಪದಲ್ಲಿ ಮತ್ತೊಮ್ಮೆ ಜಗತ್ತನ್ನು ಎಚ್ಚರಿಸುತ್ತಿವೆ.

ಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಹಲವು ಬಾರಿ ಸರ್ಕಾರಗಳು ಬದಲಾವಣೆಯಾದವು. ಆದರೆ ಭಯೋತ್ಪಾದನೆ ಹಾಗೂ ಭಾರತವನ್ನು ದ್ವೇಷಿಸುವ ಸರ್ಕಾರಿ ನೀತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಭಾರತವನ್ನು ದ್ವೇಷಿಸುವ ಭರದಲ್ಲಿ, ಜಿಹಾದ್ ಬೆಂಬಲಿಸುವ ಉಮೇದಿನಲ್ಲಿದ್ದ ಸರ್ಕಾರಕ್ಕೆ ತನ್ನದೇ ನೆಲದಲ್ಲಿ ಭಯೋತ್ಪಾದನೆಯು ಗಟ್ಟಿಯಾಗಿ ಬೇರು ಬೀಡುತ್ತಿರುವುದು ಅರಿವಾಗಲಿಲ್ಲ. ಯಾವುದೇ ಹೂಡಿಕೆಗೆ ಚಕ್ರಬಡ್ಡಿಯ ಪ್ರತಿಫಲ (Compounding Effect) ಇರುತ್ತದೆ. ತಪ್ಪುಗಳ ಮೇಲೆ ತಪ್ಪು ಮಾಡಿದ ಪಾಕಿಸ್ತಾನಕ್ಕೆ ಇದೀಗ ತನ್ನ ತಪ್ಪು ಹೂಡಿಕೆಯ ಫಲ ಸಿಗುತ್ತಿದೆ.

ದೀರ್ಘಾವಧಿಯಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸಲು, ರಫ್ತು ಉದ್ಯಮಗಳಿಗೆ ಉತ್ತೇಜಿಸಲು ಪಾಕಿಸ್ತಾನ ಆಡಳಿತ ಗಮನ ಹರಿಸಲೇ ಇಲ್ಲ. ಅದರ ಪರಿಣಾಮ ಎನ್ನುವಂತೆ ರಫ್ತು ಕಡಿಮೆಯಾಗಿ, ಆಮದು ಹೆಚ್ಚಾಗುತ್ತಾ ಪಾಕಿಸ್ತಾನದಲ್ಲಿ ವಿದೇಶಿ ಮೀಸಲು ಬಿಕ್ಕಟ್ಟು ತೀವ್ರವಾಯಿತು.

ದಿವಾಳಿಯಾಗುವ ಸ್ಥಿತಿಗೆ ತಲುಪಿರುವ ಪಾಕಿಸ್ತಾನವು 7 ಶತಕೋಟಿ ಡಾಲರ್​ಗಳಷ್ಟು ಪರಿಹಾರವನ್ನು (ಸಾಲಮನ್ನಾ ಸೇರಿ) ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಕೋರಿದೆ. ಐಎಂಎಫ್ ಪ್ರತಿನಿಧಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿ ತಮ್ಮ ಷರತ್ತುಗಳನ್ನು ಪುನರುಚ್ಚರಿಸಿದ್ದಾರೆ. ಈ ಷರತ್ತುಗಳು ಬಿಸಿತುಪ್ಪವಾಗಿ ಪರಿಣಮಿಸಿದ್ದು, ಒಪ್ಪಿಕೊಂಡರೆ ಜನರ ಆಕ್ರೋಶ-ಒಪ್ಪದಿದ್ದರೆ ಆರ್ಥಿಕ ಕುಸಿತದ ಅಡಕತ್ತರಿಗೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಸಿಲುಕಿದ್ದಾರೆ. ತೆರಿಗೆ ಹೆಚ್ಚಳ, ಸಬ್ಸಿಡಿ ಕಡಿತ, ಮುಕ್ತ ಮಾರುಕಟ್ಟೆ ನಿಯಮಗಳಲ್ಲಿ ಬದಲಾವಣೆ ಮಾಡಬೇಕೆನ್ನುವ ಷರತ್ತುಗಳನ್ನು ಒಪ್ಪುವ ಸ್ಥಿತಿಯಲ್ಲಿ ಷರೀಫ್ ಅವರು ಇಲ್ಲ.

ಇದನ್ನೂ ಓದಿ: ಸರ್ಕಾರಿ ನೌಕರರ ಸಂಬಳ ಕಡಿತ, ಪೆಟ್ರೋಲ್ ಮೇಲೆ ಸುಂಕ ಹೆಚ್ಚಳ; ಪಾಕಿಸ್ತಾನಕ್ಕೆ ಕಠಿಣ ಷರತ್ತು ವಿಧಿಸಿದ ಐಎಂಎಫ್

Shehbaz-Sheriff

ಶೆಹಬಾಜ್ ಷರೀಫ್ (ಎಡಚಿತ್ರ), ಪಾಕಿಸ್ತಾನದಲ್ಲಿ ಗೋಧಿಹಿಟ್ಟಿಗೆ ಮುಗಿಬಿದ್ದಿರುವ ಜನ (ಬಲಚಿತ್ರ)

ಬಡ್ಡಿ ಪಾವತಿಗೂ ಪರದಾಟ

ಪಾಕಿಸ್ತಾನದ ಆರ್ಥಿಕ ಕುಸಿತದ ಬಗ್ಗೆ ಜಾಗತಿಕ ರೇಟಿಂಗ್ ಏಜೆನ್ಸಿ ‘ಮೂಡಿಸ್’ ಹೇಳಿಕೆಯೊಂದನ್ನು ಪ್ರಕಟಿಸಿದೆ. ‘ಪಾಕಿಸ್ತಾನವು ಹಳೇ ಸಾಲ ಮತ್ತು ಸಾಲದ ಮೇಲಿನ ಬಡ್ಡಿ ಪಾವತಿಗೂ ಪರದಾಡುತ್ತಿದೆ. 15.5 ಶತಕೋಟಿ ಅಮೆರಿಕನ್ ಡಾಲರ್​ಗಳಷ್ಟು ಹಣವನ್ನು ಪಾಕಿಸ್ತಾನವು ಬಾಹ್ಯ ಸಾಲಗಳಿಗಾಗಿ ಪಾವತಿಸಬೇಕಿದೆ. ಇದು ದೇಶದ (ಸರ್ಕಾರದ) ಒಟ್ಟು ವರಮಾನದ ಶೇ 25 ದಾಟುತ್ತದೆ. 2017-18ರ ಹಣಕಾಸು ವರ್ಷದಲ್ಲಿ ಪಾಕಿಸ್ತಾನದ ಬಾಹ್ಯ ಸಾಲಗಳು 66 ಶತಕೋಟಿ ಅಮೆರಿಕನ್ ಡಾಲರ್ ಇತ್ತು. ಇಂದು ಅದು 100 ಶತಕೋಟಿ ಅಮೆರಿಕನ್ ಡಾಲರ್​ಗಳಷ್ಟಾಗಿದೆ’ ಎಂದು ತಿಳಿಸಿದೆ.

ಪಾಕಿಸ್ತಾನದ ಕರೆನ್ಸಿ ಮೌಲ್ಯವು ಅಮೆರಿಕ ಡಾಲರ್ ಎದುರು ವ್ಯಾಪಕವಾಗಿ ಕುಸಿದಿದೆ. ಪ್ರಸ್ತುತ ಒಂದು ಅಮೆರಿಕನ್ ಡಾಲರ್​ಗೆ 267.48 ಪಾಕಿಸ್ತಾನಿ ರೂಪಾಯಿ ಮೌಲ್ಯವಿದೆ. ಪಾಕಿಸ್ತಾನದ ಸಾಲದ ಬಿಕ್ಕಟ್ಟು ಮತ್ತಷ್ಟು ಹೆಚ್ಚಲು ಇದು ಮತ್ತೊಂದು ಕಾರಣವಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನವು 33 ಶತಕೋಟಿ ಡಾಲರ್​​ಗಳಷ್ಟು ಮೊತ್ತವನ್ನು ಮರುಪಾವತಿ ಮಾಡಬೇಕಿದೆ. ಆದರೆ ಇದು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆಡಳಿತ ನಡೆಸುವವರು ಆರ್ಥಿಕ ವಿದ್ಯಮಾನಗಳ ನಿರ್ವಹಣೆಯಲ್ಲಿ ಹಿಡಿತ ಕಳೆದುಕೊಂಡಿದ್ದರಿಂದ ಪಾಕಿಸ್ತಾನದ ಕೋಟ್ಯಂತರ ಜನರು ಇದೀಗ ಬಡತನ ಮತ್ತು ಹಸಿವಿನಿಂದ ಕಂಗಾಲಾಗಿದ್ದಾರೆ. ಅತ್ಯಗತ್ಯ ದಿನಬಳಕೆ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅಸಾಧ್ಯ ಎನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ವಿದೇಶಿ ಮೀಸಲು ನಿಧಿಯು ಕೇವಲ 3.67 ಶತಕೋಟಿ ಡಾಲರ್​ಗೆ ಕುಸಿದಿದೆ. ಈ ಹಣದಿಂದ ಕೇವಲ ಮೂರು ವಾರಗಳ ಅವಧಿಗೆ ದೇಶವನ್ನು ನಿರ್ವಹಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.

ಜಿಡಿಪಿ ಕುಸಿತ, ಜಾಗತಿಕ ಆರ್ಥಿಕ ಹಿನ್ನಡೆ, ರಷ್ಯಾ-ಉಕ್ರೇನ್ ಯುದ್ಧದಿಂದ ಜಾಗತಿಕ ಮಟ್ಟದಲ್ಲಿ ಹೆಚ್ಚಾದ ಹಣದುಬ್ಬರ, ಪಾಕಿಸ್ತಾನಿ ಕರೆನ್ಸಿ ಮೌಲ್ಯ ಕುಸಿತದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ದುಬಾರಿ ತೆರಬೇಕಾದ ಪರಿಸ್ಥಿತಿ ನಿರ್ಮಾಣ, ಪ್ರವಾಹ, ಬೆಳೆನಾಶ, ಮನೆಗಳ ಕುಸಿತ… ಹೀಗೆ ಪಾಕಿಸ್ತಾನದ ಇಂದಿನ ದುಸ್ಥಿತಿಗೆ ಒಂದೆರೆಡಲ್ಲ ಹಲವು ನೇರ ಮತ್ತು ಪರೋಕ್ಷ ಕಾರಣಗಳು ಇವೆ ಎಂದು ‘ಏಷ್ಯನ್ ಲೈಟ್’ ವರದಿಯು ಪ್ರತಿಪಾದಿಸಿದೆ.

ಇದನ್ನೂ ಓದಿ: ಮಿತ್ರರಾಷ್ಟ್ರಗಳ ತಿರಸ್ಕಾರ, ಐಎಂಎಫ್‌ ಕಠಿಣ ಷರತ್ತು; ದಿವಾಳಿಯಾಗುವತ್ತ ಪಾಕಿಸ್ತಾನ

Pakistan Economic Crisis

ಸಾಂದರ್ಭಿಕ ಚಿತ್ರ

ಪೋಷಿದವರನ್ನೇ ಕೊಲ್ಲುತ್ತಿರುವ ಉಗ್ರರು

ಪಾಕಿಸ್ತಾನದ ಇಂದಿನ ಸ್ಥಿತಿಗೆ ಬಾಹ್ಯ ಬೆಳವಣಿಗೆಗಳ ಕೊಡುಗೆಗಿಂತಲೂ ಆಂತರಿಕ ವಿದ್ಯಮಾನಗಳೇ ಮುಖ್ಯ ಕಾರಣವಾಗಿವೆ. ಪಾಕಿಸ್ತಾನದ ಆಡಳಿತಗಾರರು ಹಲವು ದಶಕಗಳಿಂದ ತಪ್ಪು ನೀತಿಗಳನ್ನೇ ಅನುಸರಿಸಿದರು. ತೀವ್ರವಾದ ಮತ್ತು ಭಯೋತ್ಪಾದನೆಗೆ ಸತತವಾಗಿ ಪ್ರೋತ್ಸಾಹದಿಂದ ದೇಶದ ಸಂಪತ್ತು ತಪ್ಪು ಉದ್ದೇಶಗಳಿಗಾಗಿ ವಿನಿಯೋಗವಾಯಿತು. ತಕ್ಷಣದ ಫಲಗಳಿಗಾಗಿ ಭಾರತದ ಮೇಲೆ ದ್ವೇಷ ಮತ್ತು ಯುದ್ಧ ಮಾಡಿದ ಸರ್ಕಾರಗಳು ದೀರ್ಘಾವಧಿಯಲ್ಲಿ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸಲೇ ಇಲ್ಲ.

ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್​ಐ ನೀರೆರೆದು ಪೋಷಿಸಿದ ತೆಹ್ರೀಕ್​-ಎ-ತಾಲೀಬಾನ್​ನಂಥ ಉಗ್ರಗಾಮಿ ಸಂಘಟನೆಗಳು ಇದೀಗ ಪಾಕಿಸ್ತಾನ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿವೆ. ಅಮಾಯಕ ನಾಗರಿಕರು ಮತ್ತು ಪೊಲೀಸರನ್ನೇ ಕೊಲ್ಲುತ್ತಿವೆ. ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಭದ್ರತೆಯ ಆತಂಕವನ್ನೂ ಪಾಕಿಸ್ತಾನವು ಎದುರಿಸಬೇಕಾಗಿದೆ. ಇದು ಭಾರತದ ಮೇಲಿನ ದ್ವೇಷವನ್ನು ಕಾಪಾಡಿಕೊಂಡು ಬಂದಿದ್ದರ ಮತ್ತು ಭಾರತವನ್ನು ಕಾಡಲೆಂದು ಭಯೋತ್ಪಾದಕರನ್ನು ಹುಟ್ಟುಹಾಕಿದ್ದರ ಫಲ.

ಅಭಿವೃದ್ಧಿಗೆ ಒತ್ತು ನೀಡದ, ಆರ್ಥಿಕವಾಗಿ ಬಲ ತುಂಬದ ಯೋಜನೆಗಳಿಗೆ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಎನ್ನುವ ಪಾಠವನ್ನು ಪಾಕಿಸ್ತಾನದದಿಂದ ಇತರೆಲ್ಲ ದೇಶಗಳು ಕಲಿಯಬೇಕಿದೆ. ಇಷ್ಟೆಲ್ಲಾ ಸಂಕಷ್ಟ ಅನುಭವಿಸಿದರೂ, ಪದೇಪದೆ ದಿವಾಳಿಯಂಚಿಗೆ ಜಾರಿದರೂ ಪಾಕಿಸ್ತಾನವು ದೇಶದಲ್ಲಿ ವಿತ್ತೀಯ ಶಿಸ್ತು ತರಲು, ಹಣಕಾಸು ನೀತಿಗಳಲ್ಲಿ ಮಹತ್ವದ ಬದಲಾವಣೆ ಮಾಡಲು ಇಂದಿಗೂ ಮುಂದಾಗುತ್ತಿಲ್ಲ. ಅಲ್ಲಿ ಸರ್ಕಾರವನ್ನು ಮುನ್ನಡೆಸುವ ಹಂತದಲ್ಲಿರುವವರಿಗೆ ಭ್ರಷ್ಟಾಚಾರ ಮತ್ತು ವಂಶರಾಜಕಾರಣವೇ ದೇಶಕ್ಕಿಂತ ಮುಖ್ಯವಾಗಿದೆ. ಪಾಕಿಸ್ತಾನಕ್ಕೆ ಬಂದಿರುವ ಈ ಆಪತ್ತಿನಿಂದ ಪಾರಾಗುವುದಾಗಲಿ, ಚೇತರಿಸಿಕೊಂಡು ಮುನ್ನಡೆಯುವುದು ಅಷ್ಟು ಸುಲಭವಲ್ಲ.

ಇದನ್ನೂ ಓದಿ: Pakistan Economic Crisis: ಐಎಂಎಫ್ ಷರತ್ತು ಒಪ್ಪಿದರೆ ರಾಜಕೀಯ ಬಿಕ್ಕಟ್ಟು, ಒಪ್ಪದಿದ್ದರೆ ದಿವಾಳಿ; ಅಡಕತ್ತರಿಯಲ್ಲಿ ಪಾಕಿಸ್ತಾನ

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Mon, 6 February 23

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ