ಇಸ್ರೇಲ್ ಕ್ಯಾನ್ಸರ್ ಇದ್ದಂತೆ : ಪಾಕ್ ಸಚಿವ ಖ್ವಾಜಾ ಆಸಿಫ್ ವಿವಾದಾತ್ಮಕ ಹೇಳಿಕೆ, ನೆತನ್ಯಾಹು ತೀವ್ರ ವಾಗ್ದಾಳಿ

ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಇಸ್ರೇಲ್ ಅನ್ನು "ಕ್ಯಾನ್ಸರ್" ಎಂದು ಕರೆದು ತೀವ್ರ ವಿವಾದಕ್ಕೆ ಕಾರಣರಾಗಿದ್ದಾರೆ. ಅವರ ಈ ಹೇಳಿಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ಕಠಿಣ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಮಾತುಕತೆಗಳ ಪ್ರಯತ್ನಗಳ ನಡುವೆಯೇ ಈ ವಿವಾದಾತ್ಮಕ ಹೇಳಿಕೆ ರಾಜತಾಂತ್ರಿಕ ಬಿಕ್ಕಟ್ಟನ್ನು ಉಂಟುಮಾಡಿದೆ, ಶಾಂತಿ ಪ್ರಕ್ರಿಯೆಗೆ ಅಡ್ಡಿಯಾಗುವ ಆತಂಕವಿದೆ.

ಇಸ್ರೇಲ್  ಕ್ಯಾನ್ಸರ್ ಇದ್ದಂತೆ : ಪಾಕ್ ಸಚಿವ ಖ್ವಾಜಾ ಆಸಿಫ್ ವಿವಾದಾತ್ಮಕ ಹೇಳಿಕೆ, ನೆತನ್ಯಾಹು ತೀವ್ರ ವಾಗ್ದಾಳಿ
ಖ್ವಾಜಾ ಆಸಿಫ್
Image Credit source: x.com

Updated on: Apr 10, 2026 | 11:04 AM

ಇಸ್ಲಾಮಾಬಾದ್, ಏಪ್ರಿಲ್ 10: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಬಾಂಬ್‌ಗಳ ಸದ್ದು ಕೇಳಿಸುತ್ತಿರುವಂತೆಯೇ, ಇತ್ತ ರಾಜತಾಂತ್ರಿಕ ವೇದಿಕೆಯಲ್ಲಿ ಪಾಕಿಸ್ತಾನ ಮತ್ತು ಇಸ್ರೇಲ್(Israel) ನಡುವೆ ‘ಪದಗಳ ಸಮರ’ ತಾರಕಕ್ಕೇರಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ಪಾಕ್ ರಕ್ಷಣಾ ಸಚಿವರ ಸ್ಫೋಟಕ ಹೇಳಿಕೆ ಜಾಗತಿಕ ರಾಜಕಾರಣದಲ್ಲಿ ಕಿಚ್ಚು ಹಚ್ಚಿದೆ.

ಇಸ್ರೇಲ್ ಒಂದು ಕ್ಯಾನ್ಸರ್: ಪಾಕ್ ಸಚಿವ ಖವಾಜಾ ಆಸಿಫ್ ಆಕ್ರೋಶ, ನೆತನ್ಯಾಹು ತಿರುಗೇಟು
ಅಮೆರಿಕ ಮತ್ತು ಇರಾನ್ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗಿದ್ದರೂ, ಲೆಬನಾನ್ ಮತ್ತು ಗಾಜಾದಲ್ಲಿ ನಡೆಯುತ್ತಿರುವ ರಕ್ತಪಾತವು ಹೊಸ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಇಸ್ರೇಲ್ ವಿರುದ್ಧ ನಡೆಸಿರುವ ವಾಗ್ದಾಳಿ ಈಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಕೆರಳಿಸಿದೆ.

ಖ್ವಾಜಾ ಆಸಿಫ್ ಅವರ ವಿವಾದಾತ್ಮಕ ಹೇಳಿಕೆ
ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧವಾಗುತ್ತಿರುವಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ  ಆಸಿಫ್, ಇಸ್ರೇಲ್ ಅನ್ನು ಕಟುವಾದ ಪದಗಳಿಂದ ಟೀಕಿಸಿದ್ದಾರೆ. ಇಸ್ರೇಲ್ ಒಂದು ಶಾಪ ಮತ್ತು ಕ್ಯಾನ್ಸರ್ ಇದ್ದಂತೆ  ಅದನ್ನು  ನರಕದಲ್ಲಿ ಸುಟ್ಟುಹಾಕಿಬಿಡಬೇಕು ಎಂದು ಹೇಳಿದ್ದರು.

ಗಾಜಾ ಮತ್ತು ಇರಾನ್ ನಂತರ ಈಗ ಲೆಬನಾನ್‌ನಲ್ಲಿ ಇಸ್ರೇಲ್ ಅಮಾಯಕರ ರಕ್ತವನ್ನು ಸುರಿಸುತ್ತಿದೆ ಎಂದು ಅವರು ಆರೋಪಿಸಿದರು. ವಿವಾದ ತಾರಕಕ್ಕೇರುತ್ತಿದ್ದಂತೆಯೇ ಆಸಿಫ್ ಅವರು ತಮ್ಮ ಟ್ವೀಟ್ ಅನ್ನು ಅಳಿಸಿ ಹಾಕಿದರಾದರೂ, ಅಷ್ಟರಲ್ಲೇ ಅದು ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು.

ಸಚಿವ ಆಸಿಫ್ ಅವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಶಾಂತಿ ಪ್ರಕ್ರಿಯೆಯ ಭಾಗವೆಂದು ಹೇಳಿಕೊಳ್ಳುವ ದೇಶದ ಸಚಿವರು ಇಂತಹ ಅವಹೇಳನಕಾರಿ ಮತ್ತು ಅಪಾಯಕಾರಿ ಹೇಳಿಕೆ ನೀಡುವುದನ್ನು ಯಾವುದೇ ಸರ್ಕಾರ ಸಹಿಸುವುದಿಲ್ಲ ಎಂದು ಅವರು ಗುಡುಗಿದ್ದಾರೆ.

ಮತ್ತಷ್ಟು ಓದಿ: ಇಸ್ರೇಲ್ ಹಿಜ್ಬೊಲ್ಲಾ ಮೇಲೆ ದಾಳಿ ಮುಂದುವರಿಸುತ್ತದೆ; ನೆತನ್ಯಾಹು ಎಚ್ಚರಿಕೆ

ಪ್ರಧಾನಿ ಶೆಹಬಾಜ್ ಷರೀಫ್ ಅವರು ಕದನ ವಿರಾಮವು ಲೆಬನಾನ್ ಸೇರಿದಂತೆ ಇಡೀ ಪ್ರದೇಶಕ್ಕೆ ಅನ್ವಯಿಸುತ್ತದೆ ಎಂದು ವಾದಿಸುತ್ತಿದ್ದಾರೆ. ಕದನ ವಿರಾಮವು ಇರಾನ್ ಮತ್ತು ಅಮೆರಿಕಕ್ಕೆ ಮಾತ್ರ ಸೀಮಿತವಾಗಿದ್ದು, ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ವಿರುದ್ಧದ ಮಿಲಿಟರಿ ಕ್ರಮ ಮುಂದುವರಿಯಲಿದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.

ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ?
ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ ಅಮೆರಿಕದೊಂದಿಗೆ ನಡೆಯಲಿರುವ ಶಾಂತಿ ಮಾತುಕತೆಗಳನ್ನು ಮುಂದೂಡುವುದಾಗಿ ಇರಾನ್ ಈಗಾಗಲೇ ಎಚ್ಚರಿಕೆ ನೀಡಿದೆ. ಮುಂದಿನ ವಾರ ಅಮೆರಿಕದಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಮಾತುಕತೆಗಳು ನಡೆಯುವ ನಿರೀಕ್ಷೆಯಿದ್ದರೂ,  ಖ್ವಾಜಾ ಆಸಿಫ್ ಅವರಂತಹ ಕಠಿಣ ಹೇಳಿಕೆಗಳು ಮತ್ತು ಸತತ ದಾಳಿಗಳು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ.

ಒಂದು ಕಡೆ ಶಾಂತಿಗಾಗಿ ಹರಸಾಹಸ ನಡೆಯುತ್ತಿದ್ದರೆ, ಇನ್ನೊಂದು ಕಡೆ ನಾಯಕರ ನಡುವಿನ ವೈಯಕ್ತಿಕ ವಾಗ್ದಾಳಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಪಾಕಿಸ್ತಾನವು ಮಧ್ಯಸ್ಥಿಕೆದಾರನ ಪಾತ್ರ ವಹಿಸಲು ಹವಣಿಸುತ್ತಿರುವ ಈ ಸಮಯದಲ್ಲಿ ಇಸ್ರೇಲ್ ಅನ್ನು ‘ಕ್ಯಾನ್ಸರ್’ ಎಂದು ಕರೆದಿರುವುದು ರಾಜತಾಂತ್ರಿಕವಾಗಿ ಇಸ್ಲಾಮಾಬಾದ್‌ಗೆ ಮುಳುವಾಗುವ ಸಾಧ್ಯತೆಯಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us