
ಇಸ್ಲಾಮಾಬಾದ್, ಆಗಸ್ಟ್ 19: ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಮಿಲಿಟರಿ ಕಾರ್ಯಾಚರಣೆಯನ್ನು ಆಧರಿಸಿದ ‘ಆಪರೇಷನ್ ಸಿಂಧೂರ್’ (Operation Sindoor) ಕುರಿತಾದ ಹೊಸ ಡಾಕ್ಯುಮೆಂಟರಿ ಸಿನಿಮಾದ ಬಿಡುಗಡೆಯು ಪಾಕಿಸ್ತಾನದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮಧ್ಯರಾತ್ರಿಯವರೆಗೂ ಈ ಸಿನಿಮಾ ನೋಡಿದ ಪಾಕಿಸ್ತಾನ ಸೇನೆಯು ತಡರಾತ್ರಿ 2 ಗಂಟೆಗೆ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರ ಸಂದರ್ಶನ ಹಾಗೂ ‘ಆಪರೇಷನ್ ಸಿಂಧೂರ್’ ಕುರಿತಾದ ದೃಶ್ಯಾವಳಿಗಳನ್ನು ಒಳಗೊಂಡ ಸಿನಿಮಾ/ ಸಾಕ್ಷ್ಯಚಿತ್ರದ ಪ್ರಸಾರದ ಬೆನ್ನಲ್ಲೇ, ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗ ಮಧ್ಯರಾತ್ರಿ ತನ್ನ ಅಸಮಾಧಾನ ಹೊರಹಾಕಿ ಈ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದೆ.
ಪಾಕಿಸ್ತಾನ ಸೇನೆಯ ವಕ್ತಾರರು ಭಾರತದ ಈ ಸಿನಿಮಾವನ್ನು “ದುರಂತ ಮತ್ತು ಹಾಸ್ಯಾಸ್ಪದ” ಎಂದು ಟೀಕಿಸಿದೆ. ಭಾರತವು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ದೇಶೀಯ ರಾಜಕೀಯ ಲಾಭಕ್ಕಾಗಿ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುತ್ತಿದೆ ಎಂದು ಪಾಕ್ ಸೇನೆ ಆರೋಪಿಸಿದೆ. ಆದರೆ, ಪಾಕಿಸ್ತಾನದ ನಿಜವಾದ ಮುಖ ಹಾಗೂ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಈ ಸಿನಿಮಾ ಬಯಲು ಮಾಡಿರುವುದನ್ನು ಪಾಕ್ ಸೇನೆಗೆ ತಡೆದುಕೊಳ್ಳಲಾಗುತ್ತಿಲ್ಲ. ಈ ಸಿನಿಮಾದಿಂದ ಕಂಗೆಟ್ಟಿರುವ ಪಾಕಿಸ್ತಾನ ಸಹಜವಾಗಿಯೇ ಭಾರತದ ಮೇಲೆ ಮತ್ತೊಮ್ಮೆ ಗೂಬೆ ಕೂರಿಸುವ ಪ್ರಯತ್ನ ಮಾಡಿದೆ.
ಇದನ್ನೂ ಓದಿ: ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ ದ್ರೌಪದಿ ಮುರ್ಮು
ಪಾಕಿಸ್ತಾನಿ ಸಶಸ್ತ್ರ ಪಡೆಗಳ ಅಧಿಕೃತ ವಕ್ತಾರರಾದ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ನ ಮಹಾನಿರ್ದೇಶಕರು ತಡರಾತ್ರಿ 2 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ಹೊರಡಿಸಿದ್ದು, “ಭಾರತೀಯ ವಿಷಯ ಸೃಷ್ಟಿಕರ್ತರು ಸೋಕಾಲ್ಡ್ ‘ಆಪರೇಷನ್ ಸಿಂಧೂರ್’ ಕುರಿತು ಭಾರತದ ಹಿರಿಯ ರಾಜಕೀಯ ಮತ್ತು ಮಿಲಿಟರಿ ನಾಯಕರನ್ನು ಒಳಗೊಂಡ ಅತ್ಯಂತ ಡ್ರಾಮಾಟಿಕ್, ವರ್ಣರಂಜಿತ ಹಾಗೂ ಸತ್ಯಕ್ಕೆ ದೂರವಾದ ವಿಷಯವನ್ನು ಡಾಕ್ಯುಮೆಂಟರಿ ರೂಪದಲ್ಲಿ ಪ್ರಸಾರ ಮಾಡಿದ್ದಾರೆ” ಎಂದು ಹೇಳಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿ ಮತ್ತು ಆಪರೇಷನ್ ಸಿಂಧೂರ್ ಹೇಗೆ ಅಂತ್ಯಗೊಂಡಿತು ಎಂಬುದರ ಕುರಿತು ಈ ಸಾಕ್ಷ್ಯಚಿತ್ರದ ವಿವರಣೆಯು ವಿರೋಧಾಭಾಸಗಳಿಂದ ಕೂಡಿದೆ ಎಂದು ಪಾಕಿಸ್ತಾನ ಪ್ರತಿಪಾದಿಸಿದೆ.
ಕಳೆದ ವರ್ಷ ಏಪ್ರಿಲ್ನಲ್ಲಿ ಸಂಭವಿಸಿದ ಭೀಕರ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ (PoK) ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ವೈಮಾನಿಕ ದಾಳಿಗಳನ್ನು ನಡೆಸಿದ್ದವು. ಈ ಕಾರ್ಯಾಚರಣೆಯು ಉಭಯ ದೇಶಗಳ ನಡುವೆ 88 ಗಂಟೆಗಳ ಕಾಲ ತೀವ್ರ ಮಿಲಿಟರಿ ಸಂಘರ್ಷಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಭಾರತದ ಸಹಿಷ್ಣುತೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ; ‘ಆಪರೇಷನ್ ಸಿಂಧೂರ್’ ಕುರಿತು ಅಜಿತ್ ದೋವಲ್ ಸಂದೇಶ
ಈ ಕಾರ್ಯಾಚರಣೆಯ ನೈಜ ಘಟನೆಗಳು ಮತ್ತು ನಿರ್ಧಾರಗಳನ್ನು ಆಧರಿಸಿ ನಿರ್ಮಿಸಲಾದ ಈ ಹೊಸ ಸಿನಿಮಾ ಜಾಗತಿಕವಾಗಿ ತೆರೆಕಾಣುತ್ತಿದ್ದು, ಇದು ಪಾಕಿಸ್ತಾನದ ಸೇನೆ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಮುಜುಗರ ಮತ್ತು ಆತಂಕವನ್ನು ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಪಾಕ್ ಸೇನೆಯು ತಡರಾತ್ರಿಯಲ್ಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
‘ಡಿಕ್ಲಾಸಿಫೈಡ್: ಆಪರೇಷನ್ ಸಿಂಧೂರ್’ ಸರಣಿಯಲ್ಲಿ ಎನ್ಎಸ್ಎ ಅಜಿತ್ ದೋವಲ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸೇರಿದಂತೆ ಪ್ರಮುಖ ನಾಯಕರ ವಿವರಣೆಗಳಿವೆ. ಭಾರತದ ಔದಾರ್ಯ ಮತ್ತು ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬಾರದು ಎಂದಿದ್ದ ಅಜಿತ್ ದೋವಲ್, ಪರಿಣಾಮ ಏನೇ ಇರಲಿ ಅಪಾಯಗಳನ್ನು ಎದುರಿಸಿ ತೀವ್ರವಾಗಿ ತಿರುಗೇಟು ನೀಡುವ ಸಾಮರ್ಥ್ಯ ಭಾರತಕ್ಕಿದೆ ಎಂದು ಪ್ರತಿಪಾದಿಸಿದ್ದರು.
26 ಜನರು ಪ್ರಾಣಕಳೆದುಕೊಂಡಿದ್ದ ಪಹಲ್ಗಾಮ್ ಉಗ್ರರ ದಾಳಿಗೆ ಕಾರಣರಾದ ಶತ್ರುಗಳ ಶಿಬಿರಗಳನ್ನು ಧ್ವಂಸಗೊಳಿಸುವುದೇ ಈ ಮಿಲಿಟರಿ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದರು. ಏಪ್ರಿಲ್ 16, 2025ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥರು ಮಾಡಿದ ಭಾಷಣಕ್ಕೂ ಹಾಗೂ ಏಪ್ರಿಲ್ 22, 2025ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿಗೂ ನಡುವೆ ಭಾರತವು ಈ ಸಾಕ್ಷ್ಯಚಿತ್ರದ ಮೂಲಕ ಉದ್ದೇಶಪೂರ್ವಕವಾಗಿ ನಂಟು ಕಲ್ಪಿಸಲು ಯತ್ನಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸುವ ಮೂಲಕ ತನ್ನ ತಪ್ಪನ್ನು ಮತ್ತೊಮ್ಮೆ ಮರೆಮಾಡಿಕೊಳ್ಳುವ ವಿಫಲ ಪ್ರಯತ್ನ ಮಾಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Wed, 19 August 26