Video: ಕೀವ್​​ನಿಂದ ಪಾರಾಗಲು ಸಹಾಯ ಮಾಡಿದ್ದು ಭಾರತೀಯ ರಾಯಭಾರಿ ಕಚೇರಿ ಎಂದ ಪಾಕಿಸ್ತಾನಿ ಹುಡುಗಿ; ಪಿಎಂ ಮೋದಿಗೆ ಕೃತಜ್ಞತೆ

ಉಕ್ರೇನ್​ ಮೇಲೆ ರಷ್ಯಾ ಫೆ.24ರಂದು ಯುದ್ಧ ಸಾರಿದೆ. ಆಗಿನಿಂದಲೂ ಅಲ್ಲಿನ ಪರಿಸ್ಥಿತಿ ಭೀಕರವಾಗಿದೆ. ಆ ದೇಶದಲ್ಲಿ ಭಾರತೀಯರು ಸೇರಿ ಹಲವು ದೇಶಗಳ ಪ್ರಜೆಗಳು ಸಿಲುಕಿದ್ದರು. ಅದರಲ್ಲೀಗ ಭಾರತದ ಸುಮಾರು 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಾಪಸ್​ ಕರೆದುಕೊಂಡು ಬರಲಾಗಿದೆ.

Video: ಕೀವ್​​ನಿಂದ ಪಾರಾಗಲು ಸಹಾಯ ಮಾಡಿದ್ದು ಭಾರತೀಯ ರಾಯಭಾರಿ ಕಚೇರಿ ಎಂದ ಪಾಕಿಸ್ತಾನಿ ಹುಡುಗಿ; ಪಿಎಂ ಮೋದಿಗೆ ಕೃತಜ್ಞತೆ
ಪಾಕಿಸ್ತಾನದ ವಿದ್ಯಾರ್ಥಿನಿ
Updated By: Lakshmi Hegde

Updated on: Mar 09, 2022 | 9:44 AM

ಯುದ್ಧ ಪೀಡಿತ ಉಕ್ರೇನ್​ ರಾಜಧಾನಿ, ರಷ್ಯಾದ ತೀವ್ರ ದಾಳಿಗೆ ತುತ್ತಾಗಿರುವ ನಗರಗಳಲ್ಲಿ ಒಂದಾದ ಕೀವ್​​ನಲ್ಲಿದ್ದ ಪಾಕಿಸ್ತಾನಿ ಹುಡುಗಿ ಆಸ್ಮಾ ಶಫೀಕ್​ ಎಂಬಾಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರ, ರಾಯಭಾರಿ ಕಚೇರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈಕೆಯನ್ನು ಭಾರತೀಯ ರಾಯಭಾರಿ ಕಚೇರಿಯೇ ಕೀವ್​​ನಿಂದ ಸ್ಥಳಾಂತರ ಮಾಡಿದ್ದು,  ಈ ಉಪಕಾರವನ್ನು ಎಂದಿಗೀ ಮರೆಯೋದಿಲ್ಲ ಎಂದು ಹೇಳಿದ್ದಾಳೆ. ನಾನು ಸೇರಿ ಹಲವರು ತುಂಬ ಸಂಕಷ್ಟದ ಸಮಯದಲ್ಲಿ ಇದ್ದೆವು. ನಮ್ಮೆಲ್ಲರನ್ನೂ ಭಾರತೀಯ ರಾಯಭಾರಿ ಕಚೇರಿಯೇ ಸುರಕ್ಷಿತವಾಗಿ ಕೀವ್​ನಿಂದ ಸ್ಥಳಾಂತರ ಮಾಡಿದೆ ಎಂದು  ಆಸ್ಮಾ ತಿಳಿಸಿದ್ದಾಳೆ.

ನಮ್ಮನ್ನು ಯುದ್ಧ ನೆಲದಿಂದ ಪಾರು ಮಾಡಿದ್ದಕ್ಕೆ ಭಾರತೀಯ ರಾಯಭಾರಿ ಕಚೇರಿಗೆ ಧನ್ಯವಾದಗಳು. ಹಾಗೇ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಖಂಡಿತ ಇನ್ನು ನಾವು ನಮ್ಮ ದೇಶವನ್ನು ಸುರಕ್ಷಿತವಾಗಿ ಸೇರಿಕೊಳ್ಳುತ್ತೇವೆ ಎಂಬ ಆಶಯವಿದೆ ಎಂದು ಹೇಳಿದ್ದಾಳೆ. ಈ ವಿಡಿಯೋ ಕೂಡ ವೈರಲ್ ಆಗಿದೆ. ಆಸ್ಮಾ ಸದ್ಯ ಕೀವ್​​ನಿಂದ ಉಕ್ರೇನ್​ನ ಪಶ್ಚಿಮ ಗಡಿ ರಾಷ್ಟ್ರಗಳತ್ತ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ಪಾಕಿಸ್ತಾನಕ್ಕೆ ತೆರಳಲಿದ್ದು, ಶೀಘ್ರವೇ ತಮ್ಮ ಕುಟುಂಬ ಸೇರಿಕೊಳ್ಳುತ್ತಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯಾ-ಉಕ್ರೇನ್​ ಯುದ್ಧ

ಉಕ್ರೇನ್​ ಮೇಲೆ ರಷ್ಯಾ ಫೆ.24ರಂದು ಯುದ್ಧ ಸಾರಿದೆ. ಆಗಿನಿಂದಲೂ ಅಲ್ಲಿನ ಪರಿಸ್ಥಿತಿ ಭೀಕರವಾಗಿದೆ. ಆ ದೇಶದಲ್ಲಿ ಭಾರತೀಯರು ಸೇರಿ ಹಲವು ದೇಶಗಳ ಪ್ರಜೆಗಳು ಸಿಲುಕಿದ್ದರು. ಅದರಲ್ಲೀಗ ಭಾರತದ ಸುಮಾರು 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಾಪಸ್​ ಕರೆದುಕೊಂಡು ಬರಲಾಗಿದೆ. ಉಕ್ರೇನ್​ನಲ್ಲಿರುವ ಭಾರತೀಯರ ರಕ್ಷಣೆ ಮಾಡಲೆಂದೇ ಕೇಂದ್ರ ಸರ್ಕಾರ ಆಪರೇಶನ್​ ಗಂಗಾ ಶುರು ಮಾಡಿಕೊಂಡಿತ್ತು. ಈ ಕಾರ್ಯಾಚರಣೆಗೆ ಭಾರತದ ವಾಯುಪಡೆ ಸಾಥ್​ ನೀಡಿತ್ತು. ಭಾರತ ನಡೆಸಿದ್ದ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಯಿಂದಾಗಿ ಉಕ್ರೇನ್​ ಮತ್ತು ರಷ್ಯಾಗಳು ಭಾರತೀಯರ ಸ್ಥಳಾಂತರಕ್ಕೆ ಎಲ್ಲ ರೀತಿಯ ಸಹಕಾರ ನೀಡಿವೆ. ಉಕ್ರೇನ್​ ನೆರೆ ರಾಷ್ಟ್ರಗಳಾದ ರೊಮೇನಿಯಾ, ಪೋಲ್ಯಾಂಡ್, ಮೊಲ್ಡೋವಾ, ಹಂಗೇರಿ ಮೂಲಕ ಭಾರತೀಯರನ್ನು ಸ್ಥಳಾಂತರ ಮಾಡಲಾಗಿದ್ದು, ಭಾರತದ ಧ್ವಜ ಕಂಡರೆ ಸಾಕು, ಯಾರನ್ನೂ ಏನೂ ಪ್ರಶ್ನೆ ಮಾಡದೆ ಗಡಿದಾಟಲು ಬಿಡುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಪಾಕಿಸ್ತಾನ ಮತ್ತು ಟರ್ಕಿ ದೇಶದ ವಿದ್ಯಾರ್ಥಿಗಳು ಭಾರತದ ಧ್ವಜ ಹಿಡಿದು ಉಕ್ರೇನ್​ ಗಡಿ ದಾಟಿದ್ದರು.

ಇದನ್ನೂ ಓದಿ: ವ್ಲಾಡಿಮಿರ್ ಪುಟಿನ್ ವಿರುದ್ಧ ವಿನೂತನ ಪ್ರತಿಭಟನೆ ಮಾಡುತ್ತಿರುವ ಬ್ರಿಟನ್ ಪಬ್; ಹೇಗೆ ಅಂತೀರಾ? ಇಲ್ಲಿದೆ ನೋಡಿ 

Published On - 9:43 am, Wed, 9 March 22