ಖಾರ್ಕೀವ್​, ಕೀವ್ ಸೇರಿ ನಾಲ್ಕು ಪ್ರದೇಶಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ; ಫ್ರೆಂಚ್​ ಅಧ್ಯಕ್ಷರ ಮನವಿ ಹಿನ್ನೆಲೆ ನಿರ್ಧಾರ

| Updated By: Lakshmi Hegde

Updated on: Mar 07, 2022 | 11:54 AM

ಯುದ್ಧ 12ನೇ ದಿನಕ್ಕೆ ಕಾಲಿಟ್ಟಿದ್ದು, ಉಕ್ರೇನ್​​ನ ಮಧ್ಯಭಾಗದಲ್ಲಿದ್ದ ವಿನ್ನಿಟ್ಸಿಯಾ ವಿಮಾನ ನಿಲ್ದಾಣ ರಷ್ಯಾದ ಕ್ಷಿಪಣಿ ದಾಳಿಗೆ ಧ್ವಂಸಗೊಂಡಿದೆ. ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ವೈಯಕ್ತಿಕ ಮನವಿ ಮೇರೆಗೆ ಇಂದು ಮಾಸ್ಕೋ ಕಾಲಮಾನದ ಪ್ರಕಾರ ಬೆಳಗ್ಗೆ 10ಗಂಟೆಯಿಂದ ಕದನ ವಿರಾಮ ಘೋಷಿಸಲಾಗಿದೆ.

ಖಾರ್ಕೀವ್​, ಕೀವ್ ಸೇರಿ ನಾಲ್ಕು ಪ್ರದೇಶಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ; ಫ್ರೆಂಚ್​ ಅಧ್ಯಕ್ಷರ ಮನವಿ ಹಿನ್ನೆಲೆ ನಿರ್ಧಾರ
ಪ್ರಾತಿನಿಧಿಕ ಚಿತ್ರ
Follow us on

ರಷ್ಯಾ ಇಂದು ಉಕ್ರೇನ್​ನ ನಾಲ್ಕು ಪ್ರಮುಖ ನಗರಗಳಲ್ಲಿ ಮಧ್ಯಾಹ್ನ 12.30ರಿಂದ (ಭಾರತೀಯ ಕಾಲಮಾನ)ತಾತ್ಕಾಲಿಕ  ಕದನ ವಿರಾಮ (Ceasefire) ಘೋಷಿಸಿದೆ. ಕೀವ್​, ಮರಿಯುಪೋಲ್​, ಖಾರ್ಕೀವ್​, ಸುಮಿ ನಗರಗಳಲ್ಲಿ ಕದನ ವಿರಾಮ ಘೋಷಿಸಿದೆ. ಈ ಪ್ರದೇಶಗಳಲ್ಲಿ ಸಿಲುಕಿರುವ ಇತರ ದೇಶಗಳ ಪ್ರಜೆಗಳನ್ನು ರಕ್ಷಿಸಲು ಮಾನವೀಯ ಕಾರಿಡಾರ್​ಗಳನ್ನು ತೆರೆಯುವ ಸಲುವಾಗಿ ಈ ಯುದ್ಧ ವಿರಾಮ ಘೋಷಿಸಿದ್ದಾಗಿ ರಷ್ಯಾ ಹೇಳಿದೆ. ಈಗೆರಡು ದಿನಗಳ ಹಿಂದೆ ಅಂದರೆ ಮಾರ್ಚ್​ 5ರಂದು ಕೂಡ ರಷ್ಯಾ ಮರಿಯುಪೋಲ್, ವೊಲ್ನೋವಾಖಾಗಳಲ್ಲಿ ಕದನ ವಿರಾಮ ಘೋಷಿಸಿತ್ತು. ಆದರೆ ಅದು ಉಲ್ಲಂಘನೆಯೂ ಆಗಿದ್ದ ಬಗ್ಗೆ ವರದಿಯಾಗಿತ್ತು. ಇಲ್ಲಿದೆ ನೋಡಿ ಪ್ರಮುಖ ಬೆಳವಣಿಗೆಗಳ ವಿವರ

  1.  ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ವೈಯಕ್ತಿಕ ಮನವಿ ಮೇರೆಗೆ ಇಂದು ಮಾಸ್ಕೋ ಕಾಲಮಾನದ ಪ್ರಕಾರ ಬೆಳಗ್ಗೆ 10ಗಂಟೆಯಿಂದ ಕೀವ್​, ಖಾರ್ಕೀವ್​, ಮರಿಯುಪೋಲ್​ ಮತ್ತು ಸುಮಿಯಲ್ಲಿ ಕದನ ವಿರಾಮ ಘೋಷಿಸಿದ್ದಾಗಿ ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
  2. ಈ ನಾಲ್ಕೂ ಪ್ರದೇಶಗಳಲ್ಲಿ ದಾಳಿ ತೀವ್ರವಾಗಿದೆ. ಹೀಗಾಗಿ ವಿದೇಶಿ ನಾಗರಿಕರ ಸ್ಥಳಾಂತರಕ್ಕೆ ತೊಡಕಾಗಿದೆ. ಈ ಹಿಂದೆ ಮರಿಯುಪೋಲ್​​ನಲ್ಲಿ ಕದನ ವಿರಾಮ ಘೋಷಣೆಯಾಗಿದ್ದರೂ ಅದು ಉಲ್ಲಂಘನೆಯಾಗಿದೆ. ಈ ನಾಲ್ಕೂ ಯುದ್ಧ ಪೀಡಿತ ಸ್ಥಳಗಳಲ್ಲಿ ಇರುವ ಇತರ ದೇಶಗಳ ನಾಗರಿಕರನ್ನು ಸ್ಥಳಾಂತರ ಮಾಡಿ ರಕ್ಷಣೆ ಮಾಡಲು ಇದೀಗ ತಾತ್ಕಾಲಿಕ ಕದನ ವಿರಾಮ  ಘೋಷಣೆ ಮಾಡಲಾಗಿದೆ.
  3. ಯುದ್ಧ 12ನೇ ದಿನಕ್ಕೆ ಕಾಲಿಟ್ಟಿದ್ದು, ಉಕ್ರೇನ್​​ನ ಮಧ್ಯಭಾಗದಲ್ಲಿದ್ದ ವಿನ್ನಿಟ್ಸಿಯಾ ವಿಮಾನ ನಿಲ್ದಾಣ ರಷ್ಯಾದ ಕ್ಷಿಪಣಿ ದಾಳಿಗೆ ಧ್ವಂಸಗೊಂಡಿದೆ. ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೇ ಮಾಹಿತಿ ನೀಡಿದ್ದಾರೆ. ಹಾಗೇ ಇನ್ನೊಂದೆಡೆ ಇರ್ಪಿನ್​ ನಗರದಿಂದ ಪಲಾಯನ ಮಾಡುತ್ತಿದ್ದ ಮೂವರು ನಾಗರಿಕರನ್ನು ರಷ್ಯಾ ಸೇನೆ ಹತ್ಯೆ ಮಾಡಿದೆ ಎಂದು  ಬಿಬಿಸಿ ವರದಿ ಮಾಡಿದೆ.
  4. ರಷ್ಯಾ ಉಕ್ರೇನ್​ ಮೇಲೆ ಯುದ್ಧ ಮಾಡುತ್ತಿರುವುದನ್ನು ರಷ್ಯನ್ನರೇ ಅನೇಕರು ವಿರೋಧಿಸುತ್ತಿದ್ದಾರೆ. ಹೀಗೆ ರಷ್ಯಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 4600 ಜನರನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
  5.  ಇಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೊಂದಿಗೆ ಪ್ರಧಾನಿ ಮೋದಿ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಭಾರತೀಯರ ಸ್ಥಳಾಂತರದ ಬಗ್ಗೆ ಚರ್ಚೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Russia-Ukraine Crisis: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್​ ಯುದ್ಧ; ಇಂದು 3ನೇ ಸುತ್ತಿನ ಮಾತುಕತೆ ಫಲಪ್ರದವಾಗಬಹುದೇ?

Published On - 11:18 am, Mon, 7 March 22