ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ

ಶ್ವೇತಭವನದ ಭೋಜನಕೂಟದಲ್ಲಿ ಟ್ರಂಪ್ ಹತ್ಯೆಗೆ ಯತ್ನಿಸಿದ ಕೋಲ್ ಥಾಮಸ್ ಅಲೆನ್ ವಿರುದ್ಧ ಅಧ್ಯಕ್ಷರ ಹತ್ಯೆ ಯತ್ನ ಸೇರಿದಂತೆ ಗಂಭೀರ ಫೆಡರಲ್ ಆರೋಪಗಳನ್ನು ದಾಖಲಿಸಲಾಗಿದೆ. ಇವು ಸಾಬೀತಾದರೆ ಆತನಿಗೆ ಜೀವಾವಧಿ ಶಿಕ್ಷೆ ಎದುರಾಗಲಿದೆ. ಉನ್ನತ ಶಿಕ್ಷಣ ಪಡೆದ ಅಲೆನ್, ಟ್ರಂಪ್ ವಿರೋಧಿ ಪ್ರಣಾಳಿಕೆ ಬರೆದು ದಾಳಿ ನಡೆಸಿದ್ದ.

ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ
ಆಲೆನ್
Image Credit source: Truth Social

Updated on: Apr 28, 2026 | 7:42 AM

ವಾಷಿಂಗ್ಟನ್,ಏಪ್ರಿಲ್ 28: ಶ್ವೇತಭವನದ ಪತ್ರಿಕಾ ಭೋಜನಕೂಟದ ವೇಳೆ ಗುಂಡಿನ ದಾಳಿ(Firing) ನಡೆಸಿ ಸಂಚಲನ ಮೂಡಿಸಿದ್ದ ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ತೋಮಸ್ ಅಲೆನ್ ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯವು ‘ಅಧ್ಯಕ್ಷರ ಹತ್ಯೆ ಯತ್ನ’ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿದೆ. ಈ ಅಪರಾಧಗಳು ಸಾಬೀತಾದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಸೋಮವಾರ ವಾಷಿಂಗ್ಟನ್‌ನ ಫೆಡರಲ್ ನ್ಯಾಯಾಲಯಕ್ಕೆ ಅಲೆನ್‌ನನ್ನು ಹಾಜರುಪಡಿಸಲಾಯಿತು. ಹಂಗಾಮಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರ ಪ್ರಕಾರ, ಅಲೆನ್ ಈ ದಾಳಿಗಾಗಿ ವ್ಯವಸ್ಥಿತವಾಗಿ ಸಿದ್ಧತೆ ನಡೆಸಿದ್ದ. ಉನ್ನತ ಶಿಕ್ಷಣ ಪಡೆದ ಅಲೆನ್ ಇಂತಹ ಕೃತ್ಯಕ್ಕೆ ಮುಂದಾಗಿರುವುದು ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.

ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವೀಧರನಾಗಿರುವ ಈತ, ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾನೆ.ಈತ ಒಬ್ಬ ಹವ್ಯಾಸಿ ವಿಡಿಯೋ ಗೇಮ್ ಡೆವಲಪರ್ ಎಂದು ಗುರುತಿಸಿಕೊಳ್ಳುತ್ತಿದ್ದ.

ಮತ್ತಷ್ಟು ಓದಿ: ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ: ಪ್ರಧಾನಿ ಮೋದಿ

ದಾಳಿಗೂ ಮುನ್ನ ತನ್ನ ಕುಟುಂಬಕ್ಕೆ ಕಳುಹಿಸಿದ ಪ್ರಣಾಳಿಕೆಯಲ್ಲಿ ತನ್ನನ್ನು ‘ಫ್ರೆಂಡ್ಲಿ ಫೆಡರಲ್ ಅಸಾಸಿನ್’ ಎಂದು ಬಣ್ಣಿಸಿಕೊಂಡಿದ್ದ. ಅಧ್ಯಕ್ಷ ಟ್ರಂಪ್ ಅವರನ್ನು ದುಷ್ಟ ವ್ಯಕ್ತಿ ಎಂದು ಕರೆದಿದ್ದ ಆತ, ಆಡಳಿತದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ.

ಆರೋಪಿಯು ಕ್ಯಾಲಿಫೋರ್ನಿಯಾದಿಂದ ಚಿಕಾಗೋಗೆ ರೈಲಿನಲ್ಲಿ ಪ್ರಯಾಣಿಸಿ, ನಂತರ ವಾಷಿಂಗ್ಟನ್‌ಗೆ ಬಂದಿದ್ದ. ಕಾರ್ಯಕ್ರಮ ನಡೆಯುತ್ತಿದ್ದ ಹಿಲ್ಟನ್ ಹೋಟೆಲ್‌ನಲ್ಲಿ ಅತಿಥಿಯಾಗಿ ಚೆಕ್-ಇನ್ ಆಗಿದ್ದನು. ಭದ್ರತಾ ಬ್ಯಾರಿಕೇಡ್‌ಗಳನ್ನು ದಾಟಿ ಓಡಿಬಂದು ಹಲವು ಸುತ್ತು ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅಂತಿಮವಾಗಿ ಭದ್ರತಾ ಸಿಬ್ಬಂದಿ ಆತನನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಅಲೆನ್ ಪರವಾಗಿ ವಕೀಲರು ವಾದ ಮಂಡಿಸಿದ್ದು, ಆತನಿಗೆ ಯಾವುದೇ ಹಳೆಯ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ತಿಳಿಸಿದ್ದಾರೆ. ಆದರೆ, ಆತನ ಪ್ರಣಾಳಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಬರಹಗಳು ಆತನ ಕ್ರೂರ ಉದ್ದೇಶಕ್ಕೆ ಸಾಕ್ಷಿಯಾಗಿವೆ ಎಂದು ಪ್ರಾಸಿಕ್ಯೂಟರ್‌ಗಳು ವಾದಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us