ಉಕ್ರೇನ್ ರಕ್ಷಣೆಗೆ ನೆರವಾಗದಿದ್ದರೆ ನಿಮ್ಮ ಮೇಲೆಯೂ ದಾಳಿ ನಡೆಯುತ್ತೆ: ನ್ಯಾಟೊಗೆ ಝೆಲೆನ್​ಸ್ಕಿ ಎಚ್ಚರಿಕೆ

ರಷ್ಯಾ ಇಂದು ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ನಾವು ಅವರನ್ನು ತಡೆದು ನಿಲ್ಲಿಸಿದ್ದೇವೆ. ನಾಳೆ ನಿಮ್ಮದೇ ದೇಶಗಳ ಪ್ರಜೆಗಳನ್ನು ರಕ್ಷಿಸುವ ಮುಖವಾಡದೊಂದಿಗೆ ಅವರು ನಿಮ್ಮ ನಗರಗಳ ಮೇಲೆಯೂ ದಾಳಿ ನಡೆಸಬಹುದು ಎಂದು ಝೆಲೆನ್​ಸ್ಕಿ ಎಚ್ಚರಿಸಿದ್ದಾರೆ.

ಉಕ್ರೇನ್ ರಕ್ಷಣೆಗೆ ನೆರವಾಗದಿದ್ದರೆ ನಿಮ್ಮ ಮೇಲೆಯೂ ದಾಳಿ ನಡೆಯುತ್ತೆ: ನ್ಯಾಟೊಗೆ ಝೆಲೆನ್​ಸ್ಕಿ ಎಚ್ಚರಿಕೆ
ಉಕ್ರೇನ್​ನಲ್ಲಿ ಬಾಂಬ್ ದಾಳಿಗೆ ಛಿದ್ರಗೊಂಡಿರುವ ಕಟ್ಟಡ
Edited By:

Updated on: Mar 14, 2022 | 6:44 AM

ಕೀವ್: ಉಕ್ರೇನ್ ಮೇಲೆ ರಷ್ಯಾ ನಿರಂತರ ದಾಳಿ ನಡೆಸುತ್ತಿದೆ. ರಷ್ಯಾಗೆ (Russia Ukraine Conflict) ಈ ಹಂತದಲ್ಲಿ ಕಡಿವಾಣ ಹಾಕದಿದ್ದರೆ ಮುಂದೊಂದು ದಿನ ಐರೋಪ್ಯ ಒಕ್ಕೂಟದ ಇತರ ದೇಶಗಳ ಮೇಲೆ, ನ್ಯಾಟೊ ನೆಲೆಗಳ ಮೇಲೆಯೂ ದಾಳಿ ಕ್ಷಿಪಣಿ ದಾಳಿ ನಡೆಯಲಿದೆ. ಇದಕ್ಕೆ ಹೆಚ್ಚೇನೂ ಸಮಯ ಬೇಕಾಗಿಲ್ಲ. ಉಕ್ರೇನ್​ನ ವಾಯುಗಡಿ ನಿರ್ಬಂಧಿಸಿ, ನೆಲದ ಮೇಲಿನ ಯುದ್ಧವನ್ನು ನಾವು ನಿರ್ವಹಿಸುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರು. ವಿಡಿಯೊ ಸಂದೇಶದಲ್ಲಿ ಮಾತನಾಡಿರುವ ಅವರು, ರಷ್ಯಾ ಇಂದು ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ನಾವು ಅವರನ್ನು ತಡೆದು ನಿಲ್ಲಿಸಿದ್ದೇವೆ. ನಾಳೆ ನಿಮ್ಮದೇ ದೇಶಗಳ ಪ್ರಜೆಗಳನ್ನು ರಕ್ಷಿಸುವ ಮುಖವಾಡದೊಂದಿಗೆ ಅವರು ನಿಮ್ಮ ನಗರಗಳ ಮೇಲೆಯೂ ದಾಳಿ ನಡೆಸಬಹುದು. ಉಕ್ರೇನ್​ಗೆ ನೆರವಾಗಿ, ರಷ್ಯಾದ ದುಸ್ಸಾಹಸಗಳನ್ನು ತಡೆದು ನಿಲ್ಲಿಸಿ ಎಂದು ಮನವಿ ಮಾಡಿದರು.

ಉಕ್ರೇನ್ ರಾಜಧಾನಿ ಕೀವ್ ನಗರ ವಶಪಡಿಸಿಕೊಳ್ಳುವ ಪ್ರಯತ್ನವನ್ನು ರಷ್ಯಾ ಮುಂದುವರಿಸಿದೆ. ಎರಡೂ ದೇಶಗಳ ನಡುವಣ ಮಾತುಕತೆಯಲ್ಲಿ ಯಾವುದೇ ಮಹತ್ವದ ಫಲಿತಾಂಶ ಬರುತ್ತಿಲ್ಲ. ಈ ನಡುವೆ ಇಂದು ಮತ್ತೊಂದು ಸುತ್ತಿನ ಶಾಂತಿಸಭೆ ನಿಗದಿಯಾಗಿದ್ದು, ರಷ್ಯಾ ಮತ್ತು ಉಕ್ರೇನ್ ಆಡಳಿತದ ಪ್ರತಿನಿಧಿಗಳು ವರ್ಚುವಲ್ ವೇದಿಕೆಯಲ್ಲಿ ಪರಸ್ಪರ ಚರ್ಚಿಸಲಿದ್ದಾರೆ.

ಉಕ್ರೇನ್​ನಲ್ಲಿ ರಷ್ಯಾ ಸೇನೆ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ 1,25,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಝೆಲೆನ್​ಸ್ಕಿ ಮಾಹಿತಿ ನೀಡಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನೂ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರ ಮಾಡಲಾಗಿದೆ.​ ಭದ್ರತಾ ದೃಷ್ಟಿಯಿಂದ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ ಮಾಡಿದ್ದು, ಪರಿಸ್ಥಿತಿ ಸುಧಾರಿಸುವವರೆಗೂ ಪೋಲೆಂಡ್​ನಲ್ಲಿ ಭಾರತೀಯ ರಾಯಭಾರ ಕಚೇರಿ ಕೆಲಸ ನಿರ್ವಹಿಸಲಿದೆ.

ಉಕ್ರೇನ್​ನಲ್ಲಿ ಯುದ್ಧ ಮುಂದುವರಿಸಿದ ರಷ್ಯಾ ಸೇನೆ, ಮತ್ತೊಬ್ಬ ಮೇಯರ್​ನ್ನು ಅಪಹರಿಸಿದೆ. ಈ ಹಿಂದೆ ಮೆಲಿಟೊಪೋಲ್​ ಮೇಯರ್​ನ್ನು ರಷ್ಯಾ ​ ಅಪಹರಿಸಿತ್ತು. ಇಂದು ಮತ್ತೊಬ್ಬ ಮೇಯರ್​ನನ್ನು ರಷ್ಯಾ ಕಿಡ್ನ್ಯಾಪ್​ ಮಾಡಿದೆ ಎಂದು ಝಫೋರಿಝಿಯಾ ಆಡಳಿತಾಧಿಕಾರಿ ಕಚೇರಿ ಮಾಹಿತಿ ನೀಡಿದೆ. ಪೂರ್ವ ಉಕ್ರೇನ್‌ನಿಂದ ಜನರುನ್ನು ಸ್ಥಳಾಂತರಿಸಲಾಗುತ್ತಿದ್ದ ರೈಲೊಂದರ ಮೇಲೆಯೂ ರಷ್ಯಾ ಸೇನೆ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ರೈಲಿನ ನಿರ್ವಾಹಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‌ನ ರಾಷ್ಟ್ರೀಯ ರೈಲು ಕಂಪನಿ ಹೇಳಿದೆ. 100 ಮಕ್ಕಳನ್ನು ಒಳಗೊಂಡಂತೆ ಲೈಮನ್ ನಿಲ್ದಾಣದಲ್ಲಿ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಿಂದ ನಿವಾಸಿಗಳನ್ನು ಸ್ಥಳಾಂತರಿಸುವ ರೈಲು ಇದಾಗಿತ್ತು.

ರಷ್ಯಾದಿಂದ ದಾಳಿಗೊಳಗಾದ ಪೂರ್ವ ಉಕ್ರೇನ್‌ನ ಸೇನಾ ನೆಲೆಯಲ್ಲಿ ವಿದೇಶಿ ಸೇನಾ ಬೋಧಕರು ಕೆಲಸ ಮಾಡುತ್ತಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್ ಹೇಳಿದ್ದಾರೆ. ಪೋಲೆಂಡ್ ಗಡಿಯಿಂದ 10 ಕಿಮೀ ದೂರದಲ್ಲಿರುವ ಶಾಂತಿಪಾಲನಾ ಮತ್ತು ಭದ್ರತಾ ಅಂತರರಾಷ್ಟ್ರೀಯ ಕೇಂದ್ರದ ಮೇಲೆ ಎಂಟು ಕ್ಷಿಪಣಿಗಳು ದಾಳಿ ಮಾಡಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾ ಮತ್ತು ಉಕ್ರೇನ್ ನಡುವೆ ಮಧ್ಯಸ್ಥಿಕೆಗೆ ಮುಂದಾದ ಭಾರತ: ಪುಟಿನ್ ಮತ್ತು ಝೆಲೆನ್​ಸ್ಕಿ ಮಧ್ಯೆ ಸಂಧಾನಕ್ಕೆ ಮೋದಿ ಪ್ರಸ್ತಾವ

ಇದನ್ನೂ ಓದಿ: ಉಕ್ರೇನ್​ನಲ್ಲಿ ಫಲಕೊಡುತ್ತಿದೆ ಎಂಜಿಆರ್ ತಂತ್ರ: ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಬದುಕಿನ ಮೇಲೆ ತಮಿಳುನಾಡಿನ ಎಂಜಿಆರ್ ಛಾಯೆ

Loading...
Unable to load recommendations.
Follow Us