ವೋಟ್ ಬ್ಯಾಂಕ್ ರಾಜಕಾರಣದಿಂದ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಹೇಳುವುದು ಸರಿಯಲ್ಲ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ಅವರು ಹೇಳಿದ್ದು ತಪ್ಪು . ಕೆನಡಾ ಯಾವಾಗಲೂ ಹಿಂಸಾಚಾರ ಮತ್ತು ಹಿಂಸಾಚಾರದ ಬೆದರಿಕೆಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ. ನಾವು ಯಾವಾಗಲೂ ಭಯೋತ್ಪಾದನೆಯ ವಿರುದ್ಧ ಗಂಭೀರ ಕ್ರಮಗಳನ್ನು ತೆಗೆದುಕೊಂಡಿದ್ದೇವೆ, ಅದನ್ನು ನಾವು ಮಾಡಿಯೇ ಮಾಡುತ್ತೇವೆ ಎಂದ ಟ್ರುಡೊ

ವೋಟ್ ಬ್ಯಾಂಕ್ ರಾಜಕಾರಣದಿಂದ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಹೇಳುವುದು ಸರಿಯಲ್ಲ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ
ಜಸ್ಟಿನ್ ಟ್ರುಡೊ
ರಶ್ಮಿ ಕಲ್ಲಕಟ್ಟ

Updated on: Jul 06, 2023 | 5:40 PM

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರು ದೇಶದಲ್ಲಿ ಖಲಿಸ್ತಾನ್ ಪರ( pro-Khalistan) ಕೂಟಗಳು ಮತ್ತು ಭಯೋತ್ಪಾದಕರ ವಿರುದ್ಧ ಕಾರ್ಯನಿರ್ವಹಿಸಲು ತಮ್ಮ ಸರ್ಕಾರ ಹಿಂಜರಿಯುತ್ತಿದೆ ಎಂದು ಹೇಳುತ್ತಿರುವುದು ‘ತಪ್ಪು’ ಎಂದಿದ್ದಾರೆ. ಕೆನಡಾ (Canada) ‘ಯಾವಾಗಲೂ ಭಯೋತ್ಪಾದನೆಯ ವಿರುದ್ಧ ಗಂಭೀರ ಕ್ರಮ ತೆಗೆದುಕೊಂಡಿದೆ, ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. ಕಳೆದ ತಿಂಗಳು ಕೆನಡಾದ ಗ್ರೇಟರ್ ಟೊರೊಂಟೊ ಪ್ರದೇಶದ ಬ್ರಾಂಪ್ಟನ್‌ನಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆಯನ್ನು ಬಿಂಬಿಸುವ ಪರೇಡ್ ಫ್ಲೋಟ್ ಕುರಿತು ಕೇಳಿದಾಗ ಟ್ರುಡೊ ಈ ರೀತಿ ಉತ್ತರಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಜುಲೈ 8 ರಂದು ಒಟ್ಟಾವಾದಲ್ಲಿನ ಭಾರತೀಯ ಹೈಕಮಿಷನ್ ಮತ್ತು ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಕಾನ್ಸುಲೇಟ್‌ಗಳ ಹೊರಗೆ ಖಲಿಸ್ತಾನ್ ಪರ ಭಯೋತ್ಪಾದಕ ಸಂಘಟನೆಗಳ ಉದ್ದೇಶಿತ ಪ್ರತಿಭಟನೆಗಳ ಕುರಿತು ಕೆನಡಾಕ್ಕೆ ಭಾರತ ತನ್ನ ಪ್ರತಿಭಟನೆ ದಾಖಲಿಸಿದ ಎರಡು ದಿನಗಳ ನಂತರ ಟ್ರೂಡೊ ಅವರ ಪ್ರತಿಕ್ರಿಯೆ ಬಂದಿದೆ.

ಸಿಖ್ ಸಮುದಾಯದ ಮತಗಳನ್ನು ಅವಲಂಬಿಸಿರುವ ಕಾರಣ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಅವರು ಸಿದ್ಧರಿಲ್ಲ ಎಂಬ ವರದಿಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಟ್ರುಡೊ ಈ ಮಾತನ್ನಾಡಿದ್ದಾರೆ. ಅವರು ಹೇಳಿದ್ದು ತಪ್ಪು . ಕೆನಡಾ ಯಾವಾಗಲೂ ಹಿಂಸಾಚಾರ ಮತ್ತು ಹಿಂಸಾಚಾರದ ಬೆದರಿಕೆಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ. ನಾವು ಯಾವಾಗಲೂ ಭಯೋತ್ಪಾದನೆಯ ವಿರುದ್ಧ ಗಂಭೀರ ಕ್ರಮಗಳನ್ನು ತೆಗೆದುಕೊಂಡಿದ್ದೇವೆ, ಅದನ್ನು ನಾವು ಮಾಡಿಯೇ ಮಾಡುತ್ತೇವೆ. ನಾವು ಅತ್ಯಂತ ವೈವಿಧ್ಯಮಯ ದೇಶವನ್ನು ಹೊಂದಿದ್ದೇವೆ. ಹಿಂಸಾಚಾರ ಮತ್ತು ಉಗ್ರವಾದದ ಎಲ್ಲಾ ರೂಪಗಳನ್ನು ಹಿಂದೆ ಸರಿಸಲು ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಟ್ರುಡೊ ಹೇಳಿದ್ದಾರೆ.

ಇದನ್ನೂ ಓದಿ: ಸಿಖ್ ಉಗ್ರಗಾಮಿ ಕೃತ್ಯಗಳ ವಿರುದ್ಧ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೆನಡಾ ಸರ್ಕಾರಕ್ಕೆ ಭಾರತ ಒತ್ತಾಯ

ತಮ್ಮ ಪ್ರತಿಕ್ರಿಯೆಯಲ್ಲಿ ಟ್ರುಡೊ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ‘ಅಮೂಲಾಗ್ರ, ಉಗ್ರಗಾಮಿ’ ಸಿದ್ಧಾಂತಗಳು ‘ನಮಗೆ ಅಥವಾ ಅವರಿಗೆ ಅಥವಾ ನಮ್ಮ ಸಂಬಂಧಗಳಿಗೆ (ಪರಸ್ಪರ) ಒಳ್ಳೆಯದಲ್ಲ’ ಎಂದಿದ್ದರು ಜೈಶಂಕರ್.

ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟ ಕಾರಣ ಕ್ರಮ ಕೈಗೊಳ್ಳುತ್ತಿಲ್ಲ ಎಂದ ಭಾರತ

ಕಳೆದ ವಾರ ಜೈಶಂಕರ್ ಅವರು ಖಲಿಸ್ತಾನಿ ಪ್ರತಿಭಟನೆಗಳ ವಿರುದ್ಧ ಕೆನಡಾ ಸರ್ಕಾರದ ಕ್ರಮ ತೆಗೆದುಕೊಳ್ಳದೇ ಇರುವುದನ್ನು ಟೀಕಿಸಿದ್ದರು. ಇದು ಕೆನಡಾದೊಂದಿಗಿನ ನಿರಂತರ ಸಂಭಾಷಣೆಯಾಗಿದೆ. ಯಾವಾಗಲೂ ತೃಪ್ತಿಕರವಾಗಿಲ್ಲ.ಆದರೆ ನಾವು ಈ ವಿಷಯದಲ್ಲಿ ತುಂಬಾ ಸ್ಪಷ್ಟವಾಗಿರುತ್ತೇವೆ. ನಮ್ಮ ಸಂಬಂಧಗಳ ಮೇಲೆ ಹಲವು ವಿಧಗಳಲ್ಲಿ ಪರಿಣಾಮ ಬೀರಿದೆ ಎಂದು ಒಪ್ಪಿಕೊಂಡ ಜೈಶಂಕರ್, ಖಲಿಸ್ತಾನಿ ಸಮಸ್ಯೆಯನ್ನು ಕೆನಡಾ ಹೇಗೆ ನಿಭಾಯಿಸಿದೆ ಎಂಬುದು ದೀರ್ಘಕಾಲದ ಸಮಸ್ಯೆಯಾಗಿದೆ. ಅತ್ಯಂತ ಸ್ಪಷ್ಟವಾಗಿ ಹೇಳುವುದಾದರೆ, ಅವರು ವೋಟ್ ಬ್ಯಾಂಕ್ ರಾಜಕೀಯದಿಂದ ನಡೆಸಲ್ಪಡುತ್ತಿದ್ದಾರೆಂದು ತೋರುತ್ತದೆ ಎಂದಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us