ಕರಾಚಿಯಲ್ಲಿ ಗ್ಯಾಂಗ್ಸ್ಟರ್ ಸಹೋದರನ ಮೇಲೆ ಗುಂಡಿನ ದಾಳಿ: ‘ಧುರಂಧರ್’ ಸಿನಿಮಾಗೆ ಇದೆ ನಂಟು
ರಣವೀರ್ ಸಿಂಗ್, ಅಕ್ಷಯ್ ಖನ್ನಾ ಮುಂತಾದವರು ನಟಿಸಿದ್ದ ‘ಧುರಂಧರ್’ ಸಿನಿಮಾದಲ್ಲಿ ಉಜೈರ್ ಬಲೋಚ್ ಪಾತ್ರವನ್ನು ತೋರಿಸಲಾಗಿತ್ತು. ಈಗ ಆತನ ಸಹೋದರ ಜುಬೈರ್ ಬಲೋಚ್ ಮೇಲೆ ಗುಂಡಿನ ದಾಳಿ ನಡೆದಿದೆ. ಆ ಚಿತ್ರದಲ್ಲಿದ್ದ ತೋರಿಸಿದ್ದ ಭೂಗತ ಪಾತಕಿಗಳ ನಡುವಿನ ಸಂಘರ್ಷ ನಿಜ ಜೀವನದಲ್ಲಿ ಇಂದಿಗೂ ಮುಂದುವರಿದಿದೆ.

ಪಾಕಿಸ್ತಾನದ ಕರಾಚಿಯ ಲಿಯಾರಿ (Lyari) ಪ್ರದೇಶದಲ್ಲಿ ಗುರುವಾರ (ಜುಲೈ 30) ಸಂಜೆ ಭಾರಿ ಗುಂಡಿನ ಚಕಮಕಿ ನಡೆದಿದೆ. ಜೈಲಿನಲ್ಲಿರುವ ಮಾಜಿ ಗ್ಯಾಂಗ್ಸ್ಟರ್ ಹಾಗೂ ಪೀಪಲ್ಸ್ ಅಮ್ನ್ ಕಮಿಟಿ ಮಾಜಿ ಮುಖ್ಯಸ್ಥ ಉಜೈರ್ ಬಲೋಚ್ ಅವರ ಸಹೋದರ ಜುಬೈರ್ ಬಲೋಚ್ (Zubair Baloch) ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಗೂ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ (Dhurandhar) ಸಿನಿಮಾಗೂ ಪ್ರಮುಖ ನಂಟಿರುವುದರಿಂದ ಭಾರಿ ಚರ್ಚೆ ಆಗುತ್ತಿದೆ.
40 ವರ್ಷದ ಜುಬೈರ್ ಬಲೋಚ್ ಕರಾಚಿಯ ಲಿಯಾರಿಯ ಸಿಂಗು ಲೇನ್ನಲ್ಲಿರುವ ಮನೆಯ ಹೊರಗೆ ಕುಳಿತಿದ್ದಾಗ, ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ದಿಢೀರ್ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಜುಬೈರ್ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಹಲವು ಗುಂಡುಗಳು ತಾಗಿದ್ದು, ಆತನನ್ನು ತಕ್ಷಣವೇ ಕರಾಚಿಯ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.
ಜುಬೈರ್ ಬಲೋಚ್ ಸ್ಥಿತಿ ಚಿಂತಾಜನಕ:
ಈ ಫೈರಿಂಗ್ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಇಬ್ಬರು ಹಾದಿಹೋಕರಿಗೂ ಗುಂಡುಗಳು ತಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಜುಬೈರ್ ಬಲೋಚ್ ಈಗಾಗಲೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಕೂಡ ಆತನ ಸ್ಥಿತಿ ಚಿಂತಾಜನಕ ಆಗಿದೆ ಎಂದು ವರದಿ ಆಗಿದೆ. ಜುಬೈರ್ ಬಲೋಚ್ ವಿರುದ್ಧ 2012ರಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದು, 2025ರ ಜನವರಿಯಷ್ಟೇ ಆತ ಜೈಲಿನಿಂದ ಬಿಡುಗಡೆಯಾಗಿದ್ದ. ಹಳೆಯ ಗ್ಯಾಂಗ್ ವೈರತ್ವವೇ ಈ ದಾಳಿಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
‘ಧುರಂಧರ್’ ಸಿನಿಮಾದ ನಂಟು ಏನು?
ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದ ‘ಧುರಂಧರ್’ ಹಾಗೂ ‘ಧುರಂಧರ್: ದಿ ರಿವೇಂಜ್’ ಸಿನಿಮಾಗಳ ಕಥೆಯು ಕರಾಚಿಯ ಲಿಯಾರಿ ಗ್ಯಾಂಗ್ಸ್ಟರ್ಗಳ ನೆಟ್ವರ್ಕ್ ಸುತ್ತಲೇ ಸಾಗುತ್ತದೆ. ರಣವೀರ್ ಸಿಂಗ್ ನಾಯಕನಾಗಿ ನಟಿಸಿದ ಈ ಸಿನಿಮಾದಲ್ಲಿ ಜುಬೈರ್ ಬಲೋಚ್ ಅವರ ಸಹೋದರ ಉಜೈರ್ ಬಲೋಚ್ ಪಾತ್ರವೂ ಇದೆ. ನಟ ಡ್ಯಾನಿಶ್ ಪಂಡೋರ್ ಅವರು ಈ ಪಾತ್ರದಲ್ಲಿ ನಟಿಸಿದ್ದಾರೆ. ಉಜೈರ್ ಬಲೋಚ್ನ ನಿಕಟವರ್ತಿಯಾಗಿದ್ದ ರೆಹಮಾನ್ ಡಕಾಯಿತ್ನ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಜಪಾನ್ನಲ್ಲಿ ಮೋಡಿ ಮಾಡಲು ‘ಧುರಂಧರ್ 2’ ವಿಫಲ; ಮೊದಲ ದಿನವೇ ಮುಗ್ಗರಿಸಿದ ಚಿತ್ರ
ಏನಿದು ‘ಧುರಂಧರ್’ ಕಥಾಹಂದರ?
2000ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಲಿಯಾರಿ ಪ್ರದೇಶದಲ್ಲಿದ್ದ ಅಪರಾಧ ಜಾಲದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಭಾರತದ ಮೇಲೆ ಬೆದರಿಕೆ ಒಡ್ಡುತ್ತಿದ್ದ ಭಯೋತ್ಪಾದಕರ ಜಾಲವನ್ನು ಧ್ವಂಸಗೊಳಿಸಲು ಲಿಯಾರಿಯ ಗ್ಯಾಂಗ್ಸ್ಟರ್ ಜಗತ್ತಿಗೆ ನುಗ್ಗುವ ಭಾರತೀಯ ಗೂಢಚಾರಿ ಜಸ್ಕಿರತ್ ಸಿಂಗ್ ರಂಗಿ (ರಣವೀರ್ ಸಿಂಗ್) ಪಾತ್ರದ ಸುತ್ತ ಚಿತ್ರದ ಕಥೆ ಸಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




