ಗಡಾಯಿಕಲ್ಲು ಹತ್ತುವ ಪರ್ವಕಾಲ, ಇಲ್ಲಿಗೆ ಇನ್ನೊಂದು ಹೆಸರು ಇದೆ? ಚಾರಣ ಹೇಗೆ ಹೋಗಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 21, 2023 | 9:00 AM

ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು ಬೆಳ್ತಂಗಡಿ ಪಟ್ಟಣದಿಂದ 8 ಕಿಮೀ ದೂರದಲ್ಲಿದೆ. ನೀವು ಗಡಾಯಿಕಲ್ಲಿಗೆ ಹೋಗಬೇಕಾದರೆ ಮಂಗಳೂರಿನಿಂದ ಸುಮಾರು 60 ಕಿ.ಮೀ, ಧರ್ಮಸ್ಥಳದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಬೆಳ್ತಂಗಡಿಗೆ ಮೊದಲು ಬರಬೇಕು.

ಗಡಾಯಿಕಲ್ಲು ಹತ್ತುವ ಪರ್ವಕಾಲ, ಇಲ್ಲಿಗೆ ಇನ್ನೊಂದು ಹೆಸರು ಇದೆ? ಚಾರಣ ಹೇಗೆ ಹೋಗಬೇಕು?
ಸಾಂದರ್ಭಿಕ ಚಿತ್ರ
Follow us on

ಹಿತ್ತಲ ಗಿಡ ಮದ್ದಲ್ಲ ಅನ್ನುವ ಗಾದೆ ಮಾತನ್ನು ನನ್ನನ್ನೇ ನೋಡಿ ಹೇಳಿದ್ದಾರೇನೋ ಎಂದು ಒಮ್ಮೊಮ್ಮೆ ಅನಿಸಿಬಿಡುತ್ತೆ. ನಾನು ಉಜಿರೆಗೆ ಬಂದು ಐದು ವರ್ಷ ಕಳೆದಿದ್ದರೂ, ಕಣ್ಣ ಎದುರಿಗೇ ಕಾಣುವ ಗಡಾಯಿಕಲ್ಲು ಹತ್ತುವುದಕ್ಕೆ ಸಮಯವಿನ್ನೂ ಒದಗಿ ಬಂದಿರಲಿಲ್ಲ. ಸಾಕಷ್ಟು ಬಾರಿ ಗಡಾಯಿಕಲ್ಲು ಹತ್ತೋಕೆ ಪ್ಲಾನ್ ಮಾಡಿದರೂ, ಅನೇಕ ಕಾರಣಗಳಿಗೆ ನಿಂತು ಹೋಗುತ್ತಿತ್ತು. ಈ ಗಡಾಯಿಕಲ್ಲು ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ,ಮಂಜೊಟ್ಟಿ ಗ್ರಾಮದ ಬಳಿ. ಸದ್ಯ ಗಡಾಯಿಕಲ್ಲು, ಜಿಲ್ಲೆಯ ಪ್ರಮುಖ ಚಾರಣ ಸ್ಥಳಗಳಲ್ಲಿ ಒಂದಾಗಿದ್ದು ಪ್ರತಿದಿನವೂ ಚಾರಣಿಗರು ಇಲ್ಲಿ ಭೇಟಿ ನೀಡುತ್ತಾರೆ.

ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು ಬೆಳ್ತಂಗಡಿ ಪಟ್ಟಣದಿಂದ 8 ಕಿಮೀ ದೂರದಲ್ಲಿದೆ. ನೀವು ಗಡಾಯಿಕಲ್ಲಿಗೆ ಹೋಗಬೇಕಾದರೆ ಮಂಗಳೂರಿನಿಂದ ಸುಮಾರು 60 ಕಿ.ಮೀ, ಧರ್ಮಸ್ಥಳದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಬೆಳ್ತಂಗಡಿಗೆ ಮೊದಲು ಬರಬೇಕು. ನಂತರ ಅಲ್ಲಿಂದ ಮಂಜೊಟ್ಟಿ ಗ್ರಾಮಕ್ಕೆ ತೆರಳುವ ಬಸ್ಸನ್ನು ಹತ್ತಿ 1.5 ಕಿ.ಮೀ. ಕಾಲ್ನಡಿಗೆ ಅಥವಾ ಬಾಡಿಗೆ ಆಟೋಗಳ ಮೂಲಕ ಗಡಾಯಿಕಲ್ಲಿನ ಬೇಸ್ ತಲುಪಬಹುದು. ಅರಣ್ಯ ಇಲಾಖೆಯ ಅನುಮತಿ ಪಡೆದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಇಲ್ಲಿ ಚಾರಣ ಮಾಡಲು ಅವಕಾಶವಿದೆ.

ಒಂದು ದಿನ ಕಡೆಗೂ ಈ ಗಡಾಯಿಕಲ್ಲು ಹತ್ತುವ ಸಮಯ ನನಗೆ ಅನಿರೀಕ್ಷಿತವಾಗಿ ಒದಗಿ ಬಂದಿತು. ಅಂದಿನವರೆಗೂ ಮುಖತಃ ಭೇಟಿಯಾಗದ ನನ್ನ ಫೇಸ್ಬುಕ್ ಮಿತ್ರರೊಬ್ಬರು ನಮ್ಮ ಕಾಲೇಜಿನ ಪ್ರಾಧ್ಯಾಪಕರಾಗಿ ನೇಮಕಗೊಂಡಿರೋ‌ ಸುದ್ದಿ ಸಿಕ್ಕ ಕಾರಣ ಅವರಿಗೆ ಮೆಸೇಜ್ ಹಾಕಿ ಮಾತಾನಾಡುತ್ತಾ ಇದ್ದೆ‌. ಅವರು, ನಾಳೆ ನಾವು ಮೂರು ಜನ ಗಡಾಯಿಕಲ್ಲಿಗೆ ಹೊರಟಿದ್ದೀವಿ, ನೀವು ಬರ್ತೀರಾ, ಮೀಟ್ ಮಾಡಿದ ಹಾಗೆ ಕೂಡ ಆಗುತ್ತೆ ಅಂದರು. ನನಗಂತೂ ಲಡ್ಡು ಬಂದು ಬಾಯಿಗೆ ಬಿದ್ದ ಅನುಭವ. ಅಯ್ಯೋ ಒಳ್ಳೇ ಕೆಲ್ಸಕ್ಕೆ ಹೋಗೋವಾಗ ಮೂರು ಜನ ಹೋಗ್ಬಾರ್ದು, ನಾನೂ ಬರ್ತೀನಿ ಅಂತ ಒಪ್ಪಿಕೊಂಡೆ.

ಮರುದಿನ ತಪ್ಪಲಿನಲ್ಲಿರುವ ಅರಣ್ಯ ಇಲಾಖೆ ಮಾಹಿತಿ ಕೇಂದ್ರದಿಂದ ಬೆಟ್ಟ ಹತ್ತಲು ನಿಗದಿತ ಶುಲ್ಕ ಕಟ್ಟಿ, ಗಡಾಯಿಕಲ್ಲು ಹತ್ತೋಕೆ ಹೊರಟಿದ್ದ ನಾವು ನಾಲ್ವರಲ್ಲಿ, ನಾನು ಮಲ್ನಾಡು ಹುಡುಗ‌ ಇಂತ ಎಷ್ಟೋ ಬೆಟ್ಟ-ಗುಡ್ಡ ಹತ್ತಿದೀನಿ ಅನ್ನೋ ಜಂಬವಿತ್ತು (ಜಂಬ ಇಳಿಯೋಕೆ ಜಾಸ್ತಿ ಸಮಯ ಬೇಕಾಗಲಿಲ್ಲ), ಒಬ್ರು ಕರಾವಳಿ ಭಾಗದವರು, ಇನ್ನೊಬ್ಬರು ಬೆಂಗಳೂರಿನವರು, ಮತ್ತೊಬ್ಬರು ಉತ್ತರ ಕರ್ನಾಟಕದವರು. ಹೀಗೆ ಪ್ರಾದೇಶಿಕ ಭಿನ್ನತೆಗಳಿದ್ದರೂ ಪರಸ್ಪರ ವಿಚಾರ ವಿನಿಮಯ ನಡೆಸುತ್ತಾ ಬೆಟ್ಟ ಹತ್ತೋಕೆ ಶುರು ಮಾಡಿದ್ವಿ.

ಇದನ್ನೂ ಓದಿ; College Life: ಕ್ಲಾಸ್ ರೂಮ್​​​​ನಲ್ಲಿ ಮೂಡಿ ಬಂದ ನನ್ನ ಸಿನಿಮಾ, ಖಳನಾಯಕ ಯಾರು ಗೊತ್ತಾ? ಅವನು ಬಂದಾಗೆಲ್ಲ ಹೀಗೆ ಆಗುವುದು

ಬೆಟ್ಟ ಹತ್ತೋಕೆ ಶುರು ಮಾಡಿದ ಅರ್ಧ ಗಂಟೇಲೇ ಶುರು ಆಯ್ತು ನೋಡಿ ಸುಸ್ತು. ಈ ನಡುವೆ ಕಂಡಿದ್ದೆಲ್ಲಾ ತಿನ್ನೋದು ಜಾಸ್ತಿ ಮಾಡಿದ್ದುಕ್ಕೋ ಏನೋ ಹೊಟ್ಟೇಲಿ ಕೂತಿದ್ದ ಬೊಜ್ಜು, ಟೈಟ್ ಆಗಿದ್ದ ಜೀನ್ಸ್ ಪ್ಯಾಂಟು, ತಳ ಸವೆದು ಜಾರ್ತಿರೋ ಚಪ್ಪಲಿಗಳು ಕಾರಣಗಳಾಗಿ ಮೆಟ್ಟಿಲುಗಳ ಮೇಲೆ ಹತ್ತೋಕೇ ಆಗದಷ್ಟು ಉಸಿರು ಮೇಲೆ ಬರೋಕೆ ಶುರು ಆಯ್ತು. ಅದ್ಯಾವ ಜನ್ಮದ ಪುಣ್ಯಾನೋ ಏನೋ ಅವತ್ತು ಬಿಸಿಲು ಅಷ್ಟಾಗಿ ಇರಲಿಲ್ಲ, ಅಲ್ಲಲ್ಲೇ ಬಂಡೆಗಳ‌ ಮೇಲೆ, ಮೆಟ್ಟಿಲುಗಳ ಮೇಲೆ ಕೂತು ದಣಿವಾರಿಸುತ್ತಾ ಗಿಡಮರಗಳನ್ನು ನೋಡುತ್ತಾ ಸಾಗಿದೆವು.

ಈ ಗಡಾಯಿಕಲ್ಲು ಕೇವಲ ಚಾರಣ ಸ್ಥಳವಾಗಿರದೇ ಐತಿಹಾಸಿಕ ಹಿನ್ನಲೆಯನ್ನು ಕೂಡ ಹೊಂದಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ, ಈ ಕೋಟೆಯನ್ನು ಮೂಲತಃ ನರಸಿಂಹಘಡ ಎಂದು ಕರೆಯಲಾಗುತ್ತಿತ್ತು, ಆರಂಭದಲ್ಲಿ ಈ ಕೋಟೆಯ ನಿರ್ಮಾಣಕ್ಕಾಗಿ ಕೆಲಸ ಮಾಡಿದ ಜೈನ ದೊರೆ ನರಸಿಂಹ ಜೈನರಿಂದ ಈ ಹೆಸರನ್ನು ಪಡೆದುಕೊಂಡಿದೆ. ಆದರೆ ಟಿಪ್ಪು ಸುಲ್ತಾನ್ 1794 ರಲ್ಲಿ ಮಂಗಳೂರು ಯುದ್ಧದ ನಂತರ ಶ್ರೀರಂಗ ಪಟ್ಟಣಕ್ಕೆ ಹಿಂದಿರುಗುವಾಗ ನರಸಿಂಹಘಡದ ಹೆಸರನ್ನು ಜಮಾಲಾಬಾದ್ ಕೋಟೆ ಎಂದು ಮರುನಾಮಕರಣಗೊಳಿಸಿದರು.

ಪ್ರವಾಸದ ಹೆಸರಲ್ಲಿ ಮಾಜು ಮಸ್ತಿ ಮಾಡಲೆಂದೇ ಬಂದು ಇತಿಹಾಸದ ಕುರುಹುಗಳಾದ ಅಲ್ಲಿನ ಕೋಟೆಯ ಗೋಡೆಗಳ ಮೇಲೆ ಬರೆದ ಅಮರ ಪ್ರೇಮಿಗಳ, ಪಾಗಲ್ ಪ್ರೇಮಿಗಳ, ಇನ್ಸ್ಟಾಗ್ರಾಮ್ ಇನ್ಫ್ಲೂಯೆನ್ಸರ್​​ಗಳ ಯೂಸರ್ ನೇಮ್ ಗಳ ನೋಡುತ್ತಾ ಅವರ ಕೆತ್ತನಾ ಶೈಲಿಗೆ ವಿಷಾದದಿಂದ ಅಹುದಹುದೆನ್ನುತ್ತಾ ಅಂತೂ ಗಡಾಯಿಕಲ್ಲಿನ ತುದಿ ಮುಟ್ಟಿದಾಗ ಸವನ್ನಾ ಹುಲ್ಲುಗಾವಲಿಗೆ ಬಂದ ರೀತಿಯ ಅನುಭವ. ಅಲ್ಲೇ ಇದ್ದ ಬಂಡೆ ಮೇಲೆ ಹಾಯಾಗಿ ಉಜಿರೆ ಕಡೆ ಮುಖ ಮಾಡ್ಕೊಂಡು ಎಲ್ಲರೂ ಕುಳಿತುಕೊಂಡೆವು. ತಣ್ಣನೆ ಗಾಳಿ ಲೈಟಾಗಿ ಮಳೆ ಹನಿಗಳನ್ನೂ ಹೊತ್ತುಕೊಂಡು ಮುಖಕ್ಕೆ ಬಡಿಯುತಿತ್ತು. ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಾ ನೋಡುತ್ತಾ ಬಂಡೆ ಮೇಲೆ ಕುಳಿತಿದ ನಮಗೆ ಅಂದು ಸೂರ್ಯದೇವನೂ ಸಹಕರಿಸಿದ್ದ.

ಅಂತೂ ಎರಡು ಗಂಟೆಗೂ ಹೆಚ್ಚು ಕಾಲ ಅಲ್ಲೇ ಕುಳಿತು, ಅಲ್ಲಿಂದಲೇ ಬಲ್ಲಾಳರಾಯನ ದುರ್ಗಕ್ಕೆ ಸೇರಿಕೊಂಡಂತಿರುವ ಬಂಡಾಜೆ ಫಾಲ್ಸ್ ಗೆ ಒಮ್ಮೆ ಹೋಗಬೇಕು ಎಂದು ಮಾತನಾಡಿಕೊಂಡು ಕೆಳಕ್ಕೆ ಇಳೀತಾ ದಾರಿಯಲ್ಲಿ ಸಿಕ್ಕ ಕಸವನನ್ನು ಹಿಡಿದುಕೊಂಡು, ಬೆಟ್ಟದ ಕೆಳಗಿಳಿದು ಶೇಖರಿಸಿದ್ದ ಕಸವನ್ನೆಲ್ಲಾ ಅಲ್ಲೇ ಇದ್ದ ಇದ್ದ ಕಸದ ಬುಟ್ಟಿಗೆ ಹಾಕಿ, ಕೈ ಕಾಲು ಮುಖ ತೊಳೆದು ಅಲ್ಲೇ ಇದ್ದ ಗೂಡಂಗಡಿಯೊಂದರಲ್ಲಿ ಬೊಂಡ ಜ್ಯೂಸ್ ಕುಡಿದು, ನಮ್ಮ ದೇಹಕ್ಕೆ ರೀಚಾರ್ಜ್ ಮಾಡಿಸಿಕೊಂಡು ಮತ್ತೆ ಉಜಿರೆ ಕಡೆ ಹೊರಟೆವು.

ಲೇಖನ: ಅನುರಾಗ್ ಗೌಡ ಬಿ ಆರ್