ಒಂದಾದ ಮೇಲೊಂದು ಅನಿರೀಕ್ಷಿತ ತಿರುವುಗಳಿದ್ದ ದಾರಿಯ ತುದಿಯಲ್ಲಿತ್ತು ನೆಮ್ಮದಿಯ ಬದುಕು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 15, 2022 | 4:33 PM

ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ, ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳಾಗಿದ್ದ ಲಾವಣ್ಯಾ ಅವರ ಬದುಕು ಹಲವು ತಿರುವುಗಳನ್ನು ದಾಟಿ ಸಾಗಿ ಬಂತು.

ಒಂದಾದ ಮೇಲೊಂದು ಅನಿರೀಕ್ಷಿತ ತಿರುವುಗಳಿದ್ದ ದಾರಿಯ ತುದಿಯಲ್ಲಿತ್ತು ನೆಮ್ಮದಿಯ ಬದುಕು
ಲಾವಣ್ಯ
Follow us on

ಜೀವನವೆಂದರೆ ದಾರಿಯುದ್ದಕ್ಕೂ ಸವಾಲುಗಳನ್ನು ಸ್ವೀಕರಿಸುತ್ತಾ, ಲವಲವಿಕೆಯಿಂದ ಮುಂದಿನ ಪಯಣದತ್ತ ಹೆಜ್ಜೆ ಹಾಕುವುದು. ಜೀವನವು ಸಹಜವಾಗಿ ಕಷ್ಟ-ಕಾರ್ಪಣ್ಯಗಳಿಂದ ತುಂಬಿದೆ. ಜೀವನ ಒಡ್ಡುವ ಸವಾಲುಗಳನ್ನು ಎದುರಿಸಲು ಸಿದ್ಧವಿಲ್ಲದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ. ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ, ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳಾಗಿದ್ದ ಲಾವಣ್ಯಾ ಅವರ ಬದುಕು ಹಲವು ತಿರುವುಗಳನ್ನು ದಾಟಿ ಸಾಗಿ ಬಂತು. ಅವರ ಬದುಕಿನಲ್ಲಿ ನಮಗೂ ಒಂದು ಪಾಠವಿದೆ. ಅದೇನೆಂಬುದು ಈ ಲೇಖನದ ಮುಂದಿನ ಸಾಲುಗಳಲ್ಲಿ ಸ್ಪಷ್ಟವಾಗುತ್ತದೆ.

ಶಾಸ್ತ್ರೋಕ್ತ ಕುಟುಂಬದಲ್ಲಿ ಬೆಳೆದ ಲಾವಣ್ಯಳನ್ನು ಪೋಷಕರು ತುಂಬಾ ಮುದ್ದು ಮಾಡಿ ಎಲ್ಲಾ ಸೌಲಭ್ಯಗಳನ್ನು ನೀಡಿ ಬೆಳೆಸಿದ್ದರು. ಹೀಗೆ ವರ್ಷಗಳ ಕಾಲ ಎಲ್ಲವೂ ಸುಗಮವಾಗಿ ಮುಂದೆ ಸಾಗುತ್ತಿದ್ದಾಗ ದುರದೃಷ್ಟವಶಾತ್‌ ಆಕೆಯ ತಂದೆ ತನ್ನ ವ್ಯವಹಾರದಲ್ಲಿ ಭಾರಿ ನಷ್ಟವನ್ನು ಅನುಭವಿಸಿದರು. ಈ ಸಂದರ್ಭದಲ್ಲಿ ಮನೆಯ ಜವಾಬ್ದಾರಿ ಲಾವಣ್ಯಾಳ ಹೆಗಲೇರಿತು. ತನ್ನ ಕುಟುಂಬವನ್ನು ನೈತಿಕವಾಗಿ ಮತ್ತು ಆರ್ಥಿಕವಾಗಿ ಬೆಂಬಲಿಸಲು ಪ್ರಾರಂಭಿಸಿದ ಲಾವಣ್ಯ ಅನಾಥಾಶ್ರಮಗಳಲ್ಲಿ ವಾಸಿಸುವ ಮಕ್ಕಳಿಗೆ ತರಬೇತುದಾರರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ವಿದ್ಯಾರ್ಥಿಗಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುವಲ್ಲಿ ಲಾವಣ್ಯ ಯಶಸ್ವಿಯಾದರು.

ಭಾರತದ ಸಾಂಪ್ರದಾಯಿಕ ಕುಟುಂಬಗಳಂತೆ, ಲಾವಣ್ಯರ ಪೋಷಕರು ಸಹ ತಮ್ಮ ಸಂಪ್ರದಾಯಗಳಿಗೆ ಬದ್ಧರಾಗಿದ್ದರು. ಮದುವೆ ವಯಸ್ಸಿಗೆ ಬಂದ ಮಗಳಿಗೆ ಮದುವೆ ಆಗುವಂತೆ ಒತ್ತಡ ಹೇರಿದರು. ಪೋಷಕರ ಒತ್ತಡಕ್ಕೆ ಮಣಿದು ಮದುವೆಯಾಗಲು ಒಪ್ಪಿದ ಲಾವಣ್ಯ ಅವರ ದಾಂಪತ್ಯ ಜೀವನದ ಸುಖಮಯವಾಗಿರಲಿಲ್ಲ. ಅವರನ್ನು ಮದುವೆಯಾದ ವ್ಯಕ್ತಿ, ತನಗಿರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಮುಚ್ಚಿಟ್ಟಿದ್ದ. ಆದರೆ ವಿಚ್ಛೇದನ ಪಡೆಯಲು ಮನೆಯವರು ಒಪ್ಪಲಿಲ್ಲ. ಮನೆಯವರನ್ನು ಎದುರುಹಾಕಿಕೊಂಡು ವಿಚ್ಛೇದನ ಪಡೆದ ಲಾವಣ್ಯ, ನಂತರದ ದಿನಗಳಲ್ಲಿ ಹೊಸ ಜೀವನ ಆರಂಭಿಸಿದರು.

ಮೊದಲಿಗೆ ತಮ್ಮನ್ನು ತಾವು ಪ್ರೀತಿಸುವುದು ಕಲಿತರು. ನಂತರ ಎಲ್ಲ ಚಿಂತೆ ಮರೆತು ಖುಷಿಯನ್ನು ಅರಸಿದರು. ಕೆಲ ಸಮಯದ ನಂತರ ಎರಡನೇ ಮದುವೆಯಾಗುವಂತೆ ಲಾವಣ್ಯಾಳ ಪೋಷಕರು ಕೇಳಿಕೊಂಡರು. ಆದರೆ ಮತ್ತೊಂದು ಮದುವೆ ಆಗುವುದು ಆಕೆಗೆ ಇಷ್ಟವಿರಲಿಲ್ಲ. ಬದಲಿಗೆ ಮಗುವನ್ನು ದತ್ತು ತೆಗೆದುಕೊಂಡು ಏಕಾಂಗಿಯಾಗಿ ಜೀವನ ನಡೆಸಲು ಬಯಸಿದ್ದರು.

ಭಾರತದಲ್ಲಿ ಸಿಂಗಲ್ ಪೇರೆಂಟ್ ಆಗುವುದು ದೊಡ್ಡ ಸವಾಲು. ಲಾವಣ್ಯಗೆ ಆಶ್ಚರ್ಯವೆಂಬಂತೆ, 6 ತಿಂಗಳ ನಂತರ ಆಕೆಯ ತಂದೆ ಒಂದು ದಿನದ ಮಗುವನ್ನು ದತ್ತು ಪಡೆದು ಅವಳ ಕೈಗಿತ್ತರು. ತನ್ನ ಬಹುಕಾಲದ ಕನಸು ನನಸಾದ ಖುಷಿಯಲ್ಲಿದ್ದ ಲಾಔಣ್ಯ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದರು.

ದಿಟ್ಟ ನಿರ್ಧಾರ ತೆಗೆದುಕೊಂಡಿದ್ದ ಅವರು, ಸಮಾಜದಿಂದ ಹಾಗೂ ಸಂಬಂಧಿಕರಿಂದ ಹಲವು ಸಲ್ಲದ ಮಾತುಗಳನ್ನು ಕೇಳಬೇಕಾಯಿತು. ಮಗುವಿನ ತಂದೆ ಹಾಗೂ ತಾಯಿಯ ಪಾತ್ರಗಳನ್ನು ನಿಭಾಯಿಸಬೇಕಾಗಿದ್ದ ಅವರಿಗೆ ಇದು ಸವಾಲಿನ ಕೆಲಸವಾಗಿತ್ತು. ಮಗನ ಪ್ರೀತಿಯಿಂದ ಹೊಸ ಜೀವನವನ್ನು ಕಂಡುಕೊಂಡಿದ್ದ ಲಾವಣ್ಯ ತರಬೇತುದಾರರಾಗಿ, ಉದ್ಯಮಿಯಾಗಿ ವೃತ್ತಿ ಜೀವನದಲ್ಲಿ ಯಶಸ್ವಿಯಾದರು. ಹೀಗೆ ವಿವಿಧ ಕಡೆ ಪ್ರಯಾಣ ಮಾಡುತ್ತಾ ಹಲವು ಜೀವನಾನುಭವಗಳನ್ನು ಪಡೆದುಕೊಂಡ ಲಾವಣ್ಯಗೆ ಬದುಕೊಂದು ಅನೀರಿಕ್ಷಿತ ಸಂತಸವನ್ನು ಕಾದಿರಿಸಿತ್ತು.

ತನ್ನ ಬಿಡುವಿನ ವೇಳೆಯನ್ನು ಕಳೆಯುತ್ತಿದ್ದ ಅನಾಥಾಶ್ರಮದಲ್ಲಿ ಅವರು ಸಂಗಾತಿ ದೊರೆತರು. ವಿಭಿನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯ ಹೊರತಾಗಿಯೂ, ಜತೆಗಾರನೊಂದಿಗೆ ಅನ್ಯೋನ್ಯವಾಗಿ ಬದುಕಲು ಪ್ರಾರಂಭಿಸಿದರು. ತನ್ನ ಮಗನ ಜವಾಬ್ದಾರಿಯೊಂದಿಗೆ ಹೊಸ ಸಂಗಾತಿಯ ಕೈ ಹಿಡಿದರು. ಜೀವನದಲ್ಲಿ ಎಷ್ಟೇ ಅಡೆತಡೆಗಳು ಎದುರಾದರೂ, ಬದುಕೇ ನಮಗೊಂದು ದಾರಿ ಕಲ್ಪಿಸುತ್ತದೆ. ಜೀವನವನ್ನು ಜಯಿಸುವ ಮಾರ್ಗವನ್ನು ತೋರಿಸುತ್ತದೆ. ಜೀವನವು ಏರಿಳಿತಗಳಿಂದ ತುಂಬಿದ್ದರೂ, ಧೈರ್ಯಗೆಡದೆ ಎದುರಿಸುವ ಚಾಕಚಕ್ಕತೆ ನಮ್ಮದಾಗಬೇಕು. ಬದುಕು ಸುಂದರವಾದ ಒಂದು ಅನುಭವ ಎಂದು ಹೇಳುತ್ತಾರೆ ಲಾವಣ್ಯ,

ಪ್ರಸ್ತುತ ಅವರು ಆರ್ಕಿಡ್ಸ್​-ದಿ ಇಂಟರ್​ನ್ಯಾಷನಲ್ ಸ್ಕೂಲ್​ನ ಪ್ರಾಚಾರ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬರಹ: ಉಮಾಶಂಕರ ಶರ್ಮಾ

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Wed, 15 June 22