ನಿರ್ಮಲಾ ಸೀತಾರಾಮನ್​ ಆಯವ್ಯಯ ಲೆಕ್ಕಕ್ಕೆ ಫುಲ್​ ಮಾರ್ಕ್ಸ್ ಕೊಟ್ಟ ಪ್ರಧಾನಿ ಮೋದಿ; ಹೊಸ ಭರವಸೆ ಮೂಡಿಸಿದ ಬಜೆಟ್​ ಎಂದು ವಿಶ್ಲೇಷಣೆ

2022-23ನೇ ಸಾಲಿನ ಕೇಂದ್ರ ಬಜೆಟ್​ ಮತ್ತು ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡುವಂತೆ ಬಿಜೆಪಿ ನನ್ನನ್ನು ಆಹ್ವಾನಿಸಿದ್ದು, ನಾಳೆ (ಫೆ.2) ಬೆಳಗ್ಗೆ 11ಗಂಟೆಗೆ ಮಾತನಾಡುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್​ ಆಯವ್ಯಯ ಲೆಕ್ಕಕ್ಕೆ ಫುಲ್​ ಮಾರ್ಕ್ಸ್ ಕೊಟ್ಟ ಪ್ರಧಾನಿ ಮೋದಿ; ಹೊಸ ಭರವಸೆ ಮೂಡಿಸಿದ ಬಜೆಟ್​ ಎಂದು ವಿಶ್ಲೇಷಣೆ
ಪ್ರಧಾನಿ ನರೇಂದ್ರ ಮೋದಿ
Edited By:

Updated on: Feb 01, 2022 | 3:49 PM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)​ ಬಜೆಟ್​ ಮಂಡನೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾತನಾಡಿ, ಇಂದು ಮಂಡಿಸಲ್ಪಟ್ಟ ಕೇಂದ್ರ ಬಜೆಟ್​ ದೇಶದ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ ಮತ್ತು ಹೆಚ್ಚೆಚ್ಚು ಅವಕಾಶಗಳನ್ನು ಕಲ್ಪಿಸುವಂಥದ್ದಾಗಿದೆ. ದೇಶದ ಆರ್ಥಿಕತೆಯನ್ನು ಬಲಪಡಿಸುವ ಜತೆಗೆ, ಹೇರಳವಾದ ಹೂಡಿಕೆ, ಮೂಲಸೌಕರ್ಯ, ಬೆಳವಣಿಗೆ ಮತ್ತು ಉದ್ಯೋಗಾವಕಾಶವನ್ನೊಳಗೊಂಡ ಬಜೆಟ್​ ಆಗಿದೆ. ರಸ್ತೆ, ರೈಲ್ವೆ, ಹೈವೇಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಹಸಿರು ಉದ್ಯೋಗಗಳಿಗೆ ಸಂಬಂಧಪಟ್ಟ ಹೊಸ ನಿಬಂಧನೆಯೂ ಇದೆ. ಬಡಜನರ ಅಗತ್ಯಗಳನ್ನು ಪೂರೈಸುವಂತಿದೆ. ಒಟ್ಟಾರೆ ದೇಶದ ಯುವಜನತೆಯ ಭವಿಷ್ಯಕ್ಕೆ ಹೊಸ ಬೆಳಕು ನೀಡುವಂಥದ್ದು ಎಂದು ವಿಶ್ಲೇಷಿಸಿದರು.

ಜನಸ್ನೇಹಿ ಮತ್ತು ಅಭಿವೃದ್ಧಿ ಪರ ಬಜೆಟ್​ ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಾಳೆ ಬೆಳಗ್ಗೆ 11ಗಂಟೆಗೆ ಬಜೆಟ್​ ಕುರಿತಂತೆ ವಿವರವಾಗಿ ಮಾತನಾಡುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಇದೇ ಮೊದಲ ಬಾರಿಗೆ ಪರ್ವತ್​ ಮಾಲಾ ಯೋಜನೆಗೆ ಸೂಕ್ತವಾಗಿ ಚಾಲನೆ ನೀಡಲಾಗುತ್ತಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ್​, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ, ಬೆಟ್ಟ ಪ್ರದೇಶಗಳಲ್ಲಿ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಯೋಜನೆ ಇದಾಗಿದೆ. ಗಡಿ ಗ್ರಾಮಗಳ ಅಭಿವೃದ್ಧಿಗೆ ಇದು ಪೂರಕ ಎಂದು ವಿವರಿಸಿದರು. (2022-23ರಲ್ಲಿ ದೇಶದ ರಾಷ್ಟ್ರೀಯ ಹೆದ್ದಾರಿಗಳನ್ನು 25 ಸಾವಿರ ಕಿಮೀ ವಿಸ್ತರಣೆ ಮಾಡುವುದಾಗಿ ಇಂದು ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ. ಪಿಎಂ ಗತಿಶಕ್ತಿ ಯೋಜನೆಯಡಿ ನಡೆಯಲಿರುವ ಈ ಅಭಿವೃದ್ಧಿ ಕೆಲಸ, ಗುಡ್ಡಗಾಡು ಪ್ರದೇಶಗಳ ಸಾರಿಗೆ, ಸಂಪರ್ಕ ಸುಧಾರಣೆಯನ್ನು ಒಳಗೊಂಡಿದೆ.)

ಮುಂದುವರಿದು ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಗಂಗಾ ನದಿ ಸ್ವಚ್ಛತೆಗಾಗಿ ಮಹತ್ವದ ಘೋಷಣೆಗಳನ್ನು ಮಾಡುವ ಜತೆ, ರೈತರ ಕಲ್ಯಾಣಕ್ಕಾಗಿಯೂ ವಿವಿಧ ಸುಧಾರಣಾ ಕ್ರಮಗಳನ್ನು ಬಜೆಟ್​​ನಲ್ಲಿ ಪ್ರಸ್ತುತಪಡಿಸಲಾಗಿದೆ. ಉತ್ತರಪ್ರದೇಶ, ಉತ್ತರಾಖಂಡ್​, ಜಾರ್ಖಂಡ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಗಂಗಾ ನದಿ ದಡದ ಮೇಲೆ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಲಾಗಿದೆ. ಗಂಗಾ ನದಿಯನ್ನು ರಾಸಾಯನಿಕ ಮುಕ್ತಗೊಳಿಸಲು ಇಟ್ಟ ಬಹು ಮಹತ್ವದ ಹೆಜ್ಜೆಯಿದು ಎಂದು ಪ್ರಧಾನಿ ಹೇಳಿದ್ದಾರೆ.

ಹಾಗೇ, ಘೋಷಣೆ ಮಾಡಲಾದ 2.25 ಲಕ್ಷ ಕೋಟಿ ಕನಿಷ್ಠ ಬೆಂಬಲ ಬೆಲೆ ನೇರವಾಗಿ ರೈತರ ಖಾತೆಗೇ ತಲುಪುತ್ತದೆ. ಇಂದು ಮಂಡನೆಯಾದ ಬಜೆಟ್​ ರೈತರ ಆದಾಯವನ್ನು ದ್ವಿಗುಣಗೊಳಿಸುವುದರಲ್ಲಿ ಸಂಶಯವಿಲ್ಲ. ಎಂಎಸ್​ಎಂಇಗಳಿಗೆ  (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ಕ್ರೆಡಿಟ್​ ಗ್ಯಾರಂಟಿ ಮತ್ತು ಇನ್ನೂ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. 2022-23ನೇ ಸಾಲಿನ ಕೇಂದ್ರ ಬಜೆಟ್​ ಮತ್ತು ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡುವಂತೆ ಬಿಜೆಪಿ ನನ್ನನ್ನು ಆಹ್ವಾನಿಸಿದ್ದು, ಬೆಳಗ್ಗೆ 11ಗಂಟೆಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Budget 2022 ವರ್ಚುವಲ್‌ ಡಿಜಿಟಲ್‌ ಸ್ವತ್ತು, ಕ್ರಿಪ್ಟೊಕರೆನ್ಸಿಗಳ ಮೂಲಕ ಗಳಿಸುವ ಆದಾಯದ ಮೇಲೆ ಶೇ 30 ತೆರಿಗೆ: ಏನಿದು ಕ್ರಿಪ್ಟೊ ತೆರಿಗೆ?

Published On - 3:22 pm, Tue, 1 February 22