AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget 2022: ಮದ್ಯದ ಮೇಲೆ ತೆರಿಗೆ ಹೆಚ್ಚಿಸದಿರಲು ಮಾಡಿರುವ ಮನವಿಗೆ ಸ್ಪಂದಿಸುತ್ತಾರಾ ಬಸವರಾಜ್ ಬೊಮ್ಮಾಯಿ?

ಕರ್ನಾಟಕ ಬಜೆಟ್ 2022ರಿಂದ ಮದ್ಯ ವಲಯದ ನಿರೀಕ್ಷೆಗಳೇನು ಎಂಬುದರ ಬಗ್ಗೆ ವಿವರಗಳು ಇಲ್ಲಿವೆ. ಮಾರ್ಚ್ 4ನೇ ತಾರೀಕು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡನೆ ಮಾಡಲಿದ್ದಾರೆ.

Karnataka Budget 2022: ಮದ್ಯದ ಮೇಲೆ ತೆರಿಗೆ ಹೆಚ್ಚಿಸದಿರಲು ಮಾಡಿರುವ ಮನವಿಗೆ ಸ್ಪಂದಿಸುತ್ತಾರಾ ಬಸವರಾಜ್ ಬೊಮ್ಮಾಯಿ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Mar 03, 2022 | 2:19 PM

Share

ಭಾರತದಲ್ಲಿ ತಯಾರಿಸಿದ ವಿದೇಶೀ ಮದ್ಯಕ್ಕೆ (IMFL) ಹಾಗೂ ಬಿಯರ್​ಗೆ ಮಾರ್ಚ್ 4ನೇ ತಾರೀಕಿನಂದು ಮಂಡನೆ ಆಗಲಿರುವ ಕರ್ನಾಟಕ ಬಜೆಟ್ 2022ರಲ್ಲಿ (Karnataka Budget 2022) ಹೆಚ್ಚುವರಿ ಅಬಕಾರಿ ಸುಂಕ (AED) ವಿಧಿಸದೆ ಹಾಗೇ ಬಿಡಬಹುದು ಎಂಬ ಭರವಸೆಯನ್ನು ಸಂಬಂಧಿಸಿದ ವಲಯದಿಂದ ವ್ಯಕ್ತಪಡಿಸಲಾಗಿದೆ. ಕಳೆದ ವಾರ ಕರ್ನಾಟಕ ವೈನ್ ಮಾರಾಟಗಾರರ ಒಕ್ಕೂಟಗಳ ಫೆಡರೇಷನ್​ನ ಸದಸ್ಯರು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರನ್ನು ಭೇಟಿ ಆಗಿದ್ದರು. ಈಗಾಗಲೇ ರಾಜ್ಯದಲ್ಲಿ ಮದ್ಯದ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಮಾರಾಟಕ್ಕೆ ಪೆಟ್ಟು ಬಿದ್ದಿದೆ. ಸುಂಕ ಮತ್ತು ತೆರಿಗೆಯನ್ನು ಮತ್ತೆ ಹೆಚ್ಚಿಸುವುದರಿಂದ ಮಾರಾಟದ ಮೇಲೆ ಮಾತ್ರವಲ್ಲ, ಸರ್ಕಾರದ ಆದಾಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. “2012ರಿಂದ ಈಚೆಗೆ ರಾಜ್ಯ ಸರ್ಕಾರದಿಂದ ಐಎಂಎಫ್​ಎಲ್ ಮತ್ತು ಬಿಯರ್​ ಮೇಲೆ ಏಳು ಬಾರಿ ಎಇಡಿ ಹೆಚ್ಚಿಸಲಾಗಿದೆ,” ಎಂದು ಫೆಡರೇಷನ್​ನ ಮಹಾ ಕಾರ್ಯದರ್ಶಿ ಬಿ.ಗೋವಿಂದ್​ರಾಜ್ ಹೆಗ್ಡೆ ಹೇಳಿದ್ದಾರೆ.

“ಬಡ ಹಾಗೂ ಮಧ್ಯಮ ವರ್ಗದವರಿಗೆ ಈಗಾಗಲೇ ಮದ್ಯ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಐಎಂಎಫ್ಎಲ್ ಹಾಗೂ ಬಿಯರ್​ನ ಮಾರಾಟ ಕುಸಿತ ಆಗಿರುವುದು ಇದಕ್ಕೆ ಉದಾಹರಣೆ. ಸುಂಕವನ್ನು ಇನ್ನಷ್ಟು ಹೆಚ್ಚಿಸುವುದರಿಂದ ಈ ವಲಯಕ್ಕೆ ಹಾನಿ ಆಗುತ್ತದೆ. ಆದ್ದರಿಂದ ಎಇಡಿ ಹೆಚ್ಚಿಸದಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ,” ಎಂದಿದ್ದಾರೆ. ಮದ್ಯದ ಮೇಲೆ ವಿಧಿಸುವ ಎಇಡಿ ಸರ್ಕಾರದ ಪಾಲಿಗೆ ಬಹಳ ಸಮಯದಿಂದಲೂ ಪ್ರಮುಖವಾದ ಆದಾಯ. ವರ್ಷದಿಂದ ವರ್ಷಕ್ಕೆ ಸ್ಥಿರವಾಗಿ ಶೇ 12ರಿಂದ 15ರಷ್ಟು ಏರಿಕೆ ಆಗುತ್ತಾ ಬರುತ್ತಿದೆ. ಮದ್ಯ ಮಾರಾಟದಿಂದ ಬರುವ ಆದಾಯ ಕಳೆದ 12 ವರ್ಷಗಳಲ್ಲಿ ಮೂರು ಪಟ್ಟಾಗಿದೆ. 2008ನೇ ಇಸವಿಯಲ್ಲಿ 8000 ಕೋಟಿ ರೂಪಾಯಿ ಇದ್ದದ್ದು ಈ ಹಣಕಾಸು ವರ್ಷದಲ್ಲಿ 24 ಸಾವಿರ ಕೋಟಿ ರೂ. ಆಗಿದೆ.

ಪೆಟ್ರೋಲ್- ಡೀಸೆಲ್ ದರ ಏರಿಕೆ ಮಾಡಿದರೆ ವಿರೋಧ ಎದುರಿಸಬೇಕಾಗುತ್ತದೆ. ಅದೇ ಮದ್ಯದ ಗ್ರಾಹಕರು ಅಂಥ ಯಾವುದೇ ವಿರೋಧ ಮಾಡುವುದಿಲ್ಲ. ಇದರಿಂದಾಗಿ ಸರ್ಕಾರ ಸಹ ಎಇಡಿ ಹೆಚ್ಚಿಸುತ್ತದೆ. 2020- 21ನೇ ವರ್ಷವೊಂದರಲ್ಲೇ ಐಎಂಎಫ್​ಎಲ್​ ಮತ್ತು ಬಿಯರ್​ 18 ಸ್ಲ್ಯಾಬ್ಸ್​ನಲ್ಲಿ ರಾಜ್ಯ ಸರ್ಕಾರದಿಂದ ಶೇ 17ರಿಂದ ಶೇ 25ರಷ್ಟು ಹೆಚ್ಚಳ ಮಾಡಲಾಗಿದೆ. ಕೊವಿಡ್​-19 ಬಿಕ್ಕಟ್ಟಿನಿಂದ ಆದ ಆದಾಯ ನಷ್ಟ ಸರಿದೂಗಿಸಲು ಏರಿಕೆ ಮಾಡಿತು. ಎಲ್ಲ ಬ್ರ್ಯಾಂಡ್​ಗಳಲ್ಲಿ ಕ್ವಾರ್ಟರ್​ಗೆ (180 ಮಿ.ಲೀ.) ಮದ್ಯದ ಎಂಆರ್​ಪಿಯಲ್ಲಿ ರೂ. 5ರಿಂದ ರೂ. 179 ಹೆಚ್ಚಳ ಆಗಿದೆ.

ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ಬೆಲೆ ಹೆಚ್ಚಿದೆ. ಅದರ ಪರಿಣಾಮವಾಗಿ ಈ ರಾಜ್ಯಗಳ ಮದ್ಯವು ಗಡಿ ಜಿಲ್ಲೆಗಳಲ್ಲಿ ಕಾನೂನುಬಾಹಿರವಾಗಿ ಮಾರಾಟ ಮಾಡಲಾಗುತ್ತದೆ. ಇದರಿಂದಾಗಿ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ ಎಂದು ಗಡಿ ಜಿಲ್ಲೆಯ ಬಾರ್​ ಓನರ್​ವೊಬ್ಬರು ಹೇಳಿದ್ದಾರೆ.

ಈ ವಲಯದ ಇನ್ನೂ ಕೆಲವು ಬೇಡಿಕೆ ಅಂದರೆ, ರೀಟೇಲ್​ ಮಳಿಗೆಗಳಿಗೆ ಲಾಭವನ್ನು ಶೇ 20ಕ್ಕೆ ಹೆಚ್ಚಿಸಬೇಕು, ವಾರ್ಷಿಕ ಪರವಾನಗಿ ಶುಲ್ಕ ಯಥಾಸ್ಥಿತಿ, ಡಿಸ್ಟಿಲರಿಗಳು ಹಾಗೂ ಬ್ರಿವರಿಗಳು ತಮ್ಮ ಉತ್ಪನ್ನಗಳನ್ನು ರಿಯಾಯಿತಿ ದರದ ಯೋಜನೆ ಮೂಲಕ ಪ್ರಮೋಟ್ ಮಾಡಬಾರದು ಎಂಬುದು. ಸರ್ಕಾರಕ್ಕೆ ತನ್ನ ಆದಾಯ ಹೆಚ್ಚು ಮಾಡಿಕೊಳ್ಳುವುದು ಕೆಲವು ಆಯ್ಕೆಗಳು ಮಾತ್ರ ಇವೆ. ಆದ್ದರಿಂದ ತನ್ನದೇ ಆದಾಯವನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಎಇಡಿ ಹೆಚ್ಚಳ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಸರ್ಕಾರಿ ಅಧಿಕಾರಿಗಳು.

ಇದನ್ನೂ ಓದಿ: Karnataka Budget 2022: ಕೊವಿಡ್-19 ಅಲೆಯಲ್ಲಿ ಏರುತ್ತಿರುವ ಕರ್ನಾಟಕದ ಸಾಲ; ಇಲ್ಲಿದೆ ಈ ಹಿಂದಿನ ಬಜೆಟ್ ಚಿತ್ರಣ

Published On - 2:18 pm, Thu, 3 March 22