Byju’s: ಬೈಜೂಸ್​ಗೆ ನಿಲ್ಲದ ಸಂಕಷ್ಟ, ಸಾಲಗಾರರ ಕಾಟ; ಬಡ್ಡಿಕಟ್ಟಲೂ ಕಷ್ಟ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರದಾಟ

Loan Repayment Of Byju's: ಸಾಲ ಮರುರಚನೆಗೆ ಯತ್ನಿಸಿ ಸಾಲಗಾರರೊಂದಿಗೆ ಬೈಜೂಸ್ ಮಾಡಿದ ಪ್ರಯತ್ನ ವಿಫಲವಾಗಿದೆ. 1.2 ಬಿಲಿಯನ್ ಡಾಲರ್ ಸಾಲ ಹೊಂದಿರುವ ಬೈಜೂಸ್ ಇವತ್ತು 40 ಮಿಲಿಯನ್ ಡಾಲರ್​ನಷ್ಟು ಬಡ್ಡಿ ಕಟ್ಟಬೇಕಿದೆ.

Byjus: ಬೈಜೂಸ್​ಗೆ ನಿಲ್ಲದ ಸಂಕಷ್ಟ, ಸಾಲಗಾರರ ಕಾಟ; ಬಡ್ಡಿಕಟ್ಟಲೂ ಕಷ್ಟ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರದಾಟ
ಬೈಜೂಸ್

Updated on: Jun 05, 2023 | 11:39 AM

ನವದೆಹಲಿ: ಭಾರತದ ಸ್ಟಾರ್ಟಪ್ ಲೋಕದ ಸ್ಟಾರ್​ಕಿಡ್​ನಂತೆ ಇದ್ದ ಬೈಜೂಸ್ ಸಂಸ್ಥೆಗೆ (Byju’s) ಸಂಕಷ್ಟದ ಸರಮಾಲೆ ಒಂದರ ಹಿಂದೊಂದು ಬರುತ್ತಲೇ ಇದೆ. ಒಂದು ಕಡೆ ಸಾಲದ ಹೊರೆ, ಇನ್ನೊಂದು ಕಡೆ ನಿರೀಕ್ಷಿತವಾಗಿ ನಡೆಯದ ಬ್ಯುಸಿನೆಸ್, ಮಗದೊಂದೆಡೆ ಹಣಕಾಸು ವರದಿ ಸಲ್ಲಿಸದ ಆರೋಪ, ಮತ್ತಿನ್ನೊಂದೆಡೆ ತೆರಿಗೆ ವಂಚನೆಯ ಆರೋಪದಲ್ಲಿ ತೆರಿಗೆ ಅಧಿಕಾರಿಗಳಿಂದ ಶೋಧ, ಹೀಗೆ ಕಷ್ಟ, ವಿವಾದಗಳ ಕೆಸರು ಬೈಜೂಸ್ ಅನ್ನು ಮೆತ್ತಿಕೊಂಡಿದೆ. 1.2 ಬಿಲಿಯನ್ ಡಾಲರ್ (ಸುಮಾರು 10,000 ಕೋಟಿ ರೂ) ಸಾಲದ ಸುಳಿಗೆ ಸಿಲುಕಿರುವ ಬೈಜೂಸ್ 3 ತಿಂಗಳಿಗೊಮ್ಮೆ ಬಡ್ಡಿಯನ್ನಾದರೂ ಕಟ್ಟಬೇಕು. ಇವತ್ತು ಜೂನ್ 5ರಂದು ಬಡ್ಡಿ ಕಟ್ಟಲು ಡೆಡ್​ಲೈನ್. ಬಡ್ಡಿ ಮೊತ್ತ 40 ಮಿಲಿಯನ್ ಡಾಲರ್. ಅಂದರೆ, 33 ಕೋಟಿ ರೂಪಾಯಿ. ಇಷ್ಟು ಹಣ ಹೊಂದಿಸಲು ಬೈಜೂಸ್ ಹೆಣಗಾಡುತ್ತಿದೆ.

ಬೈಜೂಸ್ ಸಂಸ್ಥೆಗೆ 1.2 ಬಿಲಿಯನ್ ಡಾಲರ್ ಸಾಲವನ್ನು ಕೊಟ್ಟಿರುವ ಸಂಸ್ಥೆಗಳು ಯಾವ ಸಂಧಾನಕ್ಕೂ ಜಗ್ಗುತ್ತಿಲ್ಲ. ಸಾಲ ತೀರಿಸಲು ಹೆಚ್ಚು ಸಮಯ ಕೇಳಿದ ಬೈಜೂಸ್​ನ ಮನವಿಯನ್ನು ಸಾಲಗಾರರು ತಿರಸ್ಕರಿಸಿದ್ದಾರೆ. ಈಗ ನಿಗದಿತ ದಿನದೊಳಗೆ, ಅಂದರೆ ಇವತ್ತು ಬೈಜೂಸ್ ಬಡ್ಡಿ ಕಟ್ಟದಿದ್ದರೆ ಲೋನ್ ಡೀಫಾಲ್ಟ್ ಆಗಲಿದೆ. ಆಗ ಬೈಜೂಸ್ ತೊಂದರೆ ಸಿಕ್ಕಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿGiga Factory: ಭಾರತದಲ್ಲಿ ಮೊದಲ ಬಾರಿಗೆ ಲಿಥಿಯಮ್ ಅಯಾನ್ ಸೆಲ್ ತಯಾರಿಕೆ; ಟಾಟಾದಿಂದ ಗೀಗಾ ಫ್ಯಾಕ್ಟರಿ ಸ್ಥಾಪನೆಗೆ ಒಪ್ಪಂದ

ಒಂದು ವೇಳೆ ಬೈಜೂಸ್ ಇವತ್ತು ಬಡ್ಡಿ ಕಟ್ಟಿಬಿಟ್ಟರೆ ಬೀಸೋ ದೊಣ್ಣೆಯಿಂದ ಸದ್ಯಕ್ಕೆ ಪಾರಾಗಬಹುದು. ಮತ್ತೆ ಒಂದಷ್ಟು ಅವಧಿ ಉಸಿರಾಡಲು ಸಮಯ ಸಿಗುತ್ತದೆ. ಅಷ್ಟರೊಳಗೆ ಎಲ್ಲಿಯಾದರೂ ಬೇರೆಡೆ ಸಾಲ ಹೊಂದಿಸಿ, ಆ ಸಾಲವನ್ನು ಹಳೆಯ ಸಾಲ ತೀರಿಸಲು ಬಳಸಬಹುದು. ಈ ಮೂಲಕ ಮಾರುಕಟ್ಟೆಯಲ್ಲಿ ಬೈಜೂಸ್ ಜೀವಂತವಾಗಿ ಉಳಿಯಲು ಸಾಧ್ಯವಾಗಬಹುದು.

ಬೈಜೂಸ್ ಮೇಲೆ ಸಾಲಗಾರರಿಗೆ ಯಾಕೆ ಮುನಿಸು?

ಬೈಜೂಸ್ ಸಂಸ್ಥೆ 2022-23ರ ಹಣಕಾಸು ವರ್ಷದಲ್ಲಿ ನಿಗದಿತ ಅವಧಿಯೊಳಗೆ ಆಡಿಟ್ ಮಾಡಿದ ಸ್ಟೇಟ್ಮೆಂಟ್ ಫೈಲ್ ಮಾಡಲು ವಿಫಲವಾಗಿತ್ತು. ಇದು ಸಾಲಗಾರರಿಗೆ ಬೈಜೂಸ್ ಮೇಲಿದ್ದ ನಂಬಿಕೆ ನಶಿಸುವಂತೆ ಮಾಡಿತು ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಫೆಮಾ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಭಾರತದ ಐಟಿ ಇಲಾಖೆ ಬೈಜೂಸ್​ನ ಕಚೇರಿ ಮತ್ತಿತರ ಸ್ಥಳಗಳ ಮೇಲೆ ರೇಡ್ ಮಾಡಿದ ಘಟನೆಯೂ ಆಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us