Khan Sir: ಬಸ್ಸಿಗೆ ದುಡ್ಡಿಲ್ಲದೆ ಊರಿಗೆ ನಡೆದು ಹೋಗಿದ್ದ ಖಾನ್ ಸರ್, 107 ಕೋಟಿ ರೂ ತಿರಸ್ಕರಿಸಿದ ಕಥೆ

Success story of Khan Sir: ಫೈಜಲ್ ಖಾನ್ ಅಕಾ ಖಾನ್ ಸರ್ ದೇಶಾದ್ಯಂತ ಬಹಳ ಜನಪ್ರಿಯವಾಗಿರುವ ಶಿಕ್ಷಕ. ಕ್ಲಿಷ್ಟಕರ ವಿಷಯಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಬಲ್ಲುರು. ಕಷ್ಟದಲ್ಲಿ ಬೆಳೆದ ಅವರು ಯಶಸ್ವಿ ಶಿಕ್ಷಕರಾಗಿ ಬೆಳೆದಿದ್ದಾರೆ. ಇವತ್ತು ಬಿಹಾರದ ಪ್ರತಿ ಜಿಲ್ಲೆಯಲ್ಲೂ ಡಯಾಲಿಸಿಸ್ ಸೆಂಟರ್, ಬ್ಲಡ್ ಬ್ಯಾಂಕ್ ತೆರೆಯಲು ಹೊರಟಿದ್ದಾರೆ. ಈ ಪ್ರೀತಿಯ ಖಾನ್ ಸರ್ ಕಥೆ ಇಲ್ಲಿದೆ...

Khan Sir: ಬಸ್ಸಿಗೆ ದುಡ್ಡಿಲ್ಲದೆ ಊರಿಗೆ ನಡೆದು ಹೋಗಿದ್ದ ಖಾನ್ ಸರ್, 107 ಕೋಟಿ ರೂ ತಿರಸ್ಕರಿಸಿದ ಕಥೆ
ಫೈಜಲ್ ಖಾನ್ ಅಕಾ ಖಾನ್ ಸರ್

Updated on: Aug 06, 2025 | 6:44 PM

ಯೂಟ್ಯೂಬ್​ನಲ್ಲಿ ಪಾಠಗಳನ್ನು ಕಲಿಯುವ ಇವತ್ತಿನ ಹೆಚ್ಚಿನ ವಿದ್ಯಾರ್ಥಿಗಳಿಗೆ ಖಾನ್ ಸರ್ (Khan Sir) ಹೆಸರು ಗೊತ್ತೇ ಇದೆ. ಬಹಳ ಅದ್ಭುತವಾಗಿ ಪಾಠ ಮಾಡುವ ಕೌಶಲ್ಯ ಇವರದ್ದು. ಬಹಳ ಕಠಿಣ ವಿಷಯಗಳನ್ನು ಮಕ್ಕಳಿಗೆ ಅರ್ಥ ಆಗುವ ರೀತಿಯಲ್ಲಿ ವಿವರಿಸುತ್ತಾರೆ. ಇವರ ಹೆಸರು ಫೈಜಲ್ ಖಾನ್ ಎಂದಿದ್ದರೂ ಖಾನ್ ಸರ್ ಎಂದೇ ಖ್ಯಾತರಾಗಿದ್ದಾರೆ. ಇವರ ಯೂಟ್ಯೂಬ್ ವಾಹಿನಿಗಳಿಗೆ ಎರಡೂವರೆ ಕೋಟಿ ಸಬ್​​ಸ್ಕ್ರೈಬರ್ಸ್ ಇದ್ದಾರೆ, 20 ಕೋಟಿಗೂ ಅಧಿಕ ವೀಕ್ಷಣೆ ಇದೆ.

ಖಾನ್ ಸರ್ ಉತ್ತರಪ್ರದೇಶ ಸಂಜಾತರಾದರೂ ಬಿಹಾರ ಈಗ ಇವರ ಕಾರ್ಯಸ್ಥಾನ. ಇಲ್ಲಿಂದಲೇ ಅವರು ಆನ್​ಲೈನ್​ನಲ್ಲಿ ಪಾಠಗಳನ್ನು ಮಾಡುತ್ತಾರೆ. ಇವರ ಪಾಠದ ವಿಡಿಯೋಗಳು ಯೂಟ್ಯೂಬ್​ನಲ್ಲಿ ಇದ್ದು, ದೇಶದ ಎಲ್ಲಾ ಮಕ್ಕಳಿಗೂ ಲಭ್ಯ ಇದೆ. ಖಾನ್ ಸರ್ ಅವರು ಶಿಕ್ಷಣಕ್ಕೆ ಸೀಮಿತರಾಗದೆ, ಇವತ್ತು ಬಿಹಾರದ ಪ್ರತಿಯೊಂದು ಜಿಲ್ಲೆಯಲ್ಲೂ ಡಯಾಲಿಸಿಸ್ ಸೆಂಟರ್ ಮತ್ತು ಬ್ಲಡ್ ಬ್ಯಾಂಕ್​ಗಳನ್ನು ತೆರೆಯಲು ಹೊರಟಿದ್ದಾರೆ.

ಬಹಳ ಬಡತನದಲ್ಲಿ ಬೆಳೆದವರು ಫೈಜಲ್ ಖಾನ್

ಉತ್ತಪ್ರದೇಶದ ಫೈಜಲ್ ಖಾನ್ ಅವರು ಉತ್ತಮ ಹಣಕಾಸು ಸ್ಥಿತಿ ಹೊಂದಿಲ್ಲದ ಕುಟುಂಬದಲ್ಲಿ ಜನಿಸಿದವರು. ಭಾರತೀಯ ಸೇನೆ ಸೇರಬೇಕೆಂಬ ಅದಮ್ಯ ಆಸೆ ಇಟ್ಟುಕೊಂಡವರು. ಆದರೆ, ಮೂರು ಬಾರಿ ಅವರು ಸೇನೆ ಸೇರಲು ಮಾಡಿದ ಪ್ರಯತ್ನ ವಿಫಲವಾಗಿತ್ತು. ಕೈಯಲ್ಲಿ ಕೆಲಸ ಇಲ್ಲ, ಕಾಸು ಇಲ್ಲದಂತಹ ಸ್ಥಿತಿಯಲ್ಲಿದ್ದರು.

ಇದನ್ನೂ ಓದಿ: ಭಾರತದಲ್ಲಿ ನಿವೃತ್ತಿ ಬದುಕು ನಡೆಸಲು ಎಷ್ಟು ಹಣ ಇರಬೇಕು ಗೊತ್ತಾ? ಎಚ್​ಎಸ್​ಬಿಸಿ ವರದಿಯಲ್ಲಿದೆ ಅಚ್ಚರಿ ಅಂಶ

ಫೈಜಲ್​ಗೆ ಸಿದ್ಧಿಸಿದ ಪಾಠ

ಒಬ್ಬ ವಿದ್ಯಾರ್ಥಿಗೆ ಫೈಜಲ್ ಪಾಠ ಹೇಳಿಕೊಡಲು ಆರಂಭಿಸಿದರು. ಆ ಹುಡುಗ ತನ್ನ ಕ್ಲಾಸ್​ಗೇ ಮೊದಲು ಬರುತ್ತಾನೆ. ಬಾಯಿಯಿಂದ ಬಾಯಿಗೆ ಹರಡುತ್ತಾರೆ, ಹೆಚ್ಚೆಚ್ಚು ವಿದ್ಯಾರ್ಥಿಗಳು ಇವರ ಪಾಠಕ್ಕೆ ಸೇರಿಕೊಳ್ಳಲು ಆರಂಭಿಸುತ್ತಾರೆ. ಆದರೆ, ಬಹಳ ಕಡಿಮೆ ಫೀಸು ಪಡೆಯುತ್ತಿದ್ದರು ಖಾನ್ ಸರ್.

ಬಸ್ ಚಾರ್ಜ್​ಗೆ ಹಣ ಇಲ್ಲದೇ ನಡೆದು ಹೋಗಿದ್ದ ಖಾನ್ ಸರ್

ಆರಂಭದಲ್ಲಿ ಟ್ಯೂಷನ್​ನಿಂದ ಬರುತ್ತಿದ್ದ ಆದಾಯ ಖಾನ್ ಸರ್​ಗೆ ಅಷ್ಟಕ್ಕಷ್ಟೇ ಆಗಿತ್ತು. ದೈನಂದಿನ ಖರ್ಚುವೆಚ್ಚ ನಿಭಾಯಿಸಲು ಸಾಕಾಗುತ್ತಿತ್ತು. ಒಂದು ದಿನ ಊರಿಗೆ ಹೋಗುವುದಿತ್ತು. ಆವತ್ತು ಜೇಬೆಲ್ಲಾ ತಡಕಾಡಿದಾಗ ಇದ್ದದ್ದು 40 ರೂ ಮಾತ್ರ. ಊರಿಗೆ ಹೋಗಲು 90 ರೂ ಬೇಕಿತ್ತು. ಯಾರ ಬಳಿಯಾದರೂ ಹಣ ಕೇಳೋಣವೆಂದರೆ ಬಿಗುಮಾನ. ಕೊನೆಗೆ ಫೈಜಲ್ ಖಾನ್ ಅವರು ತಮ್ಮ ಊರಿಗೆ ನಡೆದೇ ಹೋಗುತ್ತಾರೆ. ಸುಸ್ತಾದರೂ, ಹಸಿವಾದರೂ ಸ್ವಾಭಿಮಾನ ಮಾತ್ರ ಬಿಡೋದಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತಿಯೊಬ್ಬರೂ ಕನ್ನಡದಲ್ಲೇ ಕಲಿಯಬೇಕು: ಆನ್​ಲೈನ್​ನಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ ಉದ್ಯಮಿ ಶ್ರೀಧರ್ ವೆಂಬು ಪೋಸ್ಟ್

ಗಂಗಾ ನದಿ ತಟದಲ್ಲಿ ಒಂದು ನಿರ್ಧಾರ…

ಊರಿಗೆ ಹೋಗುವ ದಾರಿಯಲ್ಲಿ ಗಂಗಾ ನದಿಯ ತಟದಲ್ಲಿ ರಾತ್ರಿ ಕೂತು ಆಲೋಚಿಸುತ್ತಾರೆ. ಅವರಿಗೆ ತಮ್ಮದೇ ಕೋಚಿಂಗ್ ಸೆಂಟರ್ ತೆರೆಯಬಹುದಲ್ಲ ಎನ್ನುವ ಅನಿಸಿಕೆ ಬರುತ್ತದೆ. ತಮ್ ಸ್ನೇಹಿತರ ಸಹಾಯದಿಂದ ಚಿಕ್ಕದಾಗಿ ಕೋಚಿಂಗ್ ಕ್ಲಾಸ್ ಶುರುವಿಟ್ಟುಕೊಳ್ಳುತ್ತಾರೆ.

ಬಾಂಬ್ ದಾಳಿ ಮತ್ತು ವಿದ್ಯಾರ್ಥಿಗಳ ನೆರವು

ಫೈಜಲ್ ಖಾನ್ ಅಕಾ ಖಾನ್ ಸರ್ ಕೋಚಿಂಗ್ ಕ್ಲಾಸ್ ಶುರು ಮಾಡಿದಾಗ ಅವರ ದುರದೃಷ್ಟಕ್ಕೆ ದುರುಳರ ದೃಷ್ಟಿ ಬೀಳುತ್ತದೆ. ಅವರ ಕೋಚಿಂಗ್ ಸೆಂಟರ್ ಮೇಲೆ ಯಾರೋ ಬಾಂಬ್ ಹಾಕುತ್ತಾರೆ. ಫೈಜಲ್ ಖಾನ್ ವಿಚಲಿತಗೊಳ್ಳೋದಿಲ್ಲ. ತಮ್ಮ ಗುರಿ ಏನೆಂದು ಅವರಿಗೆ ಸ್ಪಷ್ಟವಾಗಿರುತ್ತದೆ.

ಆದರೆ, ಅಚ್ಚರಿಯ ಸಂಗತಿ ಎಂದರೆ, ತಮ್ಮ ಪ್ರಿಯ ಖಾನ್ ಸರ್ ನೆರವಿಗೆ ಮಕ್ಕಳೇ ಎಡತಾಕುತ್ತಾರೆ. ಸಿನಿಮಾಗಳಲ್ಲಿ ತೋರಿಸಿದಂತಹ ದೃಶ್ಯಗಳು ಖಾನ್ ಸರ್ ಜೀವನದಲ್ಲಿ ಘಟಿಸತೊಡಗುತ್ತವೆ. ಮಕ್ಕಳು ಬಂದು ಕೋಚಿಂಗ್ ಸೆಂಟರ್ ಅನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತಾರೆ. ಈ ಘಟನೆಯು ಫೈಜಲ್ ಖಾನ್ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದನ್ನೂ ಓದಿ: ರಟ್ಟಿನ ಬಾಕ್ಸ್ ತಯಾರಿಸುತ್ತಿದ್ದ ಹಸನ್ ಮೊಹಮ್ಮದ್ ಸರ್ದಾರ್ ಇಂದು ಯಶಸ್ವಿ ಉದ್ಯಮಿ, ಇವರು ಬೆಳೆದು ಬಂದ ಹಾದಿ ಹೇಗಿತ್ತು?

107 ಕೋಟಿ ರೂ ಆಫರ್ ಕೊಟ್ಟ ಕಂಪನಿ

ಖಾನ್ ಸರ್ ಅವರು ಪಾಠ ಮಾಡುವ ಶೈಲಿ ದೇಶಾದ್ಯಂತ ಗಮನ ಸೆಳೆಯತೊಡಗುತ್ತದೆ. ತಮ್ಮೊಂದಿಗೆ ಕೆಲಸ ಮಾಡುವಂತೆ ಫೈಜಲ್ ಖಾನ್​ಗೆ ಒಂದು ಕಂಪನಿಯು 107 ಕೋಟಿ ರೂ ಆಫರ್ ಮಾಡುತ್ತದೆ. ಆದರೆ, ಸರ್ ಅದನ್ನು ತಿರಸ್ಕರಿಸುತ್ತಾರೆ.

ಖಾನ್ ಸರ್ ಹಣಕ್ಕಾಗಿ ಟ್ಯೂಷನ್ ಮಾಡುತ್ತಿರಲಿಲ್ಲ. ಫೀಸ್ ಕಟ್ಟಲಾಗದ ಅದೆಷ್ಟೋ ಅಸಹಾಯಕ ಮಕ್ಕಳ ಬದುಕನ್ನು ಮಾರ್ಪಡಿಸುವ ಒಂದು ಪ್ರಯತ್ನದಲ್ಲಿದ್ದ ಅವರಿಗೆ, ವಿದ್ಯಾರ್ಥಿಗಳಿಗೆ ತನ್ನ ಅಗತ್ಯ ಇದೆ ಎನ್ನುವುದು ಗೊತ್ತಿತ್ತು. ಇದೇ ಕಾರಣಕ್ಕೆ ನೂರು ಕೋಟಿ ರೂ ಆಫರ್ ಅನ್ನು ನಿರಾಕರಿಸಿ ತಮ್ಮ ಕೈಂಕರ್ಯ ಮುಂದುವರಿಸಿದ್ದರು ಫೈಜಲ್ ಖಾನ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ