ದೆಹಲಿ ರಕ್ಷಣೆಗೆ ‘ಸುದರ್ಶನ ಚಕ್ರ’; ಐಎಡಿಎಫ್​ಎಸ್ ಖರೀದಿಗೆ ಸರ್ಕಾರ ಅನುಮೋದನೆ

Govt buying Rs 5,181 crore worth Integrated Air Defence Weapon System: ದೆಹಲಿ ಎನ್​ಸಿಆರ್ ಪ್ರದೇಶವನ್ನು ವಾಯು ದಾಳಿಗಳಿಂದ ರಕ್ಷಿಸಲು ಸರ್ಕಾರ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಂ ಖರೀದಿಸಲಿದೆ. 2035ರ ಮಿಷನ್ ಸುದರ್ಶನ ಚಕ್ರದ ಗುರಿ ಮುಟ್ಟುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಡಿಆರ್​ಡಿಒ ಅಭಿವೃದ್ದಿಪಡಿಸಿರುವ ಐಎಡಿಎಫ್​ಡಬ್ಲ್ಯುಎಸ್ ಅನ್ನು 5,181 ಕೋಟಿ ರೂಗೆ ಸರ್ಕಾರ ಖರೀದಿಸುತ್ತಿದೆ.

ದೆಹಲಿ ರಕ್ಷಣೆಗೆ ‘ಸುದರ್ಶನ ಚಕ್ರ’; ಐಎಡಿಎಫ್​ಎಸ್ ಖರೀದಿಗೆ ಸರ್ಕಾರ ಅನುಮೋದನೆ
ಸಾಂದರ್ಭಿಕ ಚಿತ್ರ

Updated on: Dec 30, 2025 | 3:14 PM

ನವದೆಹಲಿ, ಡಿಸೆಂಬರ್ 30: ಮಿಲಿಟರಿ ನೆಲೆಗಳು, ಸಂಸತ್ ಭವನ, ರಾಷ್ಟ್ರಪತಿ ಭವನ ಇತ್ಯಾದಿ ಬಹಳ ಸೂಕ್ಷ್ಮವೆಂದು ಪರಿಗಣಿಸಲಾದ ಹಾಗೂ ಮೇಲ್ಭಾಗದಲ್ಲಿ ಹಾರಾಟ ನಿಷೇಧ ಮಾಡದ ಸ್ಥಳಗಳ ರಕ್ಷಣೆಗಾಗಿ ಭಾರತ ಸರ್ಕಾರ ‘ಸುದರ್ಶನ ಚಕ್ರ’ವನ್ನು ಅಳವಡಿಸುತ್ತಿದೆ. ಡಿಆರ್​ಡಿಒ ಅಭಿವೃದ್ಧಿಪಡಿಸಿರುವ ಏಕೀಕೃತ ವಾಯು ರಕ್ಷಣಾ ಶಸ್ತ್ರ ವ್ಯವಸ್ಥೆಯನ್ನು (ಐಎಡಿಡಬ್ಲ್ಯುಎಸ್) 5,181 ಕೋಟಿ ರೂ ಖರೀದಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಈ ಮಲ್ಟಿ ಲೇಯರ್ ವೆಪನ್ ಸಿಸ್ಟಂ ಅನ್ನು ದೆಹಲಿ ಎನ್​ಸಿಆರ್ ಪ್ರದೇಶದಲ್ಲಿರುವ ವಿಐಪಿ-89 ವಲಯದ ಭದ್ರತೆಗೆ ನಿಯೋಜಿಸಲಾಗುತ್ತದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಏಕೀಕೃತ ವಾಯು ರಕ್ಷಣಾ ಶಸ್ತ್ರ ವ್ಯವಸ್ಥೆಯನ್ನು ಡಿಆರ್​ಡಿಒ ಅಭಿವೃದ್ಧಿಪಡಿಸಿದೆ. ಏರ್ ಫೋರ್ಸ್ ಕೇಂದ್ರಿತ ಸಿಸ್ಟಂ ಇದಾಗಿದ್ದು, ಒಂದು ಸ್ಥಳಕ್ಕೆ ಬಹು ಎಳೆಗಳಲ್ಲಿ ರಕ್ಷಣೆ ಕೊಡಬಲ್ಲುದು. ದೆಹಲಿಯ ವಿಐಪಿ-89 ಝೋನ್ ರಕ್ಷಣೆಗೆಂದು ಸದ್ಯ ಒಂದು ಸಿಸ್​ಟಂ ಅನ್ನು ತರಿಸಲಾಗುತ್ತಿದೆ. ಇದು ದೆಹಲಿಯ ಸುತ್ತಮುತ್ತಲ 30 ಕಿಮೀ ಶ್ರೇಣಿವರೆಗಿನ ಪ್ರದೇಶಕ್ಕೆ ರಕ್ಷಣೆ ಕೊಡುತ್ತದೆ. ಆಕಾಶದಿಂದ ಡ್ರೋನ್ ಆಗಲೀ, ಮಿಸೈಲ್ ಆಗಲಿ ಯಾವುದೇ ದಾಳಿಯಾದರೂ ಇದು ತಡೆಯಬಲ್ಲುದು. ಒಂದು ರೀತಿಯಲ್ಲಿ ಸುದರ್ಶನ ಚಕ್ರದ ರೀತಿಯಲ್ಲಿ ರಕ್ಷಣೆ ಕೊಡುತ್ತದೆ.

ಇದನ್ನೂ ಓದಿ: ಬದಲಾಗುತ್ತಿದೆ ಭಾರತ; 2025ರಲ್ಲಿ ಮಹಾಪರಿವರ್ತನೆ; ಜಿಎಸ್​ಟಿಯಿಂದ ಹಿಡಿದು ಜಿ ರಾಮ್ ಜಿವರೆಗೆ ಹಲವು ಆರ್ಥಿಕ ಸುಧಾರಣೆಗಳು

ಈ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ (2025ರ ಆಗಸ್ಟ್ 15) ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್ ಸುದರ್ಶನ ಚಕ್ರ ಘೋಷಿಸಿದ್ದರು. 2035ರ ವೇಳೆಗೆ ದೇಶದ ಪ್ರಮುಖ ಸ್ಥಳಗಳು ಮತ್ತು ನಗರಗಳಿಗೆ ಸಮಗ್ರ ಭದ್ರತಾ ವ್ಯವಸ್ಥೆ ನಿರ್ಮಿಸುವುದು ಈ ಮಿಷನ್​ನ ಗುರಿ. ಇದರ ಭಾಗವಾಗಿ ಈಗ ಒಂದು ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಂ ಅನ್ನು ಖರೀದಿಸಿ ದೆಹಲಿಯ ರಕ್ಷಣೆಗೆ ನಿಯೋಜಿಸಲಾಗುತ್ತಿದೆ.

ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನ ಭಾರತದ ಮಿಲಿಟರಿ ನೆಲೆಗಳು ಮತ್ತು ಮಂದಿರ ಸ್ಥಳಗಳನ್ನು ಗುರಿ ಮಾಡಿ ಕ್ಷಿಪಣಿ, ಡ್ರೋನ್​ಗಳಿಂದ ದಾಳಿ ಮಾಡಿತ್ತು. ಆಗ ಈ ಸ್ಥಳಗಳ ರಕ್ಷಣೆಗೆ ನೆರವಾಗಿದ್ದೇ ಭಾರತದ ಏರ್ ಡಿಫೆನ್ಸ್ ಸಿಸ್ಟಂಗಳು.

ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ

ಪಾಕಿಸ್ತಾನದಿಂದ ಹಾರಿಬಂದ ಹೆಚ್ಚಿನ ಡ್ರೋನ್ ಮತ್ತು ಕ್ಷಿಪಣಿಗಳನ್ನು ಈ ಡಿಫೆನ್ಸ್ ಸಿಸ್ಟಂಗಳ ಯಶಸ್ವಿಯಾಗಿ ಹೊಡೆದುರುಳಿಸಿದ್ದವು. ಈಗ ಭಾರತ ಸಂಪೂರ್ಣ ಸ್ವಂತವಾಗಿ ಬಹು ಎಳೆಗಳ ಡಿಫೆನ್ಸ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us