ನವದೆಹಲಿ, ಮಾರ್ಚ್ 7: ಅಂತರದೇಶೀಯ ವ್ಯಾಪಾರ ವಹಿವಾಟಿನಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆಗೆ ಉತ್ತೇಜಿಸಲು ಭಾರತ ಮತ್ತು ಇಂಡೋನೇಷ್ಯಾದ ಸೆಂಟ್ರಲ್ ಬ್ಯಾಂಕುಗಳ ಮಧ್ಯೆ ಒಪ್ಪಂದವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಬ್ಯಾಂಕ್ ಇಂಡೋನೇಷ್ಯಾದ ಗವರ್ನರ್ ಪೆರಿ ವಾರ್ಜಿಯೋ (Perry Warjio) ಅವರು ಎಂಒಯುಗೆ ಸಹಿ ಹಾಕಿದ್ದಾರೆ. ಅಂದರೆ ಭಾರತದಲ್ಲಿರುವ ಸಂಸ್ಥೆಗಳು ಮತ್ತು ಇಂಡೋನೇಷ್ಯಾದಲ್ಲಿರುವ ಸಂಸ್ಥೆಗಳ ಮಧ್ಯೆ ವ್ಯಾಪಾರ ವಹಿವಾಟು ನಡೆದಾಗ ಭಾರತೀಯ ರುಪಾಯಿ (ಐಎನ್ಆರ್) ಮತ್ತು ಇಂಡೋನೇಷ್ಯಾದ ರುಪಯ್ಯಾ (ಐಡಿಆರ್- Rupiah) ಕರೆನ್ಸಿಯನ್ನು ಬಳಕೆ ಮಾಡಲು ಉತ್ತೇಜಿಸಲು ಈ ಒಪ್ಪಂದ ಆಗಿದೆ.
ಎರಡೂ ದೇಶಗಳ ರಫ್ತುದಾರರು ತಮ್ಮ ಸ್ಥಳೀಯ ಕರೆನ್ಸಿಯಲ್ಲೇ ಇನ್ವಾಯ್ಸ್ ಕೊಡಬಹುದು. ಮತ್ತು ಆಮದುದಾರರು ಕೂಡ ತಮ್ಮ ಸ್ಥಳೀಯ ಕರೆನ್ಸಿಯಲ್ಲೇ ಹಣ ಪಾವತಿ ಮಾಡಬಹುದು. ಉದಾಹರಣೆಗೆ, ಇಂಡೋನೇಷ್ಯಾದ ಸಂಸ್ಥೆ ಭಾರತಕ್ಕೆ ಸರಕು ರಫ್ತು ಮಾಡಲು ತಮ್ಮ ಕರೆನ್ಸಿಯಲ್ಲಿ ಇನ್ವಾಯ್ಸ್ ಕಳುಹಿಸುತ್ತದೆ. ಭಾರತದಲ್ಲಿರುವ ಸಂಸ್ಥೆ ರುಪಾಯಿ ಕರೆನ್ಸಿಯಲ್ಲಿ ಹಣ ಪಾವತಿ ಮಾಡಬಹುದು. ಈ ರೀತಿ ಆದಾಗ ಎರಡೂ ದೇಶಗಳ ಕರೆನ್ಸಿ ಬಲಗೊಳ್ಳುತ್ತವೆ. ಡಾಲರ್ ಮೂಲಕ ಹೋಗುವುದರ ಬದಲು ನೇರವಾಗಿ ವಹಿವಾಟು ನಡೆಸುವುದರಿಂದ ಬೆಲೆ ಕೂಡ ಕಡಿಮೆ ಆಗುತ್ತದೆ.
ಇದನ್ನೂ ಓದಿ: ಇ200 ಪ್ಲೇನ್; ಈ ವರ್ಷದೊಳಗೆ ಭಾರತದಲ್ಲಿ ನೋಡುತ್ತೀರಿ ಫ್ಲೈಯಿಂಗ್ ಟ್ಯಾಕ್ಸಿ; ರೈಡಿಂಗ್ ಕೂಡ ದುಬಾರಿ ಇಲ್ಲ
ಭಾರತ ಬೇರೆ ಬೇರೆ ದೇಶಗಳ ಜೊತೆ ಈ ರೀತಿಯ ದ್ವಿಪಕ್ಷೀಯ ಸಹಕಾರ ಒಪ್ಪಂದಗಳನ್ನು ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದೆ. 2023 ಜುಲೈ ತಿಂಗಳಲ್ಲಿ ಯುಎಐ ಮತ್ತು ಭಾರತದ ಸೆಂಟ್ರಲ್ ಬ್ಯಾಂಕುಗಳ ಮಧ್ಯೆ ಎರಡು ಎಂಒಯುಗಳಾಗಿದ್ದವು.
ವಿದೇಶಗಳಲ್ಲಿರುವ ಭಾರತೀಯರು ತಮ್ಮ ತವರಿನ ಜನರಿಗೆ ಹಣ ಕಳುಹಿಸಲು, ಅಥವಾ ಇಲ್ಲಿಂದ ವಿದೇಶಗಳಿಗೆ ಜನರು ಹಣ ಕಳುಹಿಸಲು ಅನುವಾಗುವ ನಿಟ್ಟಿನಲ್ಲಿ ಯುಪಿಐ ಅನ್ನು ವಿವಿಧ ದೇಶಗಳಿಗೆ ವಿಸ್ತರಿಸುವ ಪ್ರಯತ್ನವಾಗುತ್ತಿದೆ. ಸಿಂಗಾಪುರ, ಶ್ರೀಲಂಕಾ, ಯುಎಇ ಮೊದಲಾದ ದೇಶಗಳ ಹಣ ಪಾವತಿ ವ್ಯವಸ್ಥೆ ಜೊತೆ ಯುಪಿಐ ಅನ್ನು ಜೋಡಿಸಲಾಗಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಹಣ ವರ್ಗಾವಣೆ ಸಾಧ್ಯವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ