ತಪ್ಪು ಮಾಡೋದು ತಪ್ಪಲ್ಲ, ತಿದ್ದಿಕೊಳ್ಳಕೊಳ್ಳದೇ ಇರುವುದು ತಪ್ಪು: ಯುವಕರಿಗೆ ಓಯೋ ಸಿಇಒ ಕಿವಿಮಾತು

OYO Rooms CEO Ritesh Agarwal: ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋನು ಮನುಜಾ ಕಣೋ ಎನ್ನುವಂತೆ ಯುವ ಉದ್ಯಮಿಗಳು ತಪ್ಪು ಮಾಡುವುದು ತಪ್ಪಲ್ಲ. ಆದರೆ, ಮಾಡಿದ ತಪ್ಪನ್ನೇ ಪದೇ ಪದೇ ಮಾಡುವುದು ತಪ್ಪು. ಓಯೋ ರೂಮ್ಸ್ ಸಂಸ್ಥೆಯ ಸಿಇಒ ರಿತೇಶ್ ಅಗರ್ವಾಲ್ ಈ ಮಾತನ್ನು ಹೇಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಅವರು ಇಬ್ಬರು ಯುವ ಉದ್ಯಮಿಗಳಿಗೆ ಉತ್ತೇಜನ ಕೊಡುವುದಾಗಿ ಹೇಳಿಕೊಂಡಿದ್ದಾರೆ.

ತಪ್ಪು ಮಾಡೋದು ತಪ್ಪಲ್ಲ, ತಿದ್ದಿಕೊಳ್ಳಕೊಳ್ಳದೇ ಇರುವುದು ತಪ್ಪು: ಯುವಕರಿಗೆ ಓಯೋ ಸಿಇಒ ಕಿವಿಮಾತು
ರಿತೇಶ್ ಅಗರ್ವಾಲ್

Updated on: Mar 20, 2024 | 2:11 PM

ಬೆಂಗಳೂರು, ಮಾರ್ಚ್ 20: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಗಾದೆ ಮಾತು ಕೇಳಿರಬಹುದು. ಸಮಾಜದಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡ ವ್ಯಕ್ತಿಗಳು, ಆ ಋಣ ತೀರಿಸಲು ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವುದು ಈ ಗಾದೆ ಮಾತಿನ ಅರ್ಥ. ಅಂತೆಯೇ ಬಹಳಷ್ಟು ಉದ್ಯಮಿಗಳು ತಮ್ಮ ಸಂಪಾದನೆಯಲ್ಲಿ ಒಂದಷ್ಟು ಹಣವನ್ನು ದಾನ ಧರ್ಮಕ್ಕೆ (philanthropy) ಉಪಯೋಗಿಸುತ್ತಾರೆ. ಇನ್ನೂ ಕೆಲವರು ಹೊಸಬರನ್ನು ಪ್ರೋತ್ಸಾಹಿಸುತ್ತಾರೆ. ಇವತ್ತಿನ ಹಲವು ಯುವ ಉದ್ದಿಮೆದಾರರು ಹೆಚ್ಚು ಸಮಾಜಮುಖಿಯಾಗುತ್ತಿದ್ದಾರೆ. ಇಂಥವರಲ್ಲಿ ಓಯೋ ಸಿಇಒ ರಿತೇಶ್ ಅಗರ್ವಾಲ್ (OYO CEO Ritesh Agarwal) ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಇವರು ಹಾಕಿರುವ ಒಂದು ಪೋಸ್ಟ್ ಸಾಕಷ್ಟು ಗಮನ ಸೆಳೆದಿದೆ. ಯುವಕರು ತಪ್ಪು ಮಾಡುತ್ತೇವೆಂದು ಹಿಂಜರಿಯಬಾರದು. ತಪ್ಪು ತಿದ್ದುಕೊಂಡು ಹೋಗುವುದು ಮುಖ್ಯ ಎಂದು ಸಲಹೆ ನೀಡಿದ್ದಾರೆ.

‘ಪದೇ ಪದೇ ತಪ್ಪುಗಳನ್ನು ಮಾಡಿ. ಆದರೆ, ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಬೇಡಿ. ಯುವ ಉದ್ಯಮಿಗಳಿಗೆ ನಾನು ಈ ಸಲಹೆಯನ್ನೇ ನೀಡುತ್ತೇನೆ,’ ಎಂದು ರಿತೇಶ್ ಅಗರ್ವಾಲ್ ಮೊನ್ನೆಯ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹಣ ಮಾಡುವ ಆಸೆಯಿಂದ ಉದ್ದಿಮೆ ಸ್ಥಾಪಿಸಿದರೆ ಸೋಲುತ್ತೀರಿ: ಜೊಮಾಟೊ ಸಿಇಒ ದೀಪಿಂದರ್ ಗೋಯಲ್

‘ಯುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವುದೆಂದರೆ ನನಗಿಷ್ಟ. ಯಾವ ಸಂಪನ್ಮೂಲ ಇಲ್ಲದೇ ಸ್ಟಾರ್ಟಪ್ ಮಾಡುವ ನನ್ನ ಅನುಭವ ಬಳಸಿ ಅವರು ಬಹಳ ಬೇಗ ಕಲಿಯಬಹುದು. ಸ್ಟಾರ್ಟಪ್ ಸಮುದಾಯಕ್ಕೆ ಮರಳಿ ಕೊಡಲು ಇಷ್ಟಪಡುತ್ತೇನೆ,’ ಎಂದಿದ್ದಾರೆ ಓಯೋ ಸಿಇಒ.

ರಿತೇಶ್ ಮಾಡಿದ ಟ್ವೀಟ್

ತಮ್ಮ ಪೋಸ್ಟ್​ನಲ್ಲಿ ರಿತೇಶ್ ಒಂದು ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ. ಅದರಲ್ಲಿ ಮೂರನೇ ಸೀಸನ್​ನ ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಇಬ್ಬರು ಯುವ ಉದ್ಯಮಿಗಳ ಬಗ್ಗೆ ವಿಡಿಯೋದಲ್ಲಿ ಅವರು ಮಾತನಾಡಿದ್ದಾರೆ. ಆ ಇಬ್ಬರು ಯುವಕರನ್ನು ನೋಡಿದರೆ ಅವರ ವಯಸ್ಸಿನಲ್ಲಿ ತಾನು ಇದ್ದದ್ದು ನೆನಪಿಗೆ ಬರುತ್ತದೆ ಎಂದು ಹೇಳುವ ಸಿಇಒ, ಆ ಇಬ್ಬರೊಂದಿಗೆ ಕೆಲಸ ಮಾಡಲು ತನಗಿರುವ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಇವತ್ತಿನ ಯುವಕರು ಉದ್ಯೋಗಾಕಾಂಕ್ಷಿಯಲ್ಲ, ಉದ್ಯೋಗ ಸೃಷ್ಟಿಕರ್ತರಾಗಲು ಬಯಸುತ್ತಾರೆ: ಸ್ಟಾರ್ಟಪ್ ಮಹಾಕುಂಭದಲ್ಲಿ ಪಿಎಂ ಮೋದಿ ಹೇಳಿಕೆ

ಚಂಡೀಗಡ ಮೂಲದ ಓಯೋ ಸಂಸ್ಥೆ ಆನ್​ಲೈನ್​ನಲ್ಲಿ ಹೋಟೆಲ್ ರೂಮು, ಇತರ ಸ್ಥಳಗಳನ್ನು ಬಾಡಿಗೆಗೆ ಬುಕ್ ಮಾಡಲು ಅವಕಾಶ ಕೊಡುತ್ತದೆ. ಭಾರತದಲ್ಲಿ ಮಾತ್ರವಲ್ಲ, ಇದರ ಬಿಸಿನೆಸ್ 80 ದೇಶಗಳಲ್ಲಿ ಇದೆ. ಕಡಿಮೆ ಬೆಲೆಗೆ ಬಾಡಿಗೆಗೆ ಸಿಗುವುದರಿಂದ ಓಯೋ ಬಿಸಿನೆಸ್ ಯಶಸ್ವಿಯಾಗಿದೆ. 2022-23ರ ಹಣಕಾಸು ವರ್ಷದಲ್ಲಿ 1,287 ಕೋಟಿ ರೂ ನಷ್ಟ ಅನುಭವಿಸಿದರೂ ಐದು ಸಾವಿರ ಕೋಟಿ ರೂಗೂ ಹೆಚ್ಚು ಆದಾಯ ಸೃಷ್ಟಿಸಲು ಯಶಸ್ವಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us