
ನವದೆಹಲಿ, ಸೆಪ್ಟೆಂಬರ್ 1: ಎಸ್ಸೆಲ್ ಗ್ರೂಪ್ (Essel Group) ಸಂಸ್ಥಾಪಕ ಸುಭಾಷ್ ಚಂದ್ರ (Subhash Chandra) ಅವರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್ಗೆ ಎನ್ಸಿಎಲ್ಟಿಯ (NCLT) ಏಕಸದಸ್ಯ ಪೀಠವು ನೀಡಿದ ಅನುಮತಿಗೆ ಐವರು ಸದಸ್ಯರ ವಿಶೇಷ ಪೀಠವೊಂದು ತಡೆ ನೀಡಿದೆ. ಈ ಮರುಪಾವತಿ ಯೋಜನೆ ಸದ್ಯಕ್ಕೆ ಜಾರಿಯಾಗುವುದು ಬೇಡ ಎಂದು ಮಧ್ಯಂತರ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಅನುಪೀಂದರ್ ಸಿಂಗ್ ಗ್ರೆವಾಲ್, ಬಚ್ಚು ವೆಂಕಟ ಬಲರಾಮ್ ದಾಸ್, ಮಹೇಂದ್ರ ಖಂಡೇಲ್ವಾಲ್, ಅತಾನು ಚಂದ್ರ ಚತುರ್ವೇದಿ ಮತ್ತು ರವೀಂದ್ರ ಚತುರ್ವೇದಿ ಅವರಿರುವ ಐವರು ಸದಸ್ಯರ ನ್ಯಾಯಮಂಡಳಿ ಪೀಠವು ಈ ಆದೇಶ ಹೊರಡಿಸಿದೆ. ಸುಭಾಷ್ ಚಂದ್ರ ಅವರು ತಮ್ಮ ಯಾವುದೇ ಆಸ್ತಿಗಳನ್ನು ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಮಾರುವಂತಿಲ್ಲ, ವರ್ಗಾವಣೆ ಮಾಡುವಂತಿಲ್ಲ ಎಂದು ನ್ಯಾಯಮಂಡಳಿಯು ಆದೇಶಿಸಿದೆ.
ಇದನ್ನೂ ಓದಿ: ಝೀ ಸಂಸ್ಥಾಪಕ ಸುಭಾಷ್ಚಂದ್ರರ 6.5 ಕೋಟಿ ರೂ ರೀಪೇಮೆಂಟ್ ಪ್ಲಾನ್ಗೆ ಎನ್ಸಿಎಲ್ಟಿ ಸಮ್ಮತಿ; ಏನಿದು ಪ್ರಕರಣ?
ಎಲ್ಐಸಿ ಹೌಸಿಂಗ್ ಫೈನಾನ್ಸ್ ಸೇರಿದಂತೆ ವಿವಿಧ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು (Creditors) ಸುಭಾಷ್ ಚಂದ್ರ ಅವರಿಂದ ಒಟ್ಟು ₹22,006 ಕೋಟಿಗೂ ಹೆಚ್ಚು ಮೊತ್ತದ ಸಾಲದ ಮರುಪಾವತಿಯಾಗಬೇಕು ಎಂದು ಹೇಳುತ್ತಿವೆ. ಅಷ್ಟು ಹಣ ಮರುಪಾವತಿಸುವಂತೆ ಮಾಡಿ ಎಂದು ಕೋರಿ ಎನ್ಸಿಎಲ್ಟಿಯಲ್ಲಿ ಮನವಿ ಮಾಡಿದ್ದವು ಈ ಹಣಕಾಸು ಸಂಸ್ಥೆಗಳು.
ಎಸ್ಸೆಲ್ ಗ್ರೂಪ್ನ ವಿವಿಧ ಕಂಪನಿಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳಿಗೆ ಸುಭಾಷ್ ಚಂದ್ರ ಅವರು ವೈಯಕ್ತಿಕವಾಗಿ ಶೂರಿಟಿ ಅಥವಾ ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಇದರ ಮೊತ್ತವು ₹22,006 ಕೋಟಿ ಎಂದು ಕ್ಲೇಮ್ ಮಾಡಲಾಗುತ್ತಿದೆ. ಆದರೆ, ತಾವು ಇತ್ತ ಗ್ಯಾರಂಟಿಗಳಲ್ಲಿ ಹೆಚ್ಚಿನ ಸಾಲವನ್ನು ಮರುಪಾವತಿಸಲಾಗಿದೆ. ತಾವು ಮರುಪಾವತಿಸಬೇಕಿರುವ ಬಾಕಿ ಸಾಲ ಇಷ್ಟಿಲ್ಲ ಎಂಬುದು ಸುಭಾಷ್ ಚಂದ್ರ ಅವರ ವಾದವಾಗಿದೆ.
ಎನ್ಸಿಎಲ್ಟಿಯಲ್ಲಿ ಸುಭಾಷ್ ಚಂದ್ರ ವಿರುದ್ಧ ವೈಯಕ್ತಿಕ ದಿವಾಳಿತನ ಮತ್ತು ಸಾಲಮರುಪಾವತಿ ಕ್ರಮದ (Personal Insolvency Proceedings) ವಿಚಾರಣೆ 2024ರಲ್ಲಿ ಆರಂಭವಾಯಿತು. ಸುಭಾಷ್ ಚಂದ್ರ ಅವರು 6.25 ಕೋಟಿ ರೂ ಮರುಪಾವತಿ ಮಾಡುವುದಾಗಿ ಹೇಳಿದ್ದರು. ಎರಡು ಸದಸ್ಯರ ನ್ಯಾಯಮಂಡಳಿ ಪೀಠವು ಈ ಪ್ಲಾನ್ಗೆ ಬಹುಮತದ ತೀರ್ಪು ನೀಡಲು ವಿಫಲವಾಯಿತು. 2026ರ ಆಗಸ್ಟ್ 25ರಂದು ಮೂರನೇ ಸದಸ್ಯರು ಸುಭಾಷ್ ಚಂದ್ರ ಅವರ ಪ್ಲಾನ್ಗೆ ಅನುಮೋದನೆ ನೀಡಿದ್ದರು.
ಇದನ್ನೂ ಓದಿ: ಭಾರತದಲ್ಲಿ ಅರಾಕಲ್, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಲೇ ಆಫ್ ಭೀತಿ; 3,000ಕ್ಕೂ ಹೆಚ್ಚು ಮಂದಿಗೆ ಹೋಗುತ್ತಾ ಕೆಲಸ?
ಸಾಲದಾತರಿಂದ ನಡೆದ ಮತದಾನದಲ್ಲಿ ರೀಪೇಮೆಂಟ್ ಪ್ಲಾನ್ ಪರವಾಗಿ ಶೇ. 80ಕ್ಕಿಂತಲೂ ಹೆಚ್ಚಿನ ಮತಗಳು ಬಂದಿವೆ. ಹೀಗಾಗಿ, ಅವರ ಪ್ಲಾನ್ಗೆ ನ್ಯಾಯಮಂಡಳಿ ಅನುಮೋದನೆ ನೀಡಿತು. ಆದರೆ, ಬ್ಯಾಂಕುಗಳು ಹಾಗು ಹಣಕಾಸು ಸಂಸ್ಥೆಗಳು ಈ ಮತದಾನದ ಬಗ್ಗೆ ತಗಾದೆ ಎತ್ತಿವೆ. ಪ್ಲಾನ್ ಪರವಾಗಿ ಮತ ಚಲಾಯಿಸಿದವರಲ್ಲಿ ಹೆಚ್ಚಿನವರು ಸುಭಾಷ್ ಚಂದ್ರ ಅವರಿಗೆ ಸಂಬಂಧಿಸಿದ ಸಂಘ ಸಂಸ್ಥೆಗಳೇ ಆಗಿವೆ ಎನ್ನುವುದು ಇವರ ವಾದ.
ಹಣಕಾಸು ಸಂಸ್ಥೆಗಳು ಈ ತೀರ್ಪನ್ನು ಆಕ್ಷೇಪಿಸಿವೆ. ಸುಭಾಷ್ ಚಂದ್ರ ಅವರ ಹಣಕಾಸು ಆಸ್ತಿಗಳನ್ನು ಸರಿಯಾಗಿ ವಿಚಾರಿಸದೆಯೇ ತೀರ್ಪು ನೀಡಲಾಗಿದೆ ಎಂಬುದು ಇವರ ಇನ್ನೊಂದು ಪ್ರಮುಖ ಆಕ್ಷೇಪ. ಈ ಹಿನ್ನೆಲೆಯಲ್ಲಿ ಎನ್ಸಿಎಲ್ಟಿ ನ್ಯಾಯಮಂಡಳಿಯ ದೊಡ್ಡ ಪೀಠವು ಮತ್ತೊಮ್ಮೆ ಹೊಸದಾಗಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ