ಒರಾಕಲ್​ನಲ್ಲಿ ಕೆಲಸ ಕಳೆದುಕೊಳ್ಳಲಿರುವ 30,000 ಉದ್ಯೋಗಿಗಳು; ಜೂನ್ 18ರೊಳಗೆ ಲೇ ಆಫ್ ಪ್ರಕ್ರಿಯೆ ಪೂರ್ಣ

Oracle's 30,000 Layoffs: ಒರಾಕಲ್ 30,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಕಂಪನಿ ಲಾಭದಲ್ಲಿದ್ದರೂ, AI ಮತ್ತು ಕ್ಲೌಡ್ ತಂತ್ರಜ್ಞಾನದಲ್ಲಿ $50 ಬಿಲಿಯನ್ ಹೂಡಿಕೆಗಾಗಿ ಈ ನಿರ್ಧಾರ ಕೈಗೊಂಡಿದೆ. ಜೂನ್ 15ರೊಳಗೆ ಪೂರ್ಣಗೊಳ್ಳುವ ಈ ಪ್ರಕ್ರಿಯೆಯಿಂದ ಉದ್ಯೋಗಿಗಳು ತೀವ್ರ ಆತಂಕದಲ್ಲಿದ್ದಾರೆ. ಪರಿಹಾರ ಪ್ಯಾಕೇಜ್ ಅಸಮರ್ಪಕವೆಂದು ಟೀಕೆ ವ್ಯಕ್ತವಾಗಿದೆ. ಇದು ಭವಿಷ್ಯದ ತಂತ್ರಜ್ಞಾನದತ್ತ ಒರಾಕಲ್‌ನ ಕಾರ್ಯತಂತ್ರದ ಬದಲಾವಣೆಯಾಗಿದೆ.

ಒರಾಕಲ್​ನಲ್ಲಿ ಕೆಲಸ ಕಳೆದುಕೊಳ್ಳಲಿರುವ 30,000 ಉದ್ಯೋಗಿಗಳು; ಜೂನ್ 18ರೊಳಗೆ ಲೇ ಆಫ್ ಪ್ರಕ್ರಿಯೆ ಪೂರ್ಣ
ಒರಾಕಲ್

Updated on: Jun 04, 2026 | 11:45 AM

ವಾಷಿಂಗ್ಟನ್, ಜೂನ್ 4: ವಿಶ್ವದ ಪ್ರಮುಖ ಸಾಫ್ಟ್​ವೇರ್ ಅಪ್ಲಿಕೇಶನ್ ಕಂಪನಿಯಾದ ಒರಾಕಲ್ (Oracle) ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಜೂನ್ 15 ರೊಳಗೆ ಪೂರ್ಣಗೊಳಿಸಲಿದೆ. ಈ ಕಂಪನಿಯು ತನ್ನ ಜಾಗತಿಕ ಉದ್ಯೋಗಿಗಳ ಪೈಕಿ ಸುಮಾರು 18% ರಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಈ ಪ್ರಕ್ರಿಯೆಯು ಜೂನ್ 1 ರಿಂದ ನಡೆಯುತ್ತಿದ್ದು ಜೂನ್ 15ರೊಳಗೆ ಪೂರ್ಣಗೊಳ್ಳಲಿದೆ.

ಆಶ್ಚರ್ಯದ ಸಂಗತಿಯೆಂದರೆ, ಈ ದೊಡ್ಡಮಟ್ಟದ ಲೇ ಆಫ್ ನಡೆಯುತ್ತಿರುವುದು ಕಂಪನಿ ಸುಸ್ಥಿತಿಯಲ್ಲಿರುವಾಗಲೇ. ಒರಾಕಲ್ ಕಂಪನಿ ಉತ್ತಮ ಆದಾಯವನ್ನು ಗಳಿಸುತ್ತಿದೆ. ಕ್ಲೌಡ್ ಹಾಗೂ ಕೃತಕ ಬುದ್ಧಿಮತ್ತೆ (AI) ವಲಯದಲ್ಲಿ ಭಾರಿ ಬೆಳವಣಿಗೆ ಕಾಣುತ್ತಿದೆ. ಕಂಪನಿಯು ಮೂರನೇ ತ್ರೈಮಾಸಿಕದಲ್ಲಿ 22% ಆದಾಯ ಹೆಚ್ಚಳವನ್ನೂ ಕಂಡಿದೆ. ಆದರೂ ಕೂಡ ಒರಾಕಲ್ ದೊಡ್ಡ ಮಟ್ಟದ ಲೇಆಫ್​ಗೆ ಕೈಹಾಕಿದೆ.

ಇದನ್ನೂ ಓದಿ: ವಿದೇಶಿ ಬಂಡವಾಳ ಸೆಳೆಯಲು ಭರ್ಜರಿ ಪ್ಲಾನ್: ಬಾಂಡ್ ತೆರಿಗೆ ಕಡಿತ ಮತ್ತು ಹೂಡಿಕೆ ನಿಯಮಗಳ ಸಡಿಲಿಕೆಗೆ ಕೇಂದ್ರ ಸರ್ಕಾರ ಮುಂದು

ಒರಾಕಲ್​ನ ಈ ಕತ್ತರಿಗೆ ಏನು ಕಾರಣ?

ಒರಾಕಲ್ ಕಂಪನಿಯು ತನ್ನ ಸಂಪನ್ಮೂಲಗಳನ್ನು ಹೆಚ್ಚು ಬೆಳವಣಿಗೆಯಾಗುತ್ತಿರುವ AI ವ್ಯವಹಾರಗಳ ಕಡೆಗೆ ತಿರುಗಿಸಲು ಬಯಸಿದೆ. ಮುಂದಿನ ದಿನಗಳಲ್ಲಿ ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ಮತ್ತು AI ಡೇಟಾ ಸೆಂಟರ್‌ಗಳನ್ನು ವಿಸ್ತರಿಸಲು ಕಂಪನಿಯು ಸುಮಾರು 50 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ.

ಲೇ ಆಫ್ ನಿರ್ಧಾರದಿಂದ ಉದ್ಯೋಗಿಗಳಿಗೆ ಆತಂಕ

ಒರಾಕಲ್​ನ ಲೇ ಆಫ್ ಕ್ರಮವು ಉದ್ಯೋಗಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಂಪನಿಯು ನೀಡುತ್ತಿರುವ ಪರಿಹಾರ ಪ್ಯಾಕೇಜ್ (Severance Package) ಅಸಮರ್ಪಕವಾಗಿದೆ ಎಂದು ಅನೇಕ ಬಾಧಿತ ಉದ್ಯೋಗಿಗಳು ಟೀಕಿಸಿದ್ದಾರೆ. ವಿಶೇಷವಾಗಿ, ಕಂಪನಿಯು ವಾಗ್ದಾನ ಮಾಡಿದ ಸ್ಟಾಕ್ ಆಯ್ಕೆಗಳನ್ನು (Unvested stock awards) ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ. ಸಂಸ್ಥೆಯು ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ 26 ವಾರಗಳವರೆಗೆ ವೇತನವನ್ನು ಪರಿಹಾರವಾಗಿ ನೀಡಿದೆ. ಅಂದರೆ, ಕಂಪನಿಯ ಹಿರಿಯರಿಗೆ 26 ವಾರದ ವೇತನ ಸಿಗುತ್ತದೆ. ಕಿರಿಯರಿಗೆ ಪ್ಯಾಕೇಜ್ ಕಡಿಮೆ ಇರುತ್ತದೆ.

ಇದನ್ನೂ ಓದಿ: ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಪೈಪೋಟಿ

ಒಟ್ಟಾರೆ, ಭವಿಷ್ಯದ AI ತಂತ್ರಜ್ಞಾನದ ಹೂಡಿಕೆಗೆ ಒತ್ತು ನೀಡಲು, ಪ್ರಸ್ತುತ ಇರುವ ಮಾನವ ಸಂಪನ್ಮೂಲವನ್ನು ಕಂಪನಿಯು ತೀವ್ರವಾಗಿ ಕಡಿತಗೊಳಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us