Paytm: ಇದು ಸ್ಪೀಡ್ ಬ್ರೇಕರ್ ಮಾತ್ರ, ಗಾಡಿ ನಿಲ್ಲಲ್ಲ; ಪೇಟಿಎಂ ಮುಖ್ಯಸ್ಥ ಶರ್ಮಾ ಹೇಳಿದ್ದಿದು

CEO Vijay Shekhar Sharma Speaks: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ ಅನ್ನು ಆರ್​ಬಿಐ ನಿರ್ಬಂಧಿಸಿರುವ ಕ್ರಮದಿಂದ ಪೇಟಿಎಂ ಸೇವೆ ನಿಲ್ಲುವುದಿಲ್ಲ ಎಂದು ಸಿಇಒ ಹೇಳಿದ್ದಾರೆ. ಈ ಬೆಳವಣಿಗೆ ಪೇಟಿಎಂಗೆ ಸ್ಪೀಡ್ ಬಂಪ್ ಇದ್ದ ಹಾಗೆ. ಫೆ. 29 ಬಳಿಕವೂ ಪೇಟಿಎಂ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ ವಿಜಯ್ ಶೇಖರ್ ಶರ್ಮಾ. ಪೇಮೆಂಟ್ಸ್ ಬ್ಯಾಂಕ್ ಬಿಟ್ಟು ಈಗ ಬೇರೆ ಬ್ಯಾಂಕುಗಳೊಂದಿಗೆ ವ್ಯವಹರಿಸಬೇಕೆಂಬ ಸ್ಪಷ್ಟತೆ ಸಿಕ್ಕಿದೆ. ಅದರಂತೆ ಕೆಲಸ ಮಾಡುತ್ತೇವೆ ಎನ್ನುತ್ತಾರೆ.

Paytm: ಇದು ಸ್ಪೀಡ್ ಬ್ರೇಕರ್ ಮಾತ್ರ, ಗಾಡಿ ನಿಲ್ಲಲ್ಲ; ಪೇಟಿಎಂ ಮುಖ್ಯಸ್ಥ ಶರ್ಮಾ ಹೇಳಿದ್ದಿದು
ವಿಜಯ್ ಶೇಖರ್ ಶರ್ಮಾ

Updated on: Feb 02, 2024 | 2:39 PM

ನವದೆಹಲಿ, ಫೆ. 3: ದೇಶದ ಡಿಜಿಟಲ್ ಕ್ರಾಂತಿಯ ಆರಂಭದಿಂದಲೂ ಬಿಡಸಲಾಗದ ಬಂಧದಂತೆ ಮೇಳೈಸಿದ್ದ ಪೇಟಿಎಂ (Paytm) ಈಗ ಸಾಲು ಸಾಲು ಕಷ್ಟಗಳನ್ನು ಎದುರಿಸುತ್ತಿದೆ. ಯುಪಿಐ ಪಾವತಿಗೆ ಪ್ಲಾಟ್​ಫಾರ್ಮ್ ಆಗಿ ಮೊದಲು ಆರಂಭವಾಗಿದ್ದ ಪೇಟಿಎಂ ಸಂಸ್ಥೆ ಸಾಕಷ್ಟು ವಿಸ್ತಾರಗೊಂಡಿದೆ. ಆನ್​ಲೈನ್ ಮಾರುಕಟ್ಟೆ ಸ್ಥಳವಾಗಿ (online marketplace) ಬೆಳೆದಿದೆ. ಪೇಟಿಎಂ ಮನಿ, ಪೇಟಿಎಂ ಬ್ಯಾಂಕು ಇತ್ಯಾದಿ ವಿವಿಧ ವಿಭಾಗಗಳಾಗಿ ಕವಲುಗಳಾಗಿವೆ. ಇದರಲ್ಲಿ ಈಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ಹಾಕಿದೆ. ಪೇಟಿಎಂ ಕಥೆಯೇ ಮುಗಿಯಿತು ಎಂದು ಎಲ್ಲರೂ ಈಗಾಗಲೇ ಸಂತಾಪ ಸೂಚಿಸಲು ಆರಂಭಿಸಿದ್ದಾರೆ. ಆದರೆ, ಆರ್​​ಬಿಐ ನಿರ್ಬಂಧ ಇರುವುದು ಪೇಮೆಂಟ್ಸ್ ಬ್ಯಾಂಕ್​ಗೆ ಮಾತ್ರ. ಪೇಟಿಎಂ ಆ್ಯಪ್ ಬಳಕೆಗೆ ಸಮಸ್ಯೆ ಇರದು ಎಂದು ಹೇಳಲಾಗಿದೆ. ಪೇಟಿಎಂ ಸಂಸ್ಥಾಪಕ ಹಾಗೂ ಸಿಇಒ ವಿಜಯ್ ಶೇಖರ್ ಶರ್ಮಾ (Paytm CEO Vijay Shekhar Sharma) ಈ ಬೆಳವಣಿಗೆಯನ್ನು ಪೇಟಿಎಂಗೆ ಸ್ಪೀಡ್ ಬಂಪ್ ಮಾತ್ರವಾಗಿದ್ದು, ಅದರ ಓಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಫೆಬ್ರುವರಿ 29ರ ನಂತರವೂ ಪೇಟಿಎಂ ಚಾಲೂನಲ್ಲಿ ಇರುತ್ತದೆ ಎಂದು ಹೇಳಿರುವ ವಿಜಯ್ ಶೇಖರ್ ಶರ್ಮಾ, ನಿರಂತವಾಗಿ ಬೆಂಬಲಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ.

‘ನಿಮ್ಮ ಫೇವರಿಟ್ ಆ್ಯಪ್ ಕಾರ್ಯವಹಿಸುತ್ತಿದೆ. ಫೆಬ್ರುವರಿ 29ರ ಬಳಿಕವೂ ಮಾಮೂಲಿಯಂತೆಯೇ ಕೆಲಸ ಮಾಡುತ್ತಿರುತ್ತದೆ. ನಿಮ್ಮ ನಿರಂತರ ಬೆಂಬಲಕ್ಕಾಗಿ ಪೇಟಿಎಂ ತಂಡದ ವತಿಯಿಂದ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ಪ್ರತಿಯೊಂದು ಸವಾಲಿನಲ್ಲೂ ಪರಿಹಾರ ಎಂಬುದು ಇರುತ್ತದೆ. ಪೂರ್ಣ ನಿಯಮಾನುಸಾರ ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ.

ಇದನ್ನೂ ಓದಿ: ಆ 10 ವರ್ಷ, ಈ 10 ವರ್ಷ; ವಿಪಕ್ಷಗಳಿಗೆ ಕೌಂಟರ್ ಕೊಡಲು ಸರ್ಕಾರದಿಂದ ಬರಲಿದೆ ಶ್ವೇತಪತ್ರ

‘ಪೇಟಿಎಂಕರೋ ಚಾಂಪಿಯನ್ ಆಗಿರುವ ಪೇಮೆಂಟ್ ಕ್ರಿಯಾಶೀಲತೆಯಲ್ಲಿ ಮತ್ತು ಹಣಕಾಸು ಸೇವೆಗಳ ಒಳಗೊಳ್ಳುವಿಕೆಯಲ್ಲಿ ಭಾರತಕ್ಕೆ ಜಾಗತಿಕ ಪ್ರಶಂಸೆ ಮುಂದುವರಿಯುತ್ತದೆ’ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.

ಇದು ಸ್ಪೀಡ್ ಬಂಪ್ ಮಾತ್ರ ಎನ್ನುವ ಸಿಇಒ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಸೇವೆಗಳನ್ನು ಫೆಬ್ರುವರಿ 29ರ ಬಳಿಕ ನಿಲ್ಲಿಸಬೇಕೆಂದು ಆರ್​ಬಿಐ ಆದೇಶ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿಇಒ ವಿಜಯ್ ಶೇಖರ್ ಶರ್ಮಾ, ಈ ಬೆಳವಣಿಗೆಯು ಪೇಟಿಎಂ ಓಟಕ್ಕೆ ಸ್ಪೀಡ್ ಬಂಪ್ ಮಾತ್ರವೇ ಆಗಿದೆ ಎಂದಿದ್ದಾರೆ.

ತಮ್ಮ ಬ್ಯಾಂಕ್​ನೊಂದಿಗಿನ (ಪೇಮೆಂಟ್ಸ್ ಬ್ಯಾಂಕ್) ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತೇವೆ. ಇತರ ಬ್ಯಾಂಕುಗಳೊಂದಿಗೆ ಸಹಭಾಗಿತ್ವ ಹೆಚ್ಚಿಸುತ್ತೇವೆ ಎಂದು ಫೆಬ್ರುವರಿ 29ರ ಬಳಿಕವೂ ಪೇಟಿಎಂ ಮಾಮೂಲಿಯಾಗಿ ಮುಂದುವರಿಯುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಪೇಟಿಎಂ ಫಾಸ್​ಟ್ಯಾಗ್, ವ್ಯಾಲಟ್ ಬಳಕೆ ನಿಲ್ಲಿಸಬೇಕಿಲ್ಲ; ಅಷ್ಟಕ್ಕೂ ಆರ್​ಬಿಐ ನಿರ್ಬಂಧ ಹಾಕಿದ್ದು ಯಾಕೆ, ಡೀಟೇಲ್ಸ್ ನೋಡಿ

‘ಈ ದೇಶದ ವಿವಿಧ ಬ್ಯಾಂಕುಗಳು ನಮಗೆ ನೀಡಿರುವ ಬೆಂಬಲಕ್ಕೆ ಕೃತಜ್ಞರಾಗಿದ್ದೇವೆ. ಹೆಚ್ಚೆಚ್ಚು ಪ್ರಾದೇಶಿಕ ಮತ್ತು ದೊಡ್ಡ ಬ್ಯಾಂಕುಗಳು ಉನ್ನತ ಮಟ್ಟದಲ್ಲಿ ನಮ್ಮನ್ನು ಸಂಪರ್ಕಿಸಿ ಸಹಾಯ ಮಾಡಲು ಇಚ್ಛಿಸುತ್ತಿವೆ,’ ಎಂದು ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ತಿಳಿಸಿದ್ದಾರೆ.

‘ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ವಿವಿಧ ಬ್ಯಾಂಕುಗಳೊಂದಿಗೆ ಸಹಭಾಗಿತ್ವದಲ್ಲಿ ತೊಡಗಿತ್ತು. ಅದರಲ್ಲಿ ಪೇಟಿಎಂ ಪೇಮೆಮಟ್ಸ್ ಬ್ಯಾಂಕ್ ಒಂದು ಮುಖ್ಯ ಭಾಗವಾಗಿತ್ತು. ಈಗಿನಿಂದ ಪೇಟಿಎಂ ಬ್ಯಾಂಕ್ ಬಿಟ್ಟು ಬೇರೆ ಬ್ಯಾಂಕುಗಳೊಂದಿಗೆ ಕೆಲಸ ಮಾಡಬೇಕೆಂಬ ಸ್ಪಷ್ಟತೆ ಸಿಕ್ಕಿದೆ. ಒನ್​97 ಕಮ್ಯೂನಿಕೇಶನ್ಸ್ ಮತ್ತು ಪಿಪಿಎಸ್​ಎಲ್ ಎರಡೂ ಕೂಡ ತಮ್ಮ ನೋಡಲ್ ಅಕೌಂಟ್​​ಗಳನ್ನು ಬೇರೆ ಬ್ಯಾಂಕುಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಶುರು ಮಾಡಿವೆ,’ ಎಂದೂ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us