ಪಿಂಚಣಿ ಸಂಬಂಧಿತ ಸಮಸ್ಯೆಗಳಿಗೆ 21 ದಿನದೊಳಗೆ ಪರಿಹಾರ: ವಿವಿಧ ಇಲಾಖೆಗಳಿಗೆ ಚುರುಕು ಮುಟ್ಟಿಸಿದ ಸರ್ಕಾರ

Redressal of pensioners grievances: ಪಿಂಚಣಿ ಬರುವುದು ವಿಳಂಬವಾಗುತ್ತಿದೆ, ಪಿಂಚಣಿ ನಿಂತು ಹೋಗಿದೆ ಹೀಗೆ ವಿವಿಧ ರೀತಿಯ ಪಿಂಚಣಿ ಸಂಬಂಧಿತ ದೂರುಗಳು ಎಲ್ಲಾ ಸರ್ಕಾರಿ ಇಲಾಖೆಗಳು ಸಾಕಷ್ಟು ಸಂಖ್ಯೆಯಲ್ಲಿ ಸಲ್ಲಿಕೆ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಇಂಥ ಪಿಂಚಣಿ ದೂರುಗಳನ್ನು ಆದಷ್ಟೂ ಬೇಗ ವಿಲೇವಾರಿ ಮಾಡಲಾಗುವಂತೆ ಕ್ರಮ ತೆಗೆದುಕೊಂಡಿದೆ. ದೂರುಗಳನ್ನು 21 ದಿನದೊಳಗೆ ಇತ್ಯರ್ಥಪಡಿಸಿ ವರದಿ ಸಲ್ಲಿಸಬೇಕು ಎಂದು ಎಲ್ಲಾ ಇಲಾಖೆಗಳಿಗೂ ಆದೇಶಿಸಿದೆ.

ಪಿಂಚಣಿ ಸಂಬಂಧಿತ ಸಮಸ್ಯೆಗಳಿಗೆ 21 ದಿನದೊಳಗೆ ಪರಿಹಾರ: ವಿವಿಧ ಇಲಾಖೆಗಳಿಗೆ ಚುರುಕು ಮುಟ್ಟಿಸಿದ ಸರ್ಕಾರ
ಪಿಂಚಣಿ

Updated on: Oct 18, 2024 | 2:23 PM

ನವದೆಹಲಿ, ಅಕ್ಟೋಬರ್ 18: ಕೇಂದ್ರ ಸರ್ಕಾರ ತನ್ನ ಎಲ್ಲಾ ಇಲಾಖೆಗಳ ಪಿಂಚಣಿದಾರರ ದೂರುಗಳಿಗೆ ಶೀಘ್ರ ಪರಿಹಾರ ನೀಡುವ ನಿರ್ಧಾರ ಕೈಗೊಂಡಿದೆ. 21 ದಿನದೊಳಗೆ ಪಿಂಚಣಿದಾರರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಎಲ್ಲಾ ಇಲಾಖೆಗಳಿಗೂ ಸರ್ಕಾರ ಸೂಚಿಸಿದೆ. ಒಂದು ವೇಳೆ ಈ ಮೂರು ವಾರದೊಳಗೆ ದೂರುಗಳನ್ನು ಇತ್ಯರ್ಥಪಡಿಸಲು ಆಗುವುದಿಲ್ಲ. ಇನ್ನಷ್ಟು ಕಾಲಾವಕಾಶ ಬೇಕು ಎನಿಸಿದರೆ ತತ್​ಕ್ಷಣಕ್ಕೆ ಮಧ್ಯಂತರ ಸ್ಪಂದನೆಯನ್ನಾದರೂ ಒದಗಿಸಬೇಕು ಎಂದು ಮೊನ್ನೆ ಬುಧವಾರ (ಅ. 16) ನೀಡಲಾದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರೀಕೃತ ಪಿಂಚಣಿ ದೂರು ಪರಿಹಾರ ಮತ್ತು ಮೇಲ್ವಿಚಾರಣೆ ವ್ಯವಸ್ಥೆಯ ಪೋರ್ಟಲ್ ಅನ್ನು ಸರ್ಕಾರ ಪರಾಮರ್ಶಿಸಿದೆ. ಅದಾದ ಬಳಿಕ ವಿವಿಧ ಇಲಾಖೆಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸರಿಯಾಗಿ ಇತ್ಯರ್ಥಪಡಿಸದೇ ಪ್ರಕರಣಗಳನ್ನು ವಜಾಗೊಳಿಸಬಾರದು ಎಂಬುದು ಸಿಬ್ಬಂದಿ ಸಚಿವಾಲಯದಿಂದ ಹೊರಡಿಸಲಾದ ಹೊಸ ಫರ್ಮಾನಾಗಿದೆ.

ಇದನ್ನೂ ಓದಿ: ರತನ್ ಟಾಟಾ ವೈಯಕ್ತಿಕ ಆಸ್ತಿ ಯಾರಿಗೆ? ಅವರ ಕೊನೆಯಾಸೆ ಈಡೇರಿಸುವ ಜವಾಬ್ದಾರಿ ನಾಲ್ವರಿಗೆ ವಹಿಸಿದ್ದ ಟಾಟಾ

ಪಿಂಚಣಿದಾರರ ದೂರು ಅರ್ಜಿ ಸರಿಯಾಗಿ ಇತ್ಯರ್ಥ ಆಗಬೇಕು. ಆ ಅರ್ಜಿ ಸಂಬಂಧ ಏನೇನು ಕ್ರಮ ತೆಗೆದುಕೊಳ್ಳಲಾಯಿತು ಎಂಬ ವರದಿಯನ್ನು ತುಂಬಬೇಕು. ಜೊತೆಗೆ ಸಂಬಂಧಿತ ಮಾಹಿತಿ ಮತ್ತು ದಾಖಲೆಗಳನ್ನೂ ಸಲ್ಲಿಸಬೇಕಾಗುತ್ತದೆ ಎಂದು ಸಿಬ್ಬಂದಿ ಸಚಿವಾಲಯ ಬಹಳ ಸ್ಪಷ್ಟವಾಗಿ ಹೇಳಿದೆ.

‘ಸಚಿವಾಲಯಗಳು ಅಥವಾ ಇಲಾಖೆಗಳು ಪೋರ್ಟಲ್​ನಲ್ಲಿ ಬಾಕಿ ಉಳಿದಿರುವ ಪಿಂಚಣಿ ಸಂಬಂಧಿತ ದೂರುಗಳನ್ನು ಪ್ರತೀ ತಿಂಗಳು ಪರಾಮರ್ಶಿಸಬೇಕು. ಅವರುಗಳು ನಿಗದಿತ ಗಡುವಿನೊಳಗೆ ಇತ್ಯರ್ಥ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು,’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಗಮನಿಸಿ, ಮುಂಗಡ ರೈಲು ಟಿಕೆಟ್ ಬುಕಿಂಗ್ ಅವಧಿ ಈಗ 60 ದಿನ ಮಾತ್ರ; ಮೂರು ತಿಂಗಳ ಮುಂಚೆ ಬುಕಿಂಗ್ ಅಸಾಧ್ಯ

ಒಂದು ವೇಳೆ ದೂರುದಾರರಿಗೆ ತಮ್ಮ ಅರ್ಜಿ ಸರಿಯಾಗಿ ಇತ್ಯರ್ಥ ಆಗದೇ ಸಮಾಪ್ತಿಗೊಳಿಸಲಾಗಿದೆ ಎಂದನಿಸಿದಲ್ಲಿ, ಅದಾಗಿ 30 ದಿನದೊಳಗೆ ಅವರು ಮನವಿ ಸಲ್ಲಿಸಬಹುದು. ಇದರ ಸಂಬಂಧಿತ ಮೇಲ್ಮನವಿ ಪ್ರಾಧಿಕಾರವು (ಅಪೆಲ್ಲೇಟ್ ಅಥಾರಿಟಿ) 30 ದಿನದೊಳಗೆ ಈ ಮನವಿಯನ್ನು ಪರಿಶೀಲಿಸಿ ಇತ್ಯರ್ಥಪಡಿಸಲಿದೆ ಎನ್ನುವ ಅಂಶವೂ ಸಿಬ್ಬಂದಿ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳಲ್ಲಿ ಇದೆ.

ಪಿಂಚಣಿ ವಿಳಂಬವಾಗಿ ಬರುತ್ತಿದೆ ಎಂಬಿತ್ಯಾದಿ ಸಾಕಷ್ಟು ದೂರುಗಳು ಬರುತ್ತಿದ್ದ ಕಾರಣ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us