ಪಿಎಂ ಕಿಸಾನ್; ಬ್ಯಾಂಕ್ ಖಾತೆಗೆ ಹಣ ಬಂದಿಲ್ಲವಾ? ಕಾರಣಗಳೇನು, ಮಾರ್ಗೋಪಾಯಗಳೇನು? ಇಲ್ಲಿದೆ ಡೀಟೇಲ್ಸ್
PM Kisan scheme: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಫೆಬ್ರುವರಿ 24ರಂದು 10 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗೆ 2,000 ರೂ ಹಣ ಬಿಡುಗಡೆ ಮಾಡಲಾಗಿದೆ. ಳೆದ ಬಾರಿ ಬಹಳಷ್ಟು ಜನರು ತಾವು ಯೋಜನೆಗೆ ನೊಂದಾಯಿಸಿದರೂ ಹಣ ಬಂದಿಲ್ಲ ಎಂದು ದೂರಿದ್ದರು. ಯೋಜನೆಗೆ ರಿಜಿಸ್ಟರ್ ಮಾಡಿದ್ದರೂ ಹಣ ಬರದೇ ಇರುವುದಕ್ಕೆ ಕೆಲ ಪ್ರಮುಖ ಕಾರಣಗಳಿವೆ.

ಬೆಂಗಳೂರು, ಫೆಬ್ರುವರಿ 25: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸೋಮವಾರ ಪಿಎಂ ಕಿಸಾನ್ ಯೋಜನೆ ಅಡಿ 19ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. 10 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 22,000 ಕೋಟಿ ರೂ ಹಣವನ್ನು ಡಿಬಿಟಿ ಮೂಲಕ ರವಾನೆ ಮಾಡಲಾಗಿದೆ. 2018-19ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಈವರೆಗೂ ಮೂರೂವರೆ ಲಕ್ಷ ಕೋಟಿ ರೂಗೂ ಅಧಿಕ ಮೊತ್ತದ ಹಣವನ್ನು ರೈತರಿಗೆ ನೇರವಾಗಿ ನೀಡಲಾಗಿದೆ.
ನೀವು ನೊಂದಾವಣಿ ಮಾಡಿಸಿದರೂ ಹಣ ಸಿಕ್ಕಿಲ್ಲವಾ?
ಕೃಷಿ ಜಮೀನು ಇರುವ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗಲು ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ಒದಗಿಸುತ್ತದೆ. ನೀವು ಯೋಜನೆಗೆ ಅರ್ಹರಾಗಿದ್ದು, ನೊಂದಣಿ ಮಾಡಿಸಿದ್ದರೂ ಕೆಲ ಕಾರಣಕ್ಕೆ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲದೇ ಇರಬಹುದು. ಹಣ ಬರದೇ ಇರಲು ಕೆಲ ಕಾರಣಗಳು ಈ ಕೆಳಕಂಡಂತಿವೆ:
- ಇಕೆವೈಸಿ ಮಾಡಿಸಿಲ್ಲದಿರಬಹುದು, ಅಥವಾ ಅಪೂರ್ಣಗೊಂಡಿರಬಹುದು.
- ಯೋಜನೆಯ ಅರ್ಹತಾ ಮಾನದಂಡಗಳು ನಿಮಗೆ ಅನ್ವಯ ಆಗದೇ ಇರಬಹುದು
- ಬ್ಯಾಂಕ್ ಅಕೌಂಟ್ ಸಂಖ್ಯೆ ತಪ್ಪಾಗಿ ನಮೂದಿಸಿರಬಹುದು. ಐಎಫ್ಎಸ್ಸಿ ಕೋಡ್ ತಪ್ಪಾಗಿರಬಹುದು.
- ಅರ್ಜಿಯಲ್ಲಿ ಕಡ್ಡಾಯವಾಗಿ ತುಂಬಿಸಬೇಕಾದ ಕಡೆ ಮಾಹಿತಿ ಇಲ್ಲದೇ ಇರಬಹುದು.
- ಬ್ಯಾಂಕ್ ಹೆಸರು ಅಥವಾ ಅಂಚೆ ಕಚೇರಿ ಹೆಸರು ಸರಿ ಇಲ್ಲದೇ ಇರಬಹುದು.
- ಆಧಾರ್ ಮತ್ತು ಅಕೌಂಟ್ ಎರಡೂ ಅಸಿಂಧು ಇರಬಹುದು.
- ಬ್ಯಾಂಕ್ ಅಕೌಂಟ್ ನಿಷ್ಕ್ರಿಯಗೊಂಡಿರಬಹುದು.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ 22,000 ಕೋಟಿ ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಪಿಎಂ ಕಿಸಾನ್, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ನೋಡಿ…
ಪಿಎಂ ಕಿಸಾನ್ ಯೋಜನೆಗೆ ನೀವು ನೊಂದಾಯಿಸಿದ್ದರೆ, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡುವುದು ಸುಲಭ. ಈ ಮುಂದಿನ ಕ್ರಮಗಳನ್ನು ಅನುಸರಿಸಿ.
- ಮೊದಲಿಗೆ ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ: pmkisan.gov.in/
- ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ. ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ.
- ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮದ ಹೆಸರನ್ನು ಆಯ್ದುಕೊಳ್ಳಿ.
- ಬಳಿಕ ‘ಗೆಟ್ ರಿಪೋರ್ಟ್’ ಅನ್ನು ಕ್ಲಿಕ್ ಮಾಡಿ.
ಇಲ್ಲಿ ಪಿಎಂ ಕಿಸಾನ್ ಯೋಜನೆ ಅಡಿ ಆ ಗ್ರಾಮದಲ್ಲಿ ಇರುವ ಎಲ್ಲಾ ಫಲಾನುಭವಗಳ ಪಟ್ಟಿಯನ್ನು ಕಾಣಬಹುದು. ಅದರಲ್ಲಿ ನಿಮ್ಮ ಹೆಸರಿದೆಯಾ ಎಂದು ಪರಿಶೀಲಿಸಿ.
ಇದನ್ನೂ ಓದಿ: ಅತಿವೇಗದ ಆರ್ಥಿಕತೆ; ಮುಂಬರುವ ವರ್ಷಗಳಲ್ಲೂ ಭಾರತ ಮುಂಚೂಣಿಯಲ್ಲಿ: ಮಧ್ಯಪ್ರದೇಶದಲ್ಲಿ ಪ್ರಧಾನಿ ಹೇಳಿಕೆ
ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು?
ಯೋಜನೆಗೆ ನೊಂದಣಿ ಮಾಡಿಸಿದ್ದು, ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದೂ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲದೇ ಇದ್ದರೆ ಕಾರಣವೇನೆಂದು ತಿಳಿಯಲು ಕೆಲ ಮಾರ್ಗಗಳಿಗೆ. ನಿಮ್ಮ ಊರಿನ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ವಿಚಾರಿಸಬಹುದು.
ಅಥವಾ ಪಿಎಂ ಕಿಸಾನ್ ಸಹಾಯವಾಣಿ 1800-115-526 ಅನ್ನು ಡಯಲ್ ಮಾಡಿ ಮಾತನಾಡಬಹುದು.
ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಹೆಲ್ಪ್ಡೆಸ್ಕ್ ಇರುತ್ತದೆ. ಅಲ್ಲಿ ನೀವು ದೂರು ದಾಖಲಿಸಬಹುದು. pmkisan-ict@gov.in ಅಥವಾ pmkisan-funds@gov.in ಇಮೇಲ್ ಐಡಿಗಳಿಗೆ ನೀವು ಮೇಲ್ ಕಳುಹಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ