ಏರ್ಟೆಲ್ ಪತನ ತಪ್ಪಿಸಿತು ಪಿಎಂ ಜೊತೆಗಿನ ಆ ಒಂದು ಭೇಟಿ..! ಮಿಟ್ಟಲ್​ಗೆ ಮೋದಿ ಹೇಳಿದ ಆ ಮಾತೇನು?

Bharti Airtel chief Sunil Mittal speaks about meeting with PM Modi: 2016ರಲ್ಲಿ ಅಗ್ಗದ ದರದ ಸೇವೆಗಳನ್ನು ಕೊಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಜಿಯೋ ಸಂಚಲನ ಸೃಷ್ಟಿಸಿದ್ದು ನೆನಪಿರಬಹುದು. ಆ ಹೊಡೆತಕ್ಕೆ ಏರ್ಟೆಲ್ ಕೂಡ ಮುರುಟಿ ಬೀಳುವ ಅಪಾಯದಲ್ಲಿತ್ತು. ಆದರೆ 2018ರಲ್ಲಿ ಏರ್ಟೆಲ್ ಮುಖ್ಯಸ್ಥ ಸುನೀಲ್ ಮಿಟ್ಟಲ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ವೇಳೆ ಮೋದಿ ಹೇಳಿದ ಆ ಒಂದು ಮಾತು ಏರ್ಟೆಲ್​ಗೆ ಟರ್ನಿಂಗ್ ಪಾಯಿಂಟ್ ಆಯಿತು. ಅಷ್ಟಕ್ಕೂ ಮೋದಿ ಹೇಳಿದ್ದೇನು?

ಏರ್ಟೆಲ್ ಪತನ ತಪ್ಪಿಸಿತು ಪಿಎಂ ಜೊತೆಗಿನ ಆ ಒಂದು ಭೇಟಿ..! ಮಿಟ್ಟಲ್​ಗೆ ಮೋದಿ ಹೇಳಿದ ಆ ಮಾತೇನು?
ಸುನೀಲ್ ಮಿಟ್ಟಲ್, ನರೇಂದ್ರ ಮೋದಿ
Follow us
|

Updated on: May 30, 2024 | 11:54 AM

ನವದೆಹಲಿ, ಮೇ 30: ಎಂಟು ವರ್ಷಗಳ ಹಿಂದೆ ಭಾರತದಲ್ಲಿ ರಿಲಾಯನ್ಸ್ ಜಿಯೋ ಸೃಷ್ಟಿಸಿದ ಧಮಾಕ ಬಹಳ ಜನರಿಗೆ ಇನ್ನೂ ಸಚಿತ್ರವಾಗಿಯೇ ಇದೆ. ದುಬಾರಿಯಾಗಿದ್ದ ಫೋನ್ ಕರೆ, ಡಾಟಾ ದರ ಎಲ್ಲವೂ ಏಕ್​ಧಂ ತಗ್ಗಿಸಿಬಿಟ್ಟಿತ್ತು ಜಿಯೋ. ಇದು ಜಿಯೋದಿಂದ ನಡೆದ ಆತ್ಮಾಹುತಿ ದಾಳಿ ಎಂದೇ ಪ್ರತಿಸ್ಪರ್ಧಿ ಟೆಲಿಕಾಂ ಕಂಪನಿಗಳು ಬಣ್ಣಿಸಿದ್ದವು. ಏರ್​ಟೆಲ್, ವೋಡಾಫೋನ್, ಐಡಿಯಾ ಮೊದಲಾದ ಕಂಪನಿಗಳು ಹೇಳ ಹೆಸರಿಲ್ಲದಂತೆ ಮುಚ್ಚಿಹೋಗಬಹುದೇನೋ ಎನಿಸಿತ್ತು. ಇದು ಅನ್ಯಾಯ ಎಂದು ಭಾರ್ತಿ ಏರ್ಟೆಲ್ ಮುಖ್ಯಸ್ಥ ಸುನೀಲ್ ಮಿಟ್ಟಲ್ ಅಂದು ಬಾರಿ ಬಾರಿ ಹೇಳುತ್ತಿದ್ದುಂಟು. ಆದರೂ ಏರ್​ಟೆಲ್ ಸಾವರಿಸಿಕೊಂಡು ನಿಂತು ಈಗ ಆತ್ಮವಿಶ್ವಾಸದಿಂದ ಮುಂದಡಿ ಇಡುತ್ತದೆ. ಮುಚ್ಚೇ ಹೋಯಿತು ಎನ್ನುವಂತಿದ್ದ ಏರ್ಟೆಲ್ ಸಂಸ್ಥೆ (Bharti Airtel) ಫೀನಿಕ್ಸ್​ನಂತೆ ಮೇಲೆದ್ದು ಬರಲು ಕಾರಣವಾಗಿತ್ತು ಮಿಟ್ಟಲ್ ಮತ್ತು ಮೋದಿ ಮಧ್ಯೆ ನಡೆದ ಆ ಒಂದು ಭೇಟಿ. ಈ ವಿಚಾರವನ್ನು ಮಿಟ್ಟಲ್ (Sunil Mittal) ಅವರೇ ಸ್ಮರಿಸಿಕೊಂಡು ಹೊರಗೆಡವಿದ್ದಾರೆ.

ಮಿಟ್ಟಲ್ ಮತ್ತು ಮೋದಿ ನಡುವೆ ನಡೆದ ಆ ಭೇಟಿ ಏನು?

2018ರ ವರ್ಷ. ಭಾರ್ತಿ ಏರ್ಟೆಲ್ ಸಂಸ್ಥೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಿಸುತ್ತಿದ್ದ ಅವಧಿ. ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ವರ್ಷ. ಆ ವರ್ಷ ಸೆಪ್ಟಂಬರ್​ನಲ್ಲಿ ಏರ್ಟೆಲ್ ಮುಖ್ಯಸ್ಥೆ ಸುನೀಲ್ ಮಿತ್ತಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಾರೆ.

‘ಟೆಲಿಕಾಂ ಉದ್ಯಮದ ಬಗ್ಗೆ ಮಾತನಾಡಲು ಅವರಲ್ಲಿ ಅನುಮತಿ ಕೇಳಿ ಪಡೆದೆ. ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ ಎಂಬ ವಿಚಾರವನ್ನು ಅವರಿಗೆ ತಿಳಿಸಿದೆ. ನಾವು ಮಾರುಕಟ್ಟೆಯಲ್ಲಿ ಕಾಳಗ ಮಾಡಬಲ್ಲೆ, ಆದರೆ ಸರ್ಕಾರದೊಂದಿಗೆ ಕಾಳಗ ಆಗೊಲ್ಲ ಎಂದು ಪ್ರಧಾನಿಯವರಲ್ಲಿ ಹೇಳಿದೆ,’ ಎಂದು ಸುನೀಲ್ ಮಿಟ್ಟಲ್ ವಿವರಿಸಿದ್ದಾರೆ.

ಇದನ್ನೂ ಓದಿ: ಪೇಟಿಎಂ ಖರೀದಿಸಲು ಮುಂದಾದ್ರಾ ಅದಾನಿ? ಇಲ್ಲ ಎನ್ನುತ್ತಿವೆ ಎರಡೂ ಸಂಸ್ಥೆಗಳು

ಮಿಟ್ಟಲ್ ಪ್ರಕಾರ ಆಗ ಸರ್ಕಾರದ ಟೆಲಿಕಾಂ ನೀತಿ, ನಿಯಮಗಳು ಒಂದು ಕಂಪನಿಗೆ ಅನುಕೂಲಕರವಾಗಿವೆ ಎನ್ನುವ ಭಾವನೆ ಇತ್ತು. ಈ ವಿಚಾರವನ್ನು ಅವರು ಸೂಕ್ಷ್ಮವಾಗಿ ಪ್ರಧಾನಿಯವರಲ್ಲಿ ಪ್ರಸ್ತಾಪಿಸಿದರು. ಆದರೆ, ಅದಕ್ಕೆ ನರೇಂದ್ರ ಮೋದಿ ಕೊಟ್ಟ ಉತ್ತರ ಸುನೀಲ್ ಮಿಟ್ಟಲ್ ಮತ್ತು ಏರ್ಟೆಲ್ ಸಂಸ್ಥೆಗೆ ಟರ್ನಿಂಗ್ ಪಾಯಿಂಟ್ ಸಿಗುವಂತೆ ಮಾಡಿತು.

ಸರ್ಕಾರ ಯಾರ ಪರವಾಗಿ ಅಥವಾ ವಿರೋಧವಾಗಿ ನಿಲ್ಲಲ್ಲ. ದೇಶಕ್ಕೆ ಒಳ್ಳೆಯದಾಗಬೇಕು ಎನ್ನುವುದಷ್ಟೇ ಸರ್ಕಾರದ ಆಸಕ್ತಿ. ನೀವು ಮಾರುಕಟ್ಟೆಯಲ್ಲಿ ಹೋರಾಡಿರಿ, ನನಗದು ಬೇಕಿಲ್ಲ. ಆದರೆ, ಸರ್ಕಾರ ಯಾರ ಪರವಾಗಿಯೂ ಇರುವುದಿಲ್ಲ ಎಂಬುದನ್ನು ಖಾತ್ರಿಪಡಿಸಬಲ್ಲೆ ಎಂದು ಪ್ರಧಾನಿ ಭರವಸೆ ನೀಡಿದರು. ನನಗೆ ಬೇಕಾಗಿದ್ದು ಅದೇ. ನಾನವರಿಗೆ ಧನ್ಯವಾದ ಹೇಳಿ ಅಲ್ಲಿಂದ ಬಂದೆ. ಏರ್​ಟೆಲ್​ಗೆ ತಿರುವು ಕೊಟ್ಟ ಸಂದರ್ಭ ಅದು ಎಂದು ಸುನೀಲ್ ಮಿಟ್ಟಲ್ ಹೇಳಿದ್ದಾರೆ.

ಮೋದಿ ಹೇಳಿದ ಆ ಮಾತಿನ ಅರ್ಥವೇನು?

ಸರ್ಕಾರ ಯಾರೊಬ್ಬರ ಪರವಾಗಿ ನಿಲ್ಲುವುದಿಲ್ಲ ಎಂಬುದು ಮತ್ತು ದೇಶಕ್ಕೆ ಒಳಿತಾಗಬೇಕೆಂಬುದು ಸರ್ಕಾರ ಉದ್ದೇಶ ಎಂದು ನರೇಂದ್ರ ಮೋದಿ ಹೇಳಿದ ಆ ಮಾತು ಸುನೀಲ್ ಮಿಟ್ಟಲ್ ಅವರ ಯೋಚನಾಶೈಲಿಯನ್ನೇ ಬದಲಿಸಿತಂತೆ.

ಇದನ್ನೂ ಓದಿ: ನರೇಂದ್ರ ಮೋದಿ ಬರದಿದ್ದರೂ ಸರ್ಕಾರದ ಆರ್ಥಿಕ ನೀತಿ ನಿಲ್ಲುವುದಿಲ್ಲ: ರಘುರಾಮ್ ರಾಜನ್

‘ಈ ಸಂದರ್ಭದಲ್ಲಿ ಕಡಿಮೆ ದರಗಳು ಅವಶ್ಯಕವಾಗಿರಬಹುದು ಎಂದನಿಸತೊಡಗಿತು. ಯಾವುದೇ ಅಜೆಂಡಾ ಇಲ್ಲ ಎಂದು ಗೊತ್ತಾದ ಬಳಿಕ ಬೇರೆ ದೃಷ್ಟಿಯಲ್ಲಿ ಪರಿಸ್ಥಿತಿಯನ್ನು ನೋಡತೊಡಗುತ್ತೇವೆ’ ಎಂದು ಭಾರ್ತಿ ಏರ್ಟೆಲ್ ಸಂಸ್ಥೆಯ ಛೇರ್ಮನ್ ಆದ ಅವರು ತಿಳಿಸುತ್ತಾರೆ.

ಕೆಲವೇ ಉದ್ಯಮಿಗಳ ಪರವಾಗಿ ಸರ್ಕಾರ ಇದೆ ಎನ್ನುವುದು ಸುಳ್ಳು

‘ಸರ್ಕಾರ ಕೆಲವೇ ಮಂದಿಗೆ ಅನುಕೂಲ ಮಾಡಿಕೊಡುತ್ತಿದೆ ಎನ್ನುವ ಬಹಳಷ್ಟು ಹೇಳಿಕೆಗಳನ್ನು ಕೇಳಿರುತ್ತೇವೆ. ಅವೆಲ್ಲಾ ಸತ್ಯಕ್ಕೆ ದೂರವಾದುವು. ದೇಶಕ್ಕೆ ಹಣ ಹರಿದುಬರುತ್ತಿದೆ. ಬಂಡವಾಳ, ಹೂಡಿಕೆಗಳು ಹೆಚ್ಚುತ್ತಿವೆ. ಸ್ಟಾಕ್ ಮಾರ್ಕೆಟ್ ಬೆಳೆಯುತ್ತಿದೆ. ಇಷ್ಟು ದೊಡ್ಡ ವ್ಯಾಲ್ಯೂಯೇಶನ್ ಇರುವುದು ಪ್ರಬಲ, ಸ್ಥಿರ ಮತ್ತು ಸಕ್ರಿಯ ಆರ್ಥಿಕತೆಗೆ ಸಂಕೇತವಾಗಿದೆ’ ಎಂದು ಸುನಿಲ್ ಮಿಟ್ಟಲ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ