ಆರ್​ಬಿಐನಿಂದ ಸರ್ಕಾರಕ್ಕೆ ದಾಖಲೆಯ 2.11 ಲಕ್ಷ ಕೋಟಿ ರೂ ಡಿವಿಡೆಂಡ್

RBI to transfer Over Rs 2.11 Lakh Crore to Central Govt: ಭಾರತೀಯ ರಿಸರ್ವ್ ಬ್ಯಾಂಕ್ 2023-24ರ ಸಾಲಿಗೆ ಸರ್ಕಾರಕ್ಕೆ 2.11 ಲಕ್ಷ ಕೋಟಿ ರೂ ಡಿವಿಡೆಂಡ್ ಕೊಡಲು ನಿರ್ಧರಿಸಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ನೇತೃತ್ವದಲ್ಲಿ ನಡೆದ ಸಭೆಯೊಂದರಲ್ಲಿ ಈ ಕ್ರಮಕ್ಕೆ ಅನುಮೋದನೆ ಸಿಕ್ಕಿದೆ. ಈ ಬಾರಿ ಫಾರೆಕ್ಸ್ ನಿಧಿಯಲ್ಲಿ ಹೆಚ್ಚಳ ಆಗಿರುವುದೂ ಸೇರಿದಂತೆ ವಿವಿಧ ಕಾರಣಗಳಿಂದ ಆರ್​ಬಿಐ ಡಿವಿಡೆಂಡ್ ಹೆಚ್ಚಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಸರ್ಕಾರಕ್ಕೆ ಆರ್​ಬಿಐ ನೀಡಲಿರುವ ಲಾಭಾಂಶದಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ.

ಆರ್​ಬಿಐನಿಂದ ಸರ್ಕಾರಕ್ಕೆ ದಾಖಲೆಯ 2.11 ಲಕ್ಷ ಕೋಟಿ ರೂ ಡಿವಿಡೆಂಡ್
ಆರ್​ಬಿಐ

Updated on: May 22, 2024 | 4:54 PM

ನವದೆಹಲಿ, ಮೇ 22: ಆರ್​ಬಿಐನಿಂದ ಸರ್ಕಾರಕ್ಕೆ ನೀಡಲಾಗುವ ಲಾಭಾಂಶದಲ್ಲಿ (dividend) ಎರಡು ಪಟ್ಟು ಹೆಚ್ಚಾಗಿದೆ. 2023-24ರ ಸಾಲಿಗೆ ಆರ್​ಬಿಐ 2.11 ಲಕ್ಷ ಕೋಟಿ ರೂ ಮೊತ್ತದ ಡಿವಿಡೆಂಡ್ ಅನ್ನು ಸರ್ಕಾರಕ್ಕೆ ಪಾವತಿಸಲಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಡಿವಿಡೆಂಡ್ ದ್ವಿಗುಣಗೊಂಡಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ನಡೆದ ರಿಸರ್ವ್ ಬ್ಯಾಂಕ್​ನ ಕೇಂದ್ರೀಯ ನಿರ್ದೇಶಕರ ಮಂಡಳಿಯ (RBI Central Board of directors) 608ನೇ ಸಭೆಯಲ್ಲಿ ಸರ್ಕಾರಕ್ಕೆ 2.11 ಲಕ್ಷ ಕೋಟಿ ರೂ ಲಾಭಾಂಶ ಒದಗಿಸುವ ನಿರ್ಧಾರಕ್ಕೆ ಸಮ್ಮತಿ ಕೊಡಲಾಗಿದೆ. ಆರ್​ಬಿಐನಿಂದ ಈವರೆಗೆ ನೀಡಲಾಗಿರುವ ಗರಿಷ್ಠ ಲಾಭಾಂಶ ಇದಾಗಲಿದೆ.

ಬಿಮಲ್ ಜಲನ್ ಕಮಿಟಿ ಶಿಫಾರಸು ಮೇರೆಗೆ ರೂಪಿಸಲಾಗಿರುವ ಎಕನಾಮಿಕ್ ಕ್ಯಾಪಿಟಲ್ ಫ್ರೇಮ್​ವರ್ಕ್ (ಇಸಿಎಫ್) ಆಧಾರದ ಮೇಲೆ ಆರ್​ಬಿಐ ಈ ದಾಖಲೆ ಮೊತ್ತದ ಡಿವಿಡೆಂಡ್ ಹಣವನ್ನು ಸರ್ಕಾರಕ್ಕೆ ಒದಗಿಸಲು ನಿರ್ಧರಿಸಿದೆ. ಅಧಿಕಾರ ಫಾರೆಕ್ಸ್ ಮೀಸಲು ನಿಧಿ ಸೇರಿದಂತೆ ವಿವಿಧ ಅಂಶಗಳು ಆರ್​ಬಿಐನ ಹೆಚ್ಚುವರಿ ಡಿವಿಡೆಂಡ್ ವರ್ಗಾವಣೆಗೆ ಕಾರಣವಾಗಿವೆ ಎನ್ನಲಾಗಿದೆ.

ಈಗ ಅಧಿಕ ಡಿವಿಡೆಂಡ್ ಮೊತ್ತವು 2024-25ರ ಸರ್ಕಾರದ ಖಾತೆಗಳಲ್ಲಿ ನಮೂದಾಗಲಿದೆ. ಇದರಿಂದ ಸರ್ಕಾರದ ಬಳಿ ಹೆಚ್ಚು ಹಣದ ಹರಿವು ಇರಲಿದೆ. ಬಂಡವಾಳ ವೆಚ್ಚಕ್ಕೆ ಹೆಚ್ಚು ಹಣ ಸಿಗಲಿದೆ.

ಇದನ್ನೂ ಓದಿ: ಹಡಗು ಅಲ್ಲಿಂದ ಇಲ್ಲಿ ಬರುವಷ್ಟರಲ್ಲಿ ಬೆಲೆ ದುಪ್ಪಟ್ಟು; ಯುಪಿಎ ಟೈಮಲ್ಲಿ ಅದಾನಿ ಬಿಸಿನೆಸ್ ಹೇಗಿತ್ತು ನೋಡಿ

ಎಕನಾಮಿಕ್ ಕ್ಯಾಪಿಟಲ್ ಫ್ರೇಮ್​ವರ್ಕ್ ಪ್ರಕಾರ 2023-24ಕ್ಕೆ ಕಂಟಿಂಜೆಂಜ್ ರಿಸ್ಕ್ ಬಫರ್ (ಸಿಆರ್​ಬಿ) ಅನ್ನು ಶೇ. 6.5ಕ್ಕೆ ಹೆಚ್ಚಿಸಲಾಗಿತ್ತು. ಕಂಟಿಂಜೆಂಟ್ ರಿಸ್ಕ್ ಬಫರ್ ಎಂಬುದು ಅನಿರೀಕ್ಷಿತ ಹಣಕಾಸು ಪರಿಸ್ಥಿತಿಯನ್ನು ಎದುರಿಸಲು ಇರುವ ತುರ್ತು ನಿಧಿಯಾಗಿದೆ. 2018-19ರಿಂದ 2021-22ರವರೆಗೆ ಅಂದಿನ ಸ್ಥೂಲ ಆರ್ಥಿಕ ಪರಿಸ್ಥಿತಿ ಕಾರಣದಿಂದಾಗಿ ಸಿಆರ್​ಬಿಯನ್ನು ಶೇ. 5.50ಕ್ಕೆ ಇಳಿಸಲಾಗಿತ್ತು. ಆರ್ಥಿಕ ಪರಿಸ್ಥಿತಿ ಉತ್ತಮಗೊಂಡಂತೆ ಸಿಆರ್​ಬಿಯನ್ನು ಶೇ. 6 ಮತ್ತು ಈಗ ಶೇ. 6.50ಕ್ಕೆ ಹೆಚ್ಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us