ಕಡಿಮೆ ಆಗಿದೆ ಮಧ್ಯಮ ವರ್ಗದವರ ತೆರಿಗೆ ಪಾವತಿ; ಹೆಚ್ಚು ಆದಾಯದ ಗುಂಪಿನವರಿಂದ ಹೆಚ್ಚು ತೆರಿಗೆ

ITR filing interesting data: ಕಳೆದ ಹತ್ತು ವರ್ಷದಲ್ಲಿ ಆದಾಯ ತೆರಿಗೆ ಪಾವತಿದಾರರ ಪಾವತಿಯಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಸರ್ಕಾರಕ್ಕೆ ಸಿಗುವ ತೆರಿಗೆ ಆದಾಯದಲ್ಲಿ ಕಡಿಮೆ ಇನ್ಕಮ್ ಇರುವ ಜನರಿಂದ ಸಿಗುವ ಆದಾಯ ಪ್ರಮಾಣ ಕಡಿಮೆ ಆಗಿದೆ. 50 ಲಕ್ಷ ರೂಗೂ ಹೆಚ್ಚು ವಾರ್ಷಿಕ ಆದಾಯ ಇರುವ ತೆರಿಗೆ ಪಾವತಿದಾರರ ಸಂಖ್ಯೆ 10 ವರ್ಷದಲ್ಲಿ ಐದು ಪಟ್ಟು ಬೆಳೆದಿದೆ.

ಕಡಿಮೆ ಆಗಿದೆ ಮಧ್ಯಮ ವರ್ಗದವರ ತೆರಿಗೆ ಪಾವತಿ; ಹೆಚ್ಚು ಆದಾಯದ ಗುಂಪಿನವರಿಂದ ಹೆಚ್ಚು ತೆರಿಗೆ
ಆದಾಯ ತೆರಿಗೆ

Updated on: Nov 14, 2024 | 12:28 PM

ನವದೆಹಲಿ, ನವೆಂಬರ್ 14: ಹತ್ತು ಲಕ್ಷ ರೂಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿಗಳಿಂದ ಸಿಗುತ್ತಿರುವ ಇನ್ಕಮ್ ಟ್ಯಾಕ್ಸ್ ಪ್ರಮಾಣ ಕಡಿಮೆ ಆಗುತ್ತಿದೆ. ಆದಾಯ ತೆರಿಗೆ ಇಲಾಖೆಯ ಒಟ್ಟಾರೆ ಕಲೆಕ್ಷನ್​ನಲ್ಲಿ ಈ ಕಡಿಮೆ ಇನ್ಕಮ್ ಗ್ರೂಪ್​ನಿಂದ ಬರುವ ಕೊಡುಗೆಯಲ್ಲಿ ಇಳಿಕೆ ಆಗಿದೆ. ಈ ಹಿಂದೆ ಈ ಆದಾಯ ಸ್ತರದ ಜನರಿಂದ ಬರುವ ತೆರಿಗೆ ಪ್ರಮಾಣ ಕಳೆದ ಹತ್ತು ವರ್ಷದಲ್ಲಿ ಶೇ. 10ರಿಂದ ಶೇ. 6.22ಕ್ಕೆ ಇಳಿದಿದೆ. ಇದೇ ವೇಳೆ, ಹೆಚ್ಚು ಆದಾಯದ ಗುಂಪಿನವರ ತೆರಿಗೆ ಕೊಡುಗೆ ಹೆಚ್ಚುತ್ತಿದೆ. ಅದರಲ್ಲೂ 50 ಲಕ್ಷ ರೂಗಿಂತ ಹೆಚ್ಚು ಆದಾಯ ಹೊಂದಿರುವ ಗುಂಪಿನ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಿದೆ. ಈ ಗುಂಪಿನಿಂದ ಸಿಗುವ ತೆರಿಗೆ ಸಂಗ್ರಹದಲ್ಲಿ ಮೂರು ಪಟ್ಟು ಹೆಚ್ಚಿದೆ.

ಐಟಿ ರಿಟರ್ನ್ಸ್ ದತ್ತಾಂಶದ ಪ್ರಕಾರ 2013-14ರಲ್ಲಿ 50 ಲಕ್ಷ ರೂಗೂ ಅಧಿಕ ವಾರ್ಷಿಕ ಆದಾಯ ಇರುವ ವ್ಯಕ್ತಿಗಳ ಸಂಖ್ಯೆ 1.85 ಲಕ್ಷ ಇತ್ತು. 2023-24ರಲ್ಲಿ ಇದೇ ಆದಾಯ ಹೊಂದಿರುವ 9.39 ಲಕ್ಷ ಜನರು ಐಟಿಆರ್ ಫೈಲಿಂಗ್ ಮಾಡಿದ್ದಾರೆ. ಹತ್ತು ವರ್ಷದಲ್ಲಿ ಇವರ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಾಗಿದೆ. ಈ ಗುಂಪಿನ ತೆರಿಗೆ ಬಾಧ್ಯತೆ 2014ರಲ್ಲಿ 2.52 ಲಕ್ಷ ಕೋಟಿ ರೂ ಇತ್ತು. ಅದು 2024ರಲ್ಲಿ 9.62 ಲಕ್ಷ ಕೋಟಿ ರೂ ಆಗಿದೆ. ಈ ಅಧಿಕ ಆದಾಯ ಗುಂಪಿನ ತೆರಿಗೆ ಬಾಧ್ಯತೆಯು ಮೂರು ಪಟ್ಟು ಹೆಚ್ಚಾಗಿರುವುದು ಗೊತ್ತಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಒಂದು ವರ್ಷದಲ್ಲಿ ಆದಾಯ ತೆರಿಗೆ ಇಲಾಖೆಗೆ ಸಿಗುವ ಆದಾಯದಲ್ಲಿ ಈ 50 ಲಕ್ಷ ರೂ ಆದಾಯ ಗುಂಪಿನ ಜನರ ಕೊಡುಗೆಯೇ ಶೇ. 76ರಷ್ಟಿದೆ. ಇದರಿಂದ ಮಧ್ಯಮ ವರ್ಗದವರಿಗೆ ತೆರಿಗೆ ಹೊರೆ ಕಡಿಮೆ ಆದಂತೆ ಕಾಣುತ್ತಿದೆ. 2014ರಿಂದ ಸರ್ಕಾರ ಸತತವಾಗಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುತ್ತಾ ಬಂದಿರುವುದು ಹಾಗು ತೆರಿಗೆ ಉಳಿತಾಯಕ್ಕೆ ಸಾಕಷ್ಟು ಅವಕಾಶಗಳನ್ನು ನೀಡಿರುವುದೂ ಕಾರಣವಿರಬಹುದು.

ಇದನ್ನೂ ಓದಿ: ಪಿಎಂ ಇಂಟರ್ನ್​ಶಿಪ್ ಸ್ಕೀಮ್: ನ. 15, ಶುಕ್ರವಾರ ನೊಂದಣಿಗೆ ಕೊನೆಯ ದಿನ; ತ್ವರೆ ಮಾಡಿ…

2014ರಲ್ಲಿ ವರ್ಷಕ್ಕೆ 2 ಲಕ್ಷ ರೂ ಆದಾಯ ಹೊಂದಿರುವ ವ್ಯಕ್ತಿ ಇನ್ಕಮ್ ಟ್ಯಾಕ್ಸ್ ಕಟ್ಟಬೇಕಿತ್ತು. ಈಗ ವರ್ಷಕ್ಕೆ 7 ಲಕ್ಷ ರೂವರೆಗೆ ಆದಾಯ ಹೊಂದಿರುವ ವ್ಯಕ್ತಿಯೂ ತೆರಿಗೆ ಬಾಧ್ಯತೆಯಿಂದ ವಿನಾಯಿತಿ ಪಡೆಯಲು ಅವಕಾಶ ಇದೆ. ಟ್ಯಾಕ್ಸ್ ಡಿಡಕ್ಷನ್, ಎಕ್ಸೆಂಪ್ಷನ್​ಗಳು ಕಡಿಮೆ ಆದಾಯದ ಗುಂಪಿನ ಜನರಿಗೆ ಅನುಕೂಲ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us